ಕೇಂದ್ರ ಸರಕಾರದ ಯೋಜನೆ ಅನುಷ್ಠಾನಕ್ಕೆ ಸಾಮಾನ್ಯ ಸೇವಾ ಕೇಂದ್ರ ಆರಂಭ: ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ
ಮಂಗಳೂರು, ಅ.28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ದ.ಕ. ಜಿಲ್ಲೆ ಅಗ್ರಗಣ್ಯ ಸಾಧನೆ ಮಾಡಿದೆ. ಕೇಂದ್ರ ಸರಕಾರದ ಜನೋಪಯೋಗಿ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮುಂದಿನ ಆರು ತಿಂಗಳಲ್ಲಿ ದೇಶಾದ್ಯಂತ 60 ಸಾವಿರ ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ) ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಂಗಳೂರು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳು ಕದ್ರಿ ವಲಯ ಇವುಗಳ ಜಂಟಿ ಆಶ್ರಯದಲ್ಲಿ ನಗರದ ಕದ್ರಿ ಶ್ರೀ ಮಂಜುನಾಥ ದೇವಳದ ಆವರಣದಲ್ಲಿ ಶುಕ್ರವಾರ ನಡೆದ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಹಾಗು ಸಾಧನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 40 ಲಕ್ಷ ಮಂದಿಗೆ ಇ ಶ್ರಮ್, 3 ಲಕ್ಷ ಮಂದಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್, 20 ಸಾವಿರ ಮಂದಿಗೆ ಕಿಸಾನ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ದುಡಿಮೆ ಜಾಸ್ತಿ ಮಾಡಿ ಉಳಿತಾಯವನ್ನೂ ಹೆಚ್ಚು ಮಾಡುವ ಗುರಿ ಹೊಂದಿರಬೇಕು. ಆರೋಗ್ಯ ರಕ್ಷಾ ವಿಮೆಯಡಿ ೫ ಲಕ್ಷ ರೂ.ವರೆಗೆ ಆಸ್ಪತ್ರೆ ಬಿಲ್ಲನ್ನು ಸರಕಾರವೇ ಭರಿಸುತ್ತದೆ. ಸಣ್ಣ ಪುಟ್ಟ ಕಾಯಿಲೆಗಳಿಗೂ ವಿಮಾ ಮೊತ್ತ ಭರಿಸಲು ಸಾಧ್ಯವಿದೆ.ಸಾಲ ಪಡೆದ ಕೂಡಲೇ ವಿಮಾ ಸೌಲಭ್ಯ ಕೂಡ ಕಲ್ಪಿಸಲಾಗುತ್ತಿದ್ದು, ವೃದ್ಧರಿಗೂ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಡಾ.ಡಿ.ವೀರೇದ್ರ ಹೆಗ್ಗಡೆ ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕದ್ರಿ ಶ್ರೀ ಮಂಜುನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ಡಾ.ಎ.ಜೆ.ಶೆಟ್ಟಿ, ಮಂಗಳೂರು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ಚೌಟ, ಬ್ಯಾಂಕ್ ಆಫ್ ಬರೋಡದ ಉಪ ವಲಯ ಮುಖ್ಯಸ್ಥ ಗೋಪಾಲಕೃಷ್ಣ ಆರ್., ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮನಪಾ ಸದಸ್ಯ ಮನೋಹರ್ ಶೆಟ್ಟಿ, ಶಕೀಲ ಕಾವ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜೈನ್ ಟ್ರಾವೆಲ್ಸ್ನ ರತ್ನಾಕರ ಜೈನ್, ಕದ್ರಿ ವಲಯ ಅಧ್ಯಕ್ಷ ಸುಚಿತ್ರ ಶಿವಾನಂದ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಗುರುಪ್ರಸಾದ್, ಕದ್ರಿ ದೇವಳದ ಆಡಳಿತಾಧಿಕಾರಿ ಜಯಮ್ಮ ಉಪಸ್ಥಿತರಿದ್ದರು.
ಈ ಸಂದರ್ಭ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಒಕ್ಕೂಟದ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ನೆರವೇರಿಸಲಾಯಿತು. ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿದರು. ಯೋಜನಾಧಿಕಾರಿ ಚೆನ್ನಕೇಶವ ವಂದಿಸಿದರು. ಉಳ್ಳಾಲ ವಲಯ ಮೇಲ್ವಿಚಾರಕಿ ಜಯಂತಿ ಹಾಗು ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.