ಉಡುಪಿ ಜಿಲ್ಲೆಯಲ್ಲಿ ಜಾನುವಾರುಗಳ ಸಾಗಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶ
Update: 2022-11-10 18:44 IST
ಉಡುಪಿ : ಜಿಲ್ಲೆಯಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ತಿಂಗಳು ಅಥವಾ ಮುಂದಿನ ಆದೇಶದವರೆಗೆ ಜಿಲ್ಲೆಯ ಒಳಗೆ ಮತ್ತು ಹೊರಗೆ ಜಾನುವಾರುಗಳ (ದನ ಮತ್ತು ಎಮ್ಮೆ) ಸಾಗಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎ. ಅವರು ಆದೇಶ ಹೊರಡಿಸಿದ್ದಾರೆ.
ಚರ್ಮಗಂಟು ರೋಗವು ದನ ಮತ್ತು ಎಮ್ಮೆಗಳಲ್ಲಿ ಕಂಡುಬರುವ ವೈರಸ್ ಖಾಯಿಲೆಯಾಗಿದ್ದು, ಕ್ಯಾಪ್ರಿಪಾಕ್ಸ್ ಎಂಬ ವೈರಾಣುವಿನಿಂದ ಜಾನುವಾರುಗಳಿಗೆ ಹರಡುವ ಕಾಯಿಲೆಯಾಗಿದೆ. ಇದು ರೋಗಗ್ರಸ್ಥ ಜಾನುವಾರುವಿನಿಂದ ಆರೋಗ್ಯವಂತ ಜಾನುವಾರುಗಳಿಗೆ ಹರಡುವುದರಿಂದ ಮತ್ತು ಈ ರೋಗದಿಂದ ಜಾನುವಾರು ಮಾಲಕರುಗಳಿಗೆ ಆರ್ಥಿಕ ನಷ್ಟವುಂಟಾಗುವುದನ್ನು ಗಮನದಲ್ಲಿರಿಸಿಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಆದ್ದರಿಂದ ಜಿಲ್ಲೆಯ ಹೈನುಗಾರರು/ ರೈತರು ಜಾನುವಾರು ಸಾಗಾಟವನ್ನು ಮಾಡದಂತೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಕೋರಿದ್ದಾರೆ.