ಉಕ್ರೇನ್ ತೊರೆಯಲು ಭಾರತ ಸರ್ಕಾರ ಸಲಹೆ ನೀಡಿದರೂ ದೇಶ ತೊರೆಯದ ವಿದ್ಯಾರ್ಥಿಗಳು: ವರದಿ
ಡೆಹ್ರಾಡೂನ್: “ಉಕ್ರೇನ್ ನಲ್ಲಿ ರಷ್ಯಾದ ದಾಳಿಗಳು ಉಲ್ಬಣಗೊಂಡ ನಂತರ ಯುದ್ಧಪೀಡಿತ ಉಕ್ರೇನ್ ಅನ್ನು ತಕ್ಷಣವೇ ತೊರೆಯಿರಿ" ಎಂದು ಭಾರತ ಸರ್ಕಾರದ ಸಲಹೆ ನೀಡಿದ ಹೊರತಾಗಿಯೂ, ಕೆಲವು ತಿಂಗಳ ಹಿಂದೆ ಹಿಂತಿರುಗಿದ 1,500 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಬಯಸುವುದಾಗಿ ಹೇಳಿದ್ದು, ದೇಶ ತೊರೆಯಲು ನಿರಾಕರಿಸುತ್ತಿಸದ್ದಾರೆ ಎಂದು ವರದಿಯಾಗಿದೆ. "ಶವಪೆಟ್ಟಿಗೆಯಲ್ಲಿ ಹಿಂತಿರುಗಿದರೂ" ಸರಿ, ಅಧ್ಯಯನ ಪೂರ್ತಿಗೊಳಿಸಿ ಬರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆಂದು timesofindia ವರದಿ ಹೇಳಿದೆ.
"ಕೆಲವೇ ತಿಂಗಳ ಹಿಂದೆ ಇಲ್ಲಿಗೆ ಹಿಂತಿರುಗಿದ ನಂತರ, ನಾವು ಎಲ್ಲ ರೀತಿಯ ವಿರೋಧಾಭಾಸಗಳನ್ನು ಎದುರಿಸಿದ್ದೇವೆ. ಒಂದೋ ನಾವು ನಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಅಥವಾ ನಡೆಯುತ್ತಿರುವ ಪ್ರಕ್ಷುಬ್ಧತೆಯಲ್ಲಿ ನಾವು ಸತ್ತರೆ ಶವಪೆಟ್ಟಿಗೆಯಲ್ಲಿ ಮಾತ್ರ ಭಾರತಕ್ಕೆ ಹಿಂತಿರುಗುತ್ತೇವೆ," ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾರೆ.
ಭಾರತ ಸರ್ಕಾರವು ಈಗಾಗಲೇ ದೇಶದಲ್ಲಿರುವ ವೈದ್ಯಕೀಯ ಸಂಸ್ಥೆಗಳಲ್ಲಿ ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವದರಿಂದ ಉಕ್ರೇನ್ನಲ್ಲಿಯೇ ಉಳಿಯುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
"ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ಮೇಲ್ವಿಚಾರಣೆ ಮಾಡುವ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC), ಅವರು ಆನ್ಲೈನ್ ತರಗತಿಗಳ ಮೂಲಕ ಪಡೆದ ಪದವಿಯನ್ನು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಎಲ್ಲಾ ಅಂಶಗಳಿಂದಾಗಿ, ಆಫ್ಲೈನ್ ಕೋರ್ಸ್ ಪೂರ್ಣಗೊಳಿಸಲು ಉಕ್ರೇನ್ಗೆ ಹಿಂತಿರುಗುವುದನ್ನು ಬಿಟ್ಟು ನಮಗೆ ಯಾವುದೇ ಆಯ್ಕೆಯಿಲ್ಲ," ಎಂದು ವಿದ್ಯಾರ್ಥಿ ಶರ್ಮಾ ಹೇಳಿದ್ದಾರೆ.
ಉತ್ತರಾಖಂಡ್ನಲ್ಲಿ ಮನೆಯಿಂದಲೇ ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಿರುವ ವೈದ್ಯಕೀಯ ವಿದ್ಯಾರ್ಥಿ ಆಶಿಶ್ ನೌಟಿಯಾಲ್, "ನಾವು ನವೆಂಬರ್ 1 ಕ್ಕೆ ಕಾಯುತ್ತಿದ್ದೇವೆ, ಆನ್ಲೈನ್ ವೈದ್ಯಕೀಯ ಅಧ್ಯಯನವನ್ನು ಘೋಷಿಸಲು ಸರ್ಕಾರವನ್ನು ಒತ್ತಾಯಿಸಿ ಕೆಲವು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ." ಎಂದು ಹೇಳಿದ್ದಾರೆ.