ಬಿಜೆಪಿಯ ಮುಖ್ಯ ಕಾರ್ಯಾಲಯದ ಕಾಮಗಾರಿ ಸ್ಥಗಿತಕ್ಕೆ ದಿಲ್ಲಿ ಸರಕಾರ ಆದೇಶ

ವಾಯು ಮಾಲಿನ್ಯ ತಡೆಗೆ ವಿಧಿಸಿದ್ದ ಆದೇಶದ ಉಲ್ಲಂಘನೆ, ಗುತ್ತಿಗೆದಾರ ಸಂಸ್ಥೆಗೆ 5 ಲಕ್ಷ ರೂ.ದಂಡ

Update: 2022-11-01 18:13 GMT

ಹೊಸದಿಲ್ಲಿ, ನ.1: ಇಲ್ಲಿನ ಬಿಜೆಪಿ ಮುಖ್ಯ ಕಾರ್ಯಾಲಯದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿ ದಿಲ್ಲಿ ಸರಕಾರ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಲಾರ್ಸೆನ್‌ಆ್ಯಂಡ್ ಟರ್ಬೊ ಸಂಸ್ಥೆಗೆ 5 ಲಕ್ಷ ರೂ. ದಂಡ ವಿಧಿಸಿದೆ.

ನಗರದಲ್ಲಿ ವಾಯುಗುಣಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿ ಹಾಗೂ ಕಟ್ಟಡಧ್ವಂಸ ಕಾರ್ಯಾಚರಣೆಗಳ ಮೇಲೆ ವಿಧಿಸಲಾಗಿದ್ದ ನಿಷೇಧದ ಉಲ್ಲಂಘನೆಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ದಿಲ್ಲಿ ಸರಕಾರದ ಪರಿಸರ ಸಚಿವ ಗೋಪಾಲ್ ರಾಯ್ ಮಂಗಳವಾರ ತಿಳಿಸಿದ್ದಾರೆ.
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಕಾರ್ಯಾಲಯ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ ವಾಪಾಸಾಗುತ್ತಿದ್ದಾಗ ದೀನದಯಾಳ್ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿ ಮುಖ್ಕಾರ್ಯಾಲಯದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದನ್ನು ಸಚಿವ  ಗೋಪಾಲ್ ರಾಯ್  ಗಮನಿಸಿದ್ದರೆನ್ನಲಾಗಿದೆ.

‘‘ಬಿಜೆಪಿಯ ರಾಷ್ಟ್ರೀಯ ಮುಖ್ಯ ಕಾರ್ಯಾಲಯದ ಸಂಬಂಧಿಸಿದ ಕಾಮಗಾರಿಗಳನ್ನು ನಡೆಸುತ್ತಿರುವುದಾಗಿ ಕಾರ್ಮಿಕರು ತನಗೆ ತಿಳಿಸಿದ್ದಾರೆ.  ಇದು ವಾಯುಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎ)ದ  ಆದೇಶಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ನಾವು ಈ ಕಾಮಗಾರಿಯನ್ನು ನಿಲ್ಲಿಸುವಂತೆ ಆದೇಶಿಸಿದ್ದೇವೆ ಹಾಗೂ ಕಾಮಗಾರಿ ಸಂಸ್ಥೆಯಾದ ಲಾರ್ಸೆನ್  ಆ್ಯಂಡ್ ಟರ್ಬೊಗೆ 5 ಲಕ್ಷ ರೂ. ದಂಡ ವಿಧಿಸಿದ್ದೇವೆ’’ ಎಂದು ರಾಯ್ ಸುದ್ದಿಗಾರರಿಗೆ ತಿಳಿಸಿದರು.

ವಾಯುಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ)ವು 2021ರಲ್ಲಿ ರಚನೆಯಾದ ಶಾಸನಾತ್ಮಕ ಸಂಸ್ಥೆಯಾಗಿದೆ. ವಾಯು ಮಾಲಿನ್ಯದ ಸಮಸ್ಯೆಯನ್ನು  ನಿಭಾಯಿಸಲು ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರಾಂತ (ಎನ್‌ಸಿಆರ್)ದಲ್ಲಿ ಅತ್ಯಂತ ಅಗತ್ಯದ ಯೋಜನೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ನಿರ್ಮಾಣ ಹಾಗೂ  ನೆಲಸಮ ಕಾರ್ಯಾಚರಣೆಗಳಿಗೆ ಸಂಪೂರ್ಣ ನಿಷೇಧ ವಿಧಿಸಬೇಕೆಂದು ಸಿಎಕ್ಯೂಮ್ ಆದೇಶಿಸಿತ್ತು.

ಆದರೆ ಈ ನಿಷೇಧವು ರಾಷ್ಟ್ರೀಯ ಭದ್ರತೆ, ರಕ್ಷಣೆ,ರೈಲ್ವೆ ಹಾಗೂ ಮೆಟ್ರೊ ರೈಲು ಮತ್ತಿತರ ಯೋಜನೆಗಳಿಗೆ ಈ ನಿಷೇಧವು ಅನ್ವಯಿಸುವುದಿಲ್ಲ. ಆದಾಗ್ಯೂ ನೊಯ್ಡಾ , ಗಾಝಿಯಾಬಾದ್, ಗುರುಗ್ರಾಮ ಹಾಗೂ ಇತರ ಪ್ರದೇಶಗಳಲ್ಲಿನ ವಸತಿ ಯೋಜನೆಗಳಿಗೆ ಇದು ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆಯ ಚಟುವಟಿಕೆಗಳಿಗೂ ನಿಷೇಧ ಹೇರಲಾಗಿದೆ.

Similar News