ಗೃಹ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಸುರತ್ಕಲ್‌ ಟೋಲ್‌ಗೇಟ್‌ ಹೋರಾಟ ಸಮಿತಿ, ಸಮಾನ ಮನಸ್ಕ ಸಂಘಟನೆಗಳು

Update: 2022-11-23 14:59 GMT

ಸುರತ್ಕಲ್‌, ನ.23: ಮಂಗಳೂರು ಮತ್ತು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸುರತ್ಕಲ್‌ ಟೋಲ್‌ಗೇಟ್‌ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶಿಸಿ ಧರಣಿ ನಡೆಸಿದರು.

ಬುಧವಾರ ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ಹೋರಾಟಗಾರರು ಧರಣಿ ಮಂಟಪದಲ್ಲಿ ಧರಣಿ ನಡೆಸುತ್ತಾ ಕಪ್ಪು ಬಾವುಟ ಪ್ರದರ್ಶಿಸಿದರು. ಈ ವೇಳೆ ಧರಣಿ ನಿರತರನ್ನು ಪೊಲೀಸರು ಸುತ್ತುವರಿದು ಹೋರಾಟಗಾರರು ಧರಣಿ ಮಂಟಪದಿಂದ ಕದಲದಂತೆ ಮತ್ತು ಗೃಹಸಚಿವರ ಸಂಚಾರಕ್ಕೆ ಅಡಚಣೆ ಮಾಡಂತೆ ಕ್ರಮವಹಿಸಿದ್ದರು.

ಈ ಕುರಿತು ʼವಾರ್ತಾಭಾರತಿʼ ಜೊತೆ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ, ಗೃಹಸಚಿವರು ಉಡುಪಿ ಕಡೆ ತೆರಳುತ್ತಿದ್ದ ಸಂದರ್ಭ ಹೋರಾಟಗಾರರಿಗೆ ಹೆದರಿದ್ದ ಸರಕಾರ ಹೋರಾಟಗಾರರ ಧರಣಿ ಮಂಟಪದ ಸುತ್ತ ಪೊಲೀಸರ ಕೋಟೆಯನ್ನೇ ನಿರ್ಮಿಸಿತ್ತು. ನಾವು ಗೃಹ ಸಚಿವರ ಭರವಸೆ ಅಥವಾ ಬೇರಾವುದೇ ನಿರೀಕ್ಷೆಯಲ್ಲಿ ಇರಲಿಲ್ಲ ಎಂದು ಹೇಳಿದರು.

Similar News