×
Ad

ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ, ರಸ್ತೆಗಿಳಿಯುವಂತೆ ಯುವಕರಿಗೆ ಸಚಿವ ಸುನಿಲ್ ಕುಮಾರ್ ಕರೆ

Update: 2022-11-08 13:37 IST

ಉಡುಪಿ, ನ.8: 'ಕೆಪಿಸಿಸಿ ಕಾರ್ಯಾಧ್ಯಕ್ಷಯಾಗಿ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಕ್ಷಮೆಯಾಚಿಸಬೇಕು. ಈ ಅಪಮಾನ ಸಹಿಸಿ ಕೊಳ್ಳಲು ಸಾಧ್ಯವಿಲ್ಲ. ಈ ನಡೆಯ ವಿರುದ್ಧ ಯುವಕರು ರಸ್ತೆಗೆ ಬರಬೇಕು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸಬೇಕು' ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸ್ವಾಭಿಮಾನಿ ಹಿಂದು. ಹಿಂದುತ್ವಕ್ಕೆ ಧಕ್ಕೆಯಾದಾಗ ಸೆಟೆದು ನಿಲ್ಲುತ್ತೇನೆ. ದೇಶದ ಅಸ್ಮಿತೆಗೆ ಧಕ್ಕೆಯಾದಾಗ ಹೋರಾಟ ಮಾಡುತ್ತೇನೆ ಎಂಬುದನ್ನು ತೋರಿಸಿಕೊಡಬೇಕು. ರಸ್ತೆಗೂ ಬನ್ನಿ ಸಾಮಾಜಿಕ ಜಾಲತಾಣಗಳಲ್ಲೂ ಕಾಂಗ್ರೆಸ್ ನಡೆಯನ್ನು ಖಂಡಿಸಿ ಎಂದು ಕರೆ ನೀಡಿದರು.

''ಕಾಂಗ್ರೆಸ್ ಹುಟ್ಟಿನಿಂದ ಇಂದಿನವರೆಗೆ ಹಿಂದು ,ಭಾರತೀಯತೆ ಮೇಲೆ ಹಲವು ಬಾರಿ ಅವಮಾನ ಮಾಡಿದೆ. ನೆಹರು ನನ್ನನ್ನು ಹಿಂದೂ ಎಂದು ಕರೆಯಬೇಡಿ ಎಂದು ಹೇಳಿದ್ದರು. ನೆಹರು ಹಾಕಿಕೊಟ್ಟ ಪರಂಪರೆ ಇವತ್ತಿಗೂ ಮುಂದುವರೆ ಯುತ್ತಿದೆ. ಅವಕಾಶ ಸಿಕ್ಕಾಗಲೆಲ್ಲ ಹಿಂದುತ್ವ ಮತ್ತು ಭಾರತೀಯತೆ ಬಗ್ಗೆ ಕಾಂಗ್ರೆಸ್ ಅಪಮಾನ ಮಾಡುತ್ತಾ ಬಂದಿದೆ'' ಎಂದು ದೂರಿದರು.

ಕಾಂಗ್ರೆಸ್ ಹಿರಿಯ ನಾಯಕ ಶಿವರಾಜ್ ಪಾಟೀಲ್ ಭಗವದ್ಗೀತೆಯನ್ನು ಜಿಹಾದ್ ಗೆ ಹೋಲಿಸಿದ್ದರು. ಸಿದ್ದರಾಮಯ್ಯನವರಿಗೆ ತಿಲಕ ಕಂಡರೆ ಆಗುವುದಿಲ್ಲ ಎಂದು ಅವರೇ ಹೇಳಿದ್ದಾರೆ. ಸಾವರ್ಕರ್ ಬಗ್ಗೆಯೂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ಸಿಗೆ ಹಿಂದುಗಳನ್ನು ಕಂಡರೆ ಅಸಹನೆ. ಭಾರತೀಯತೆಯನ್ನು ಕಾಂಗ್ರೆಸ್ ಯಾವತ್ತೂ ಒಪಿ್ಪಲ್ಲ ಎಂದು ಅವರು ಆರೋಪಿಸಿದರು.

ಹಿಂದುತ್ವಕ್ಕೆ ಧಕ್ಕೆಯಾದಾಗಲೆಲ್ಲ ನಾವು ಎದ್ದು ನಿಂತಿದ್ದೇವೆ. ಈ ಹಿನ್ನೆಲೆಯಲ್ಲಿ ಸ್ವಾಭಿಮಾನಿ ಹಿಂದು ಎಂಬ ಅಭಿಯಾನನ್ನು ಇಂದಿನಿಂದ ಆರಂಭಿಸಲಾಗು ವುದು. ಈ ವಿಚಾರವನ್ನು ನಾವು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಈ ಹೇಳಿಕೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು. ಭಾರತೀಯತೆ, ಹಿಂದೂ ಜೀವನ ಪದ್ಧತಿಯನ್ನು ಒಪ್ಪದ ಕಾಂಗ್ರೆಸ್ ಸಮಾಜದ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿರು.

ಜಾರಕಿಹೊಳಿ ಶಾಲೆಗೆ ಸೇರುವಾಗ, ಚುನಾವಣೆಗೆ ಸ್ಪಧಿರ್ಸುವಾಗ ಹಿಂದೂ ಪರಿಶಿಷ್ಟ ಜಾತಿ ಎಂದು ಹೇಳಿದ್ದಿರೋ ಅಥವಾ ಅಶ್ಲೀಲ ಹಿಂದೂ ಎಂದು ಹೇಳಿ ಶಾಲೆಗೆ ಸೇರಿದ್ದೀರೋ? ಕಾಂಗ್ರೆಸ್ ಈ ಹೇಳಿಕೆಗೆ ಬಹಳ ದೊಡ್ಡ ಪ್ರಮಾಣದ ಬೆಲೆ ತರಬೇಕಾಗುತ್ತದೆ. ಹಿಂದುತ್ವಕ್ಕೆ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಅಮಾನ ಮಾಡಿದೆ ಎಂದು ಅವರು ದೂರಿದರು. ದೈವಾರಾದಕರಿಗೆ ಮಾಸಾಶನ ವಿರೋಧಿಸಿದ ಬಿ.ಟಿ.ಲಲಿತಾ ನಾಯಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಲಲಿತಾ ನಾಯಕ್ ಕನ್ನಡ ಸಂಸ್ಕೃತಿ ಸಚಿವರಾಗಿದ್ದವರು. ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳಬೇಡಿ ಎನ್ನುತ್ತಾರೆ. ಇದು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ. ದೈವ ನರ್ತಕರಿಗೆ ಮಾಸಾಶನ ಕೊಟ್ಟಾಗ ಸಮಾಜ ಅದನ್ನು ಸ್ವಾಗತಿಸಿದೆ. ಇದು ದೈವನರ್ತಕರಿಗೆ ಮಾಡುವ ಅಪಮಾನವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ತಿಳಿಸಿದರು.

Similar News