ಧರಣಿ ವೇದಿಕೆಯಲ್ಲಿ ನಳಿನ್ ಕುಮಾರ್ ಕಟೀಲ್ ಟ್ವೀಟ್ ನ ಕಟೌಟ್ ಅನಾವರಣ: ಹೋರಾಟ ಸಮಿತಿ
ಸುರತ್ಕಲ್, ನ.20: ಸಂಸದ ನಳಿನ್ ಕುಮಾರ್ ಕಟೀಲ್ ಅವರ ಟ್ವೀಟ್ ನ ಕಟೌಟನ್ನು ಅನಿರ್ಧಿಷ್ಟಾವಧಿ ಧರಣಿ ವೇದಿಕೆಯಲ್ಲಿ ಅನಾವರಣಗೊಳಿಸಲಾಗುವುದು ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಹಗಲು ರಾತ್ರಿ ಧರಣಿ ಸೋಮವಾರ ಇಪ್ಪತ್ತೈದು ದಿನಗಳನ್ನು ಪೂರೈಸಲಿದೆ.
ಇದೇ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ಟೋಲ್ ರದ್ದತಿ ಪ್ರಕಟಿಸಿ ಟ್ವೀಟ್ ಮಾಡಿ ಒಂದು ವಾರ ಪೂರ್ಣ ಗೊಳ್ಳುತ್ತಿದೆ. ಅಧಿಸೂಚನೆ ಹೊರಟು ಹತ್ತು ದಿನ ಕಳೆದಿದ್ದರೂ ಸುರತ್ಕಲ್ ಟೋಲ್ ಗೇಟ್ ಮುಚ್ಚಿಸಲು ಜಿಲ್ಲೆಯ ಸಂಸದರು, ಶಾಸಕರುಗಳು ವಿಫಲರಾಗಿರುವುದನ್ನು ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದ್ದು, ಹಗಲು ರಾತ್ರಿ ಧರಣಿಯ 25 ನೇ ದಿನಾಚರಣೆಯ ಅಂಗವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಟ್ವೀಟ್ ನ ಕಟೌಟನ್ನು ಅನಿರ್ಧಿಷ್ಟಾವಧಿ ಧರಣಿ ವೇದಿಕೆಯಲ್ಲಿ ಅನಾವರಣಗೊಳಿಸಲಾಗುವುದು ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.