ಎಸ್ಸೆಸ್ಸೆಫ್ ವತಿಯಿಂದ ಉಸ್ವತುನ್ನಬೀ ಅಕಾಡೆಮಿಕ್ ಸೆಮಿನಾರ್

Update: 2022-11-14 17:54 GMT

ಮಂಜನಾಡಿ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ಉಸ್ವತುನ್ನಬಿ ಅಕಾಡೆಮಿಕ್ ಸೆಮಿನಾರ್ ಅಲ್ ಮದೀನಾದ ದಅವಾ ಕಾಲೇಜು ಲೈಬ್ರರಿ ಹಾಲ್ ನಲ್ಲಿ ನಡೆಯಿತು.

"ಅಂತ್ಯಪ್ರವಾದಿ: ಬದುಕು ಮತ್ತು ಬಳುವಳಿಗಳು" ಎಂಬ ವಿಷಯದ ಕುರಿತು ರಾಷ್ಟ್ರದ ವಿವಿಧೆಡೆಯಿಂದ ಬಂದ ಹತ್ತು ಆಯ್ದ ಸಂಶೋಧಕರು ಪ್ರಬಂಧ ಮಂಡಿಸಿದರು.

ಪ್ರವಾದಿಯವರ ಆದರ್ಶಗಳು, ನಾಯಕತ್ವ ಗುಣಗಳು, ರಾಜತಾಂತ್ರಿಕ ನಡವಳಿಕೆಗಳು ಮುಂತಾದ ವಿಷಯಗಳತ್ತ ಬೆಳಕು ಹರಿಸುವ ಪ್ರಬಂಧಗಳನ್ನು ಮಂಡಿಸಿ ಚರ್ಚೆಗಳನ್ನು ಕೈಗೊಳ್ಳಲಾಯಿತು. ಪ್ರಬಂಧ ಮಂಡಿಸಲು ಆಯ್ಕೆಯಾದ ಸಂಶೋಧಕರನ್ನು ಶಾಸಕರಾದ ಯು ಟಿ ಖಾದರ್ ರವರು ಅನುಮೋದಿಸಿದರು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಅಲ್ ಮದೀನಾ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಮತ್ತು ರಾಜ್ಯ ದಅವಾ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇಂದಿರಾ ಗಾಂಧಿ ನ್ಯಾಷನಲ್ ಟ್ರೈಬಲ್ ವಿವಿ ಫೆಲೋ ರಾಶಿದ್ ನೂರಾನಿಯವರು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಅಲ್ ಮದೀನಾ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮುಹಮ್ಮದ್ ಕುಂಞಿ ಅಮ್ಜದಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಎಸ್ಸೆಸ್ಸೆಫ್ ದಅವಾ ಕನ್ವೀನರ್ ಖುಬೈಬ್ ತಂಞಳ್, ಅಲ್ ಮದೀನಾ ಪ್ರಾಧ್ಯಾಪಕರುಗಳಾದ ಅಬೂಸ್ವಾಲಿಹ್ ಅಝ್ಹರಿ, ಅಬ್ದುರಹ್ಮಾನ್ ಮರ್ಝುಖಿ ವಳಾಲು, ಅನ್ಸಾರ್ ಮಾಸ್ಟರ್ ಫಜೀರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯ ದಅವಾ ಸಿಂಡಿಕೇಟ್ ಸದಸ್ಯ ನಝೀರ್ ಅಬ್ಬಾಸ್ ಸುರೈಜಿ ಸ್ವಾಗತಿಸಿ ಹಸನ್ ಮುಈನ್ ನೂರಾನಿ ವಂದಿಸಿದರು.

Similar News