ಸರಕಾರಿ ಜಮೀನು ಖಾಸಗಿ ವ್ಯಕ್ತಿಗಳ ಹೆಸರಿಗೆ

ಅಕ್ರಮದಲ್ಲಿ ಭೂಮಿ ತಂತ್ರಾಂಶದ ಕಚೇರಿ ಭಾಗಿ?

Update: 2022-10-28 03:22 GMT

ಖಾಸಗಿ ವ್ಯಕ್ತಿಗಳು ಭೂಮಿ ತಂತ್ರಾಂಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಾಲೋಚ ಕರ ಮೂಲಕ ದತ್ತಾಂಶಗಳನ್ನು ಪಡೆದು ಖಾಸಗಿ ಸೈಬರ್ ಸೆಂಟರ್‌ಗಳಲ್ಲಿ ಸರಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮ

ವಾಗಿ ಪಹಣಿಗಳನ್ನು ತಯಾರಿಸಿ ರುವ ಕುರಿತು ಇತರ ಜಿಲ್ಲೆಗಳಲ್ಲಿ ಖಾಸಗಿ ವ್ಯಕ್ತಿಗಳು ಮಾಡಿರ ಬಹುದು ಎಂದು ಸರಕಾರಿ ಜಮೀ ನುಗಳ ಸಂರಕ್ಷಣಾ ಸಮಿತಿಯು ಅನುಮಾನ ವ್ಯಕ್ತಪಡಿಸಿದೆ.

ಬೆಂಗಳೂರು: ಭೂಮಿ ಉಸ್ತುವಾರಿ ಕೋಶದಲ್ಲಿ ಕಾರ್ಯನಿರ್ವ ಹಿಸುತ್ತಿರುವ ಸಮಾಲೋಚಕರನ್ನೇ ಬಳಸಿಕೊಂಡು ರಾಮನಗರ ಜಿಲ್ಲೆಯಲ್ಲಿನ ಸರಕಾರಿ ಭೂಮಿಯನ್ನು ಕಬಳಿಸಿರುವ ಪ್ರಕರಣವು ಮುನ್ನೆಲೆಗೆ ಬಂದ ಬೆನ್ನಲ್ಲೇ ಇಂತಹ ಪ್ರಕರಣಗಳು ಇಡೀ ರಾಜ್ಯಾದ್ಯಂತ ಕಂಡು ಬಂದಿವೆ ಎಂದು ಸರಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯು ಅನುಮಾನಿಸಿದೆ.

ಭೂಮಿ ತಂತ್ರಾಂಶದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಾಲೋಚಕರ ಮೂಲಕವೇ ದತ್ತಾಂಶಗಳನ್ನು ಕದಿಯಲಾಗುತ್ತಿದೆ. ಇದನ್ನು ಬಳಸಿಕೊಂಡು ಸರಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಪಹಣಿಗಳನ್ನು ತಯಾರಿಸಲಾಗುತ್ತಿದೆ ಎಂದು ಸಮಿತಿಯು ಶಂಕಿಸಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಭೂಮಿ ಉಸ್ತುವಾರಿ ಕೋಶದ ನಿರ್ದೇಶಕರಿಗೆ ೨೦೨೨ರ ಅಕ್ಟೋಬರ್ ೧೩ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿಯು
‘the-file.in’ಗೆ ಲಭ್ಯವಾಗಿದೆ.

ಅದರಂತೆ ರಾಜ್ಯದ ಇತರ ಜಿಲ್ಲಾ ವ್ಯಾಪ್ತಿಯಲ್ಲಿ ಸರಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಪಹಣಿಗಳನ್ನು ತಯಾರಿಸಿರುವ ಕುರಿತು ಪರಿಶೀಲಿಸಿ ಕಾನೂನು ರೀತಿ ಅಗತ್ಯ ಕ್ರಮಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.
ಭೂಮಿ ತಂತ್ರಾಂಶವನ್ನು ದುರ್ಬಳಕೆಯಾಗದ ರೀತಿಯಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.

ಸರಕಾರಿ ಸರ್ವರ್ ಹ್ಯಾಕ್ ಮಾಡಿ ಆರ್‌ಟಿಸಿ ಮಾಡಿಸಿ ಅಸಲಿ ದಾಖಲೆ ಎಂಬಂತೆ ಭೂಮಿ ಮಾರಾಟ ಮಾಡು ತ್ತಿದ್ದ ೭ ಮಂದಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದರು.

ಇವರೆಲ್ಲರೂ ರಿಯಲ್ ಎಸ್ಟೇಟ್ ಏಜೆಂಟ್, ಸೈಬರ್ ಮಾಲಕ, ಬ್ರೋಕರ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಹಾರ್ಡ್‌ವೇರ್ ಇಂಜಿನಿಯರ್ ಆಗಿದ್ದರು.

ಓರ್ವ ಜಮೀನು ಖರೀದಿದಾರ ಸೇರಿದಂತೆ 7 ಮಂದಿ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಸರಕಾರಿ ಸರ್ವರ್ ನಲ್ಲಿರುವ ತಂತ್ರಾಂಶ
ಗಳ ಲೋಪಗಳಿಂದಾಗಿ ಸರಕಾರಿ ಸರ್ವರ್ ಹ್ಯಾಕ್ ಮಾಡಿ ದಾಖಲೆ ತಿದ್ದಲಾಗುತ್ತಿತ್ತು. ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಮಾಡಲಾಗದ ಕೆಲಸವನ್ನು ಮಾಡುತ್ತಿದ್ದ ಆರೋಪಿಗಳು ಫಲಾನುಭವಿಗಳಿಗೆ ಆರ್‌ಟಿಸಿ ಕೊಡುತ್ತಿದ್ದರು.

ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ತಾಲೂಕಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬರುವ ಖಾಸಗಿ ವ್ಯಕ್ತಿಗಳ ಜತೆ ಶಾಮೀಲಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಪ್ರಕರಣದಲ್ಲಿಯೂ ಚಾಮರಾಜನಗರದ ಅಂದಿನ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರ ವಿರುದ್ಧವೂ ಸರಕಾರಕ್ಕೆ ದೂರು ಸಲ್ಲಿಕೆಯಾಗಿತ್ತು.

ಖಾಸಗಿ ವ್ಯಕ್ತಿ ನೀಡಿದ್ದ ದಾಖಲೆಗಳನ್ನೇ ಆಧಾರವಾಗಿಟ್ಟುಕೊಂಡು (ಆರ್‌ಎಂ೦೯/೧೮-೧೯ ದಿನಾಂಕ 19-07-2021)ರಂದು ಆದೇಶ ಹೊರಡಿಸಿದ್ದರು. ಈ ಸಂಬಂಧ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಕಂದಾಯ ಇಲಾಖೆಗೆ ವರದಿಯನ್ನು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಹಾಗೂ ಮೀನುಕುಂಟೆ ಗ್ರಾಮಗಳಲ್ಲಿ 95.13 ಎಕರೆ ಜಮೀನನ್ನು ಕಾನೂನುಬಾಹಿರವಾಗಿ ಮ್ಯುಟೇಷನ್ ಮಾಡಲಾಗಿತ್ತು. ಈ ವಿಶೇಷ ತಹಶೀಲ್ದಾರ್ ಕೆ.ಎನ್. ನಾರಾಯಣಪ್ಪ, ಹಕ್ಕು ದಾಖಲೆ ಶಿರಸ್ತೆದಾರ್ ಸಿ.ಹೆಚ್. ಸೂಲಯ್ಯ, ವಿಷಯ ನಿರ್ವಾಹಕ ಹನುಮಂತಯ್ಯ, ರಾಜಸ್ವ ನಿರೀಕ್ಷಕ ಶಾಂತವೀರೇಗೌಡ, ನಿವೃತ್ತ ಗ್ರಾಮ ಲೆಕ್ಕಿಗ ನಾರಾಯಣರೆಡ್ಡಿ, ರಾಜಸ್ವ ನಿರೀಕ್ಷಕ ನಾರಾಯಣಸ್ವಾಮಿ ಮತ್ತಿತರರು ಭಾಗಿಯಾಗಿದ್ದರು. ಈ ಪ್ರಕರಣ ಸಂಬಂಧ ಸರಕಾರಕ್ಕೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ವರದಿಯನ್ನೇ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

ಅದೇ ರೀತಿ ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸರಕಾರಿ ಗೋಮಾಳ, ನೀರಿನ ಕುಂಟೆ, ಪಿ-ನಂಬರ್ ಇರುವ ಸ್ವತ್ತುಗಳನ್ನು ಗ್ರಾಮ ಪಂಚಾಯತ್‌ನ ಪಿಡಿಒ, ಎಸ್‌ಡಿಎ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಇ-ಸ್ವತ್ತು ನೋಂದಣಿ ಮಾಡಿದ್ದ ಪ್ರಕರಣದಲ್ಲೂ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಈ ಸಂಬಂಧ ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪೂರ್ವಾನುಮತಿಯನ್ನೂ ನೀಡಿಲ್ಲ ಎಂದು ಗೊತ್ತಾಗಿದೆ.

ಹಾಗೆಯೇ ದೇವನಹಳ್ಳಿ ತಾಲೂಕಿನ ಧರ್ಮಪುರ ಗ್ರಾಮದ ಸರ್ವೆ ನಂಬರ್ 1 ಮತ್ತು 22ರಲ್ಲಿ ಅಕ್ರಮವಾಗಿ ಖೊಟ್ಟಿ ದಾಖಲೆ ಗಳನ್ನು ಸೃಷ್ಟಿಸಿ 18 ಜನರಿಗೆ ಖಾತೆ ಮಾಡಿಕೊಡಲಾಗಿದೆ. ಈ ಪ್ರಕರಣದಲ್ಲಿಯೂ ಸರಕಾರಿ ಅಧಿಕಾರಿಗಳು ಭಾಗಿಯಾಗಿದ್ದರೂ ಲೋಕಾಯುಕ್ತಕ್ಕೆ ವರದಿಯನ್ನೂ ನೀಡಿಲ್ಲ.

Similar News