×
Ad

ಸಿಎಂ ಬೊಮ್ಮಾಯಿ ಸಹಿತ 8 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ರಾಷ್ಟ್ರೋತ್ಥಾನ ಪರಿಷತ್‌ಗೆ ನಿಯಮಬಾಹಿರವಾಗಿ 30 ವರ್ಷಗಳ ಗುತ್ತಿಗೆ ಪ್ರಕರಣ

Update: 2022-11-05 08:43 IST

ಬೆಂಗಳೂರು: ಬಳ್ಳಾರಿಯ ಕುವೆಂಪು ನಗರದ ಬಡಾವಣೆಯಲ್ಲಿ ನಾಗರಿಕ ಸೌಲಭ್ಯ ನಿವೇಶನವನ್ನು ನಿಯಮಬಾಹಿರವಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ ಶೇ.25ರ ದರದಲ್ಲಿ 30 ವರ್ಷಗಳಿಗೆ ಗುತ್ತಿಗೆ  ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸೇರಿದಂತೆ ಒಟ್ಟು 8 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ಕರ್ನಾಟಕ ರಾಷ್ಟ್ರ ಸಮಿತಿಯು ದೂರು ದಾಖಲಿಸಿದೆ.

ಕರ್ತವ್ಯಲೋಪ ಮತ್ತು ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ದೂರು ದಾಖಲಿಸಿರುವ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಕಾರ್ಯದರ್ಶಿ ಬಿ.ಎಸ್.ಮಲ್ಲಿಕಾರ್ಜುನಯ್ಯ ಅವರು ಬಳ್ಳಾರಿ ನಗರದ ಶಾಸಕ ಜಿ.ಸೋಮಶೇಖರ ರೆಡ್ಡಿ, ಸಂಸದ ವೈ ದೇವೇಂದ್ರಪ್ಪ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಆಯುಕ್ತ, ನಗರಾಭಿವೃದ್ಧಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರನ್ನೂ ಪ್ರತಿವಾದಿಯನ್ನಾಗಿಸಿದ್ದಾರೆ. ದೂರಿನ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

 ನಾಗರಿಕ ಸೌಲಭ್ಯ ನಿವೇಶನವನ್ನು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲು ನಿಯಮಗಳಲ್ಲಿ ಅವಕಾಶ ಇಲ್ಲದಿದ್ದರೂ ನಿಯಮಬಾಹಿರವಾಗಿ ಬಳ್ಳಾರಿಯ ಕುವೆಂಪು ನಗರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ನಾಗರಿಕ ಸೌಲಭ್ಯ ನಿವೇಶನವನ್ನು ಗುತ್ತಿಗೆ ನೀಡಿದ್ದನ್ನು ವಾರ್ತಾಭಾರತಿ-‘the-file.in’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಪ್ರಕರಣದ ವಿವರ: ಬಳ್ಳಾರಿಯ ಕುವೆಂಪು ನಗರ ಬಡಾವಣೆಯಲ್ಲಿನ ಬಹುಕೋಟಿ ರೂ. ಬೆಲೆಬಾಳುವ 5.92 ಎಕರೆ ವಿಸ್ತೀರ್ಣದ ಪೈಕಿ 24,008 ಚ.ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನವನ್ನು ನಿಯಮಬಾಹಿರವಾಗಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು  ರಾಜ್ಯ ಬಿಜೆಪಿ ಸರಕಾರವು ರಾಷ್ಟ್ರೋತ್ಥಾನ ಪರಿಷತ್‌ಗೆ ಶೇ.25ರ ದರದಲ್ಲಿ 30 ವರ್ಷಗಳಿಗೆ ಗುತ್ತಿಗೆ ನೀಡಿದೆ. ಇದರಿಂದ ಬೊಕ್ಕಸಕ್ಕೆ ಅಂದಾಜು  7.50 ಕೋಟಿ ರೂ. ನಷ್ಟ ಸಂಭವಿಸಿತ್ತು.

 ಅಂಗವಿಕಲರ ಹಾಗೂ ಬುದ್ಧಿಮಾಂದ್ಯರ ಕಲ್ಯಾಣಕ್ಕಾಗಿ ಸ್ಥಾಪಿಸಲಾದ ಸಂಸ್ಥೆಗಳಿಗೆ, ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸುವ ಸಂಸ್ಥೆಗಳಿಗೆ ಮತ್ತು ಕೇಂದ್ರ, ರಾಜ್ಯ ಸರಕಾರದ ಅಂಗ ಸಂಸ್ಥೆಗಳಿಗೆ ಮಾತ್ರ ಪ್ರಾಧಿಕಾರವು ನಿಗದಿಪಡಿಸಿದ ಮೊತ್ತದ ಶೇ.50ರ ದರದಲ್ಲಿ ನಾಗರಿಕ ಸೌಲಭ್ಯ ನಿವೇಶನವನ್ನು ಮಂಜೂರು ಮಾಡಲು ಅವಕಾಶವಿದೆ. ಆದರೆ ಇತರೆ ಸಂಘ ಸಂಸ್ಥೆಗಳಿಗೆ ನಿಗದಿತ ಮೊತ್ತಕ್ಕೆ ರಿಯಾಯಿತಿ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಇಲಾಖೆಯು ನೀಡಿದ್ದ ಸ್ಪಷ್ಟ ಅಭಿಪ್ರಾಯವನ್ನು ಬದಿಗೆ ಸರಿಸಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರ ಒತ್ತಡಕ್ಕೆ ಮಣಿದ ಇಲಾಖೆಯು ನಿಯಮ ಉಲ್ಲಂಘಿಸಿ ಬಹುಕೋಟಿ ರೂ. ಬೆಲೆ ಬಾಳುವ ಜಮೀನನ್ನು ಪ್ರಚಲಿತ ಮಾರುಕಟ್ಟೆ ದರ ಶೇ.25ರಷ್ಟು ದರಕ್ಕೆ  ಮಂಜೂರು ಮಾಡಿರುವುದರ ಹಿಂದೆ ಅಧಿಕಾರಿಗಳ ಕರ್ತವ್ಯಲೋಪ ಮತ್ತು ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರಿನಲ್ಲಿ ಆಪಾದಿಸಿದೆ.

ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್, ಬಳ್ಳಾರಿ ನಗರದ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಸಂಸದ ವೈ.ದೇವೇಂದ್ರಪ್ಪ ಅವರು ರಾಷ್ಟ್ರೋತ್ಥಾನ ಪರಿಷತ್‌ಗೆ ರಿಯಾಯಿತಿ ದರದಲ್ಲಿ ಸಿ.ಎ. ನಿವೇಶನವನ್ನು ಮಂಜೂರು ಮಾಡಿಕೊಡಲು ಶಿಫಾರಸು ಪತ್ರ ನೀಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸಿ.ಎ. ನಿವೇಶನಕ್ಕೆ  ರಾಷ್ಟ್ರೊತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ಅವರು   2021ರ ಮೇ 16ರಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಶೈಕ್ಷಣಿಕ ಉದ್ದೇಶಕ್ಕಾಗಿ ಕಟ್ಟಡ ನಿರ್ಮಿಸಲು  ನಾಗರಿಕ ಸೌಲಭ್ಯ ನಿವೇಶನ ಮಂಜೂರಾತಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ್ದ  ಪ್ರಾಧಿಕಾರವು 2021ರ ಆಗಸ್ಟ್ 18ರಂದು ಸಭೆ ನಡೆಸಿತ್ತು. ‘ಬಳ್ಳಾರಿ ನಗರದ ಕುವೆಂಪು ನಗರದ ಬಡಾವಣೆಯಲ್ಲಿ ಒಟ್ಟು 5.92 ಎಕರೆಯಲ್ಲಿನ ಪೈಕಿ 24,008.00 ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನಕ್ಕೆ ಚ.ಮೀ.ಗೆ 6,500 ರೂ.ಗಳಂತೆ ಒಟ್ಟು ನಿವೇಶನಕ್ಕೆ 15,60,52,000 ರು. ನಿಗದಿಪಡಿಸಿ’ ನಿರ್ಣಯ ಕೈಗೊಂಡಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದೆ.

ಈ ನಿವೇಶನ ಮೌಲ್ಯದ ಶೇ.10ರಷ್ಟು ಮೊತ್ತವನ್ನು ಅಂದರೆ 1,56,05,200 ರೂ.ಗಳನ್ನು  ಠೇವಣಿ ರೂಪದಲ್ಲಿ ಪರಿಷತ್ ಜಮೆ ಮಾಡಿತ್ತು. ಇನ್ನುಳಿದ ಶೇ.90ರಷ್ಟು ಅಂದರೆ 14,04,46,800 ರೂ.ಗಳನ್ನು ಪ್ರಾಧಿಕಾರಕ್ಕೆ 15 ದಿನಗಳ ಒಳಗಾಗಿ ಸಂದಾಯ ಮಾಡಲು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು ಸೂಚಿಸಿತ್ತು ಎಂದು ದೂರಿನಲ್ಲಿ ವಿವರಿಸಿದೆ.

ರಾಷ್ಟ್ರೋತ್ಥಾನ ಪರಿಷತ್‌ಗೆ ರಿಯಾಯಿತಿ ದರದಲ್ಲಿ ಸಿ.ಎ.ನಿವೇಶನವನ್ನು ಮಂಜೂರು ಮಾಡಲು ಆರ್ಥಿಕ ಇಲಾಖೆಯು ಸಹಮತಿಸಿರಲಿಲ್ಲ. ‘ಆಡಳಿತ ಇಲಾಖೆಯ ಪ್ರಸ್ತಾವವನ್ನು ಪರಿಶೀಲಿಸಿದೆ. ಪ್ರಸ್ತಾವಕ್ಕೆ ಆರ್ಥಿಕ ಇಲಾಖೆಯು ಸಹಮತಿಸಿರುವುದಿಲ್ಲ,’ ಎಂದು  2022ರ ಜೂನ್ 15ರಂದೇ ತನ್ನ ಅಭಿಪ್ರಾಯ ತಿಳಿಸಿತ್ತು.

ಅಲ್ಲದೆ ‘ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು-1991ರ ನಿಯಮ 8(1)ರಲ್ಲಿ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಹಣವನ್ನು ನಿಗದಿಪೊಡಿಸಲು ಅವಕಾಶ ಕಲ್ಪಿಸಿರುವಂತೆ ಸಿ.ಎ. ನಿವೇಶನಕ್ಕೆ ರಿಯಾಯಿತಿ ನೀಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಪ್ರಸ್ತಾಪಿತ ಸಿ.ಎ. ನಿವೇಶನಕ್ಕೆ ರಿಯಾಯಿತಿ ನೀಡಿದಲ್ಲ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತದೆ,’ ಎಂದೂ ಎಚ್ಚರಿಕೆ ನೀಡಿತ್ತು ಎಂದು ದೂರಿನಲ್ಲಿ ತಿಳಿಸಿದೆ.

ಆದರೂ ನಗರಾಭಿವೃದ್ಧಿ ಇಲಾಖೆಯು  ಸಚಿವ ಸಂಪುಟಕ್ಕೆ ಕಡತ ಮಂಡಿಸಿತ್ತು. ಈ ಸಂಬಂಧ 2022ರ ಜುಲೈ 20ರಂದು ನಡೆದಿದ್ದ ಸಚಿವ ಸಂಪುಟ ಸಭೆಯು 24,008 ಚ.ಮೀ. ವಿಸ್ತೀರ್ಣವುಳ್ಳ ನಾಗರಿಕ ಸೌಲಭ್ಯ ನಿವೇಶನದ ಗುತ್ತಿಗೆ ಮೊತ್ತವನ್ನು ಪ್ರಚಲಿತ ಮಾರುಕಟ್ಟೆ ದರದ ಶೇ.25ರಷ್ಟನ್ನು ನಿಗದಿಪಡಿಸಿ ನಿರ್ಣಯ ಕೈಗೊಂಡಿತು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು 2022ರ ಆಗಸ್ಟ್  4ರಂದು ಆದೇಶವನ್ನೂ ಹೊರಡಿಸಿದೆ ಎಂದು ದೂರಿನಲ್ಲಿ ವಿವರಿಸಿದೆ.

Similar News