ಅಂಬಾಗಿಲು-ಕಲ್ಸಂಕ ಮಾರ್ಗವಾಗಿ ಬಸ್‌ಗಳು ಸಂಚರಿಸಲು ಸೂಚನೆ

Update: 2022-11-25 15:11 GMT

ಉಡುಪಿ, ನ.25: ಜಿಲ್ಲಾಧಿಕಾರಿಗಳ ಅಧಿಸೂಚನೆಯಂತೆ ಸಂತೆಕಟ್ಟೆ ಇಂದ ಉಡುಪಿ ಕಡೆಗೆ ತೆರಳುವ ಕೆಲವೊಂದು ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು- ರಾ.ಹೆ. 17 ಎಂದು ನಮೂದಿಸಿರುವ ಬಸ್ಸುಗಳು ಅಂಬಾಗಿಲು ರಾ.ಹೆ. 66 ಕರಾವಳಿ ಬೈಪಾಸಿನಿಂದ ಅಂಬಲಪಾಡಿ ಬೈಪಾಸ್- ಬ್ರಹ್ಮಗಿರಿ- ಅಜ್ಜರಕಾಡು- ತಾಲೂಕು ಕಚೇರಿ ಮೂಲಕ ಸಂಚರಿಸಬಹುದು. 

ಉಳಿದ ಸಿಟಿ ಬಸ್ಸುಗಳು ಅಂಬಾಗಿಲು ತಾಂಗದಗಡಿ-ಗುಂಡಿಬೈಲು ಮೂಲಕ ಕಲ್ಸಂಕಕ್ಕೆ ಬಂದು ಅಲ್ಲಿಂದ ಬೃಂದಾವನ ಹೋಟೆಲ್ ಬಳಿ ಎಡಕ್ಕೆ ತಿರುಗಿ ಕಾಫಿಯಾ ಹೋಟೆಲ್ ಬಳಿ ಬಲಕ್ಕೆ ತಿರುಗಿ ಸಿಟಿ ಬಸ್ಸು ನಿಲ್ದಾಣಕ್ಕೆ ತೆರಳ ಬಹುದು. ಅಲ್ಲದೇ ಬಾರ್ಕೂರು- ಬ್ರಹ್ಮಾವರ- ಹೊನ್ನಾಳ- ಹೆಬ್ರಿ- ಪೆರ್ಡೂರು- ಕುಕ್ಕೆಹಳ್ಳಿ ಹಾಗೂ ಇತರ ಕಡೆಗಳಿಂದ ಬರುವ ಶಟಲ್ ಸರ್ವಿಸ್ ಬಸ್ಸುಗಳು ಅಂಬಾಗಿಲು ಗುಂಡಿಬೈಲು ಮೂಲಕ ಕಲ್ಸಂಕಕ್ಕೆ ಬಂದು ಉಡುಪಿ ಬಸ್ಸು ನಿಲ್ದಾಣ ಪ್ರವೇಶಿಸಬೇಕಾಗಿದೆ.

ಆದರೆ ಹೆಚ್ಚಿನ ಬಸ್ಸುಗಳು ಅಂಬಾಗಿಲು-ಕಲ್ಸಂಕ ಮಾರ್ಗದಲ್ಲಿ  ಸಂಚರಿಸ ದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ, ಮೇಲೆ ತಿಳಿಸಿದ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಅಂಬಾಗಿಲು- ಗುಂಡಿಬೈಲು-ಕಲ್ಸಂಕ ಮಾರ್ಗವಾಗಿ ಉಡುಪಿ ಬಸ್ಸು ನಿಲ್ದಾಣ ತಲುಪುವಂತೆ ಎಲ್ಲಾ ಬಸ್ ಮಾಲಕರಿಗೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ. 

Similar News