ಡಿ.2ರಿಂದ ನಿಟ್ಟೆ ಫಿಸಿಯೋಥೆರಫಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ

Update: 2022-11-26 15:57 GMT

ಕೊಣಾಜೆ; ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಧೀನದ ನಿಟ್ಟೆ ಇನ್ ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಕಾಲೇಜಿನ ಆಶ್ರಯದಲ್ಲಿ ಡಿ.2 ಮತ್ತು 3ರಂದು ಅಂತರಾಷ್ಟ್ರೀಯ ಮಟ್ಟದ ಫಿಸಿಯೋಥೆರಪಿ ಸಮ್ಮೇಳನ ‘ಫಿಸಿಯೋ ಪೆನಾನ್ಸಿಯಾ-2022’ ನಡೆಯಲಿದೆ ಎಂದು ಫಿಸಿಯೋಥೆರಪಿ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಕಾರ್ಯಕ್ರಮ ಸಂಘಟನಾ ಅಧ್ಯಕ್ಷ ಪ್ರೊ. ಡಾ. ದಾನೇಶ್ ಕುಮಾರ್ ಯು.ಕೆ. ಹೇಳಿದರು.

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಿಸಿಯೋಥೆರಪಿ ವಿಭಾಗ ವಿದ್ಯಾರ್ಥಿಗಳಿಗೆ ಸಮಗ್ರ ಮತ್ತು ವಿಶ್ವದರ್ಜೆಯ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನ ಆಯೋಜಿಸಲಾಗಿದ್ದು ಬಹರೈನ್, ಫಿಲಿಪೈನ್ಸ್, ಹಾಂಕಾಂಗ್ ಸೇರಿದಂತೆ ಇಪ್ಪತ್ತು  ಅಂತರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ನುಡಿದರು.

ಸಮ್ಮೇಳನದಲ್ಲಿ ಸಂಶೋಧನೆ, ಶಿಕ್ಷಣ ಮತ್ತು ಕ್ಲಿನಿಕಲ್ ಸಂಬಂಧಿತ ವಿಚಾರಗಳ ಬಗ್ಗೆಯೂ ಮಾಹಿತಿ ಕಾರ್ಯಗಾರ ಹಾಗೂ ಚರ್ಚೆ ನಡೆಯಲಿದ್ದು ದೇಶದಾದ್ಯಂತ 35 ಫಿಸಿಯೋಥೆರಪಿ ಕಾಲೇಜುಗಳಿಂದ ಸುಮಾರು 1400 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಡಿಸೆಂಬರ್ 1ರಂದು ನಡೆಯುವ ಪೂರ್ವಭಾವಿ ಕಾರ್ಯಾಗಾರದಲ್ಲಿ 60 ಮಂದಿ ಭಾಗವಹಿಸಲಿದ್ದಾರೆ. ಡಿಸೆಂಬರ್ 2ರಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಅವರು ಬೆಳಗ್ಗೆ 10.30ಕ್ಕೆ ಸಮ್ಮೇಳನ ಉದ್ಘಾಟಿಸಲಿದ್ದು, ನಿಟ್ಟೆ ವಿವಿ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಆಡಳಿತ ವಿಭಾಗ ಸಹ ಕುಲಾಧಿಪತಿ ವಿಶಾಲ ಹೆಗ್ಡೆ, ಶೈಕ್ಷಣಿಕ ವಿಭಾಗ ಸಹ ಕುಲಾಧಿಪತಿ ಪ್ರೊ. ಡಾ. ಶಾಂತಾರಾಮ ಶೆಟ್ಟಿ, ಕುಲಪತಿ ಪ್ರೊ. ಸತೀಶ್ ಕುಮಾರ್ ಭಂಡಾರಿ ಹಾಗೂ ಸಹ ಕುಲಪತಿ ಪ್ರೊ. ಎಂ.ಎಸ್. ಮೂಡಿತ್ತಾಯ ಭಾಗವಹಿಸಲಿದ್ದಾರೆ ಎಂದರು.  310ಕ್ಕೂ ಹೆಚ್ಚು ವೈಜ್ಞಾನಿಕ ಪೋಸ್ಟರ್/ ಪೇಪರ್ ಪ್ರಸ್ತುತಿಗಳನ್ನು ನಿಗದಿಪಡಿಸಲಾಗಿದ್ದು ಉದಯೋನ್ಮುಖ ವೃತ್ತಿಪರರ ಸಂಶೋಧನಾ ಚಾಕಚಕ್ಯತೆಗೆ ಸಹಾಯವಾಗಲಿದೆ.  ರಾಷ್ಟ್ರೀಯ ಕ್ರಿಕಟ್, ಫುಟ್ಬಾಲ್ ತಂಡದಲ್ಲಿ ಸೇವೆ ಸಲ್ಲಿಸಿದ ಶ್ರೇಷ್ಠ ಫಿಸಿಯೋಥೆರಫಿ ತಜ್ಞರು ಮಾಹಿತಿ ನೀಡಲಿದ್ದಾರೆ. ಆ ದಿನ ಸಂಜೆ, ಮಲಯಾಳಂ ಸಿನಿಮಾದ ಹಿನ್ನೆಲೆ ಗಾಯಕರಾದ ವಿಮಲ್ ರಾಯ್, ತಾನಿಯಾ ಎಲಿಜಬೆತ್ ಮ್ಯಾಥ್ಯೂ ಮತ್ತು ಶ್ರೇಯಾ ಎಸ್. ಮೆನನ್ ಅವರಿಂದ ಸಂಗೀತ ಹಾಗೂ ಚೆಂಡೆ ಪ್ರದರ್ಶನ ನಡೆಯಲಿದೆ ಎಂದರು.

ಡಿಸೆಂಬರ್ 3ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ನಿಟ್ಟೆ ವಿವಿಯ ಸಹಕುಲಾಧಿಪತಿ ಪ್ರೊ.ಎಂ. ಶಾಂತಾರಾಮ ಶೆಟ್ಟಿ, ನವೋದಯ ಶಿಕ್ಷಣ ಸಂಸ್ಥೆಯ ಕುಲಸಚಿವ ಡಾ.ಟಿ.ಎಸ್.ಶ್ರೀನಿವಾಸ್, ಪದ್ಮಶ್ರೀ ಸಮೂಹ ಸಂಸ್ಥೆಗಳ ನಿರ್ದೇಶಕ ಪ್ರೊ.ರಾಜೇಶ್ ಶೆಣೈ ಭಾಗವಹಿಸಲಿದ್ದಾರೆ. ಈ ಸಂದರ್ಭ ನಡೆಯುವ ಹಳೆವಿದ್ಯಾರ್ಥಿಗಳ ಸಂಗಮದಲ್ಲಿ 150 ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಮ್ಮೇಳನ ಸಂಚಾಲಕರಾದ ಪ್ರೊ.ರಾಕೇಶ್ ಕೃಷ್ಣ ಕೋವೆಲ, ಕೃಷ್ಣ ಪ್ರಸಾದ್ ಕೆ.ಎಂ ಮತ್ತು ಐಶ್ವರ್ಯ ನಾಯರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Similar News