ದ್ವಿಚಕ್ರ ವಾಹನ ಢಿಕ್ಕಿ: ಪಾದಚಾರಿ ಮೃತ್ಯು
ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದ ವಿಶಾಲ್ ನಗರ ಕ್ರಾಸ್ ಬಳಿ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಜಯಚಂದ್ರ ಪೂಜಾರಿ ಮೃತಪಟ್ಟವರು. ಇವರು ಗುರುವಾರ ಮಧ್ಯಾಹ್ನ ರಸ್ತೆ ದಾಟುತ್ತಿದ್ದಾಗ ಮೂಡಬಿದಿರೆ ಕಡೆಯಿಂದ ಮಹಾವೀರ ಕಾಲೇಜು ಕಡೆಗೆ ಚಲಿಸುತ್ತಿದ್ದ ದ್ವಿಚಕ್ರ ವಾಹನವು ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಈ ಅಪಘಾತದಿಂದ ಜಯಚಂದ್ರ ಪೂಜಾರಿಯು ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಅವರ ತಲೆಯ ಹಿಂಬದಿ, ಎದೆಗೆ ಮತ್ತು ಕೆನ್ನೆಗೆ ರಕ್ತಗಾಯವಾಗಿತ್ತು, ಚಿಕಿತ್ಸೆಗಾಗಿ ಅವರನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ೩:೦೫ಕ್ಕೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಜಯಚಂದ್ರ ಪೂಜಾರಿಯ ಸಹೋದರ ರವೀಂದ್ರ ಸಿ. ಪೂಜಾರಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.