ಗೋವಾ: ಬಿಜೆಪಿ ಸೇರಿದ ಶಾಸಕರ ಅನರ್ಹತೆ ಕೋರಿ ಕೋರ್ಟ್ ಮೆಟ್ಟಲೇರಲು ಕಾಂಗ್ರೆಸ್ ನಿರ್ಧಾರ
Update: 2022-11-01 18:17 GMT
ಪಣಜಿ, ನ.1: ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಇತ್ತೀಚೆಗೆ ಪಕ್ಷಾಂತರ ಮಾಡಿದ ಎಂಟು ಮಂದಿ ಶಾಸಕರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಕೋರಿ ತಾನು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಕಾಂಗ್ರೆಸ್ ಪಕ್ಷದ ಗೋವಾ ಘಟಕ ಮಂಗಳವಾರ ತಿಳಿಸಿದೆ.
ಸೆಪ್ಟೆಂಬರ್ನಲ್ಲಿ 11 ಮಂದಿ ಕಾಂಗ್ರೆಸ್ ಶಾಸಕರ ಪೈಕಿ ಎಂಟು ಮಂದಿ ಬಿಜೆಪಿಗೆ ಪಕ್ಷಾಂತರ ಮಾಡುವುದರೊಂದಗೆ ಗೋವಾ ವಿಧಾನಸಭೆಯಲ್ಲಿ ಕೈ ಪಕ್ಷದ ಬಲ ಕೇವಲ ಮೂರಕ್ಕಿಳಿದಿದೆ.
ಪಕ್ಷಾಂತರ ಮಾಡಿರುವ ಶಾಸಕರ ಅನರ್ಹತೆ ಕೋರಿ ಸಲ್ಲಿಸಲಾಗುವ ಅರ್ಜಿಗೆ ಬೇಕಾದ ದಾಖಲೆಗಳನ್ನು ತಾನು ವಿಧಾನಸಭಾ ಸ್ಪೀಕರ್ ಅವರ ಕಾರ್ಯಾಲಯದಿಂದ ಪಡೆದುಕೊಂಡಿರುವುದಾಗಿ ಗೋವಾದ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್ ತಿಳಿಸಿದ್ದಾರೆ.
ಮಾಜಿ ಅಡ್ವೋಕೇಟ್ಜನರಲ್ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ಕಾರ್ಲೊಸ್ ಅಲ್ವಾರಿಸ್ ಫೆರೇರಾ ಅವರು ಶೀಘ್ರದಲ್ಲೇ ನ್ಯಾಯಾಲಯದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಲಿದ್ದಾರೆಂದು ಪಾಟ್ಕರ್ ತಿಳಿಸಿದರು.