ಮಂಗಳ ಆಸ್ಪತ್ರೆಯಲ್ಲಿ ನ್ಯೂರೊ, ಇಎನ್‌ಟಿ ನ್ಯಾವಿಗೇಶನ್ ಸಿಸ್ಟಮ್ ಅತ್ಯಾಧುನಿಕ ಉಪಕರಣ ಅಳವಡಿಕೆ

Update: 2022-11-28 13:53 GMT

ಮಂಗಳೂರು: ನರರೋಗ ಮತ್ತು ಕಿವಿ ಮೂಗು ಗಂಟಲು ರೋಗ ಚಿಕಿತ್ಸೆಗಾಗಿ ಅತ್ಯಂತ ಸುಧಾರಿತ ಮೆಡ್ಟ್ರೋನಿಕ್ ಸ್ಪೆಲ್ತ್ ಎಸ್ 8 ನ್ಯೂರೊ ಇಎನ್‌ಟಿ ನ್ಯಾವಿಗೇಶನ್ ಸಿಸ್ಟಮ್ ಉಪಕರಣವನ್ನು ಮಂಗಳೂರಿನ ಮಂಗಳಾ ಆಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್‌ನಲ್ಲಿ ಶನಿವಾರ ಸ್ಥಾಪಿಸಲಾಯಿತು.

ಖ್ಯಾತ ವೈದ್ಯ ಡಾ.ರಾಜ, ಡಾ.ಶಂಕರ್ ಅತ್ಯಾಧುನಿಕ ಉಪಕರಣವನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಮಂಗಳ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್‌ನ ನಿರ್ದೇಶಕ ಡಾ.ಗಣಪತಿ ಪಿ., ಮಾನವ ದೇಹದ ಮೇಲೆ ಅತ್ಯಂತ ಸವಾಲಿನ ಚಿಕಿತ್ಸೆಗಳಲ್ಲಿ ಮೆದುಳಿನ ಚಿಕಿತ್ಸೆಯು ತುಂಬಾ ಕ್ಷಿಷ್ಟಕರ. ಸುರಕ್ಷಿತ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಆಪರೇಟಿಂಗ್ ಮೈಕ್ರೊಸ್ಕೋಪ್, ನ್ಯೂರೊ ಎಂಡೊಸ್ಕೋಪ್ ಮತ್ತಿತರ ಉಪಕರಣಗಳು ಅವಶ್ಯಕ. ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ನ್ಯೂರೊ ಸರ್ಜರಿಯಲ್ಲಿ ಬಳಸಲು ಪ್ರಾರಂಭಿಸಿರುವ ಉಪಕರಣವೇ ನ್ಯೂರೊ ನ್ಯಾವಿಗೇಶನ್ ಸಿಸ್ಟಂ. ಶಸ್ತ್ರಚಿಕಿತ್ಸೆಯಲ್ಲಿ ನಿಖರ ಮಾರ್ಗದರ್ಶನಕ್ಕಾಗಿ ಇದನ್ನು ಬಳಸಲಾಗುತ್ತದೆ. ಅತ್ಯಂತ ಸೂಕ್ಷ್ಮವಾದ ಮೆದುಳಿನ ಭಾಗದ ಕಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಸಣ್ಣ ರಂಧ್ರದ ಮೂಲಕ ಮಾಡಲು ಇವು ಸೂಕ್ತವಾದ ಉಪಕರಣವಾಗಿದೆ ಎಂದರು.

ವಿಶ್ವಾದ್ಯಂತ ಅತ್ಯಂತ ಸುರಕ್ಷಿತ ನ್ಯಾವಿಗೇಶನ್ ಸಿಸ್ಟಂ ಎಂದು ಕರೆಯಲ್ಪಡುವ ‘ದಿ ಮೆಡ್ ಟ್ರೋನಿಕ್ ಸ್ಪೆಲ್ತ್ ಎಸ್ 8’ನ್ನು ಮಂಗಳ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಂತಾಗಿದೆ. ಮಂಗಳ ಆಸ್ಪತ್ರೆಯು ಈ ವ್ಯವಸ್ಥೆಯನ್ನು ಹೊಂದುತ್ತಿರುವ ದ.ಕ. ಜಿಲ್ಲೆಯ ಮೊದಲ ಆಸ್ಪತ್ರೆಯಾಗಿದೆ ಎಂದು ಗಣಪತಿ ತಿಳಿಸಿದರು.

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ದೀಪಕ್ ಉಪಕರಣದ ಬಗ್ಗೆ ಮಾಹಿತಿ ನೀಡುತ್ತಾ, ಶಸ್ತ್ರ ಚಿಕಿತ್ಸೆಯ ಮೊದಲೇ ಮೆದುಳಿನ ಒಳಭಾಗದ ಮಾಹಿತಿಯನ್ನು ಈ ಉಪಕರಣದ ಮೂಲಕ ಪಡೆದು ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ ಮತ್ತು ಮುಖ್ಯವಾಗಿ ಕೀ ಹೋಲ್ ಮೂಲಕ ಗಡ್ಡೆಯನ್ನು ತೆಗೆಯಲು ಬಹಳ ಉಪ ಯುಕ್ತವಾಗಿದೆ. ರೋಗ ನಿರ್ಣಯಕ್ಕೆ ಬಯಾಪ್ಸಿ ಮೂಲಕ ಮೂಗಿನ ಒಳಗಿನಿಂದ ಪಿಟ್ಯುಟರಿ ಗ್ರಂಥಿಯ ಚಿಕಿತ್ಸೆ, ತಲೆಚಿಪ್ಪಿನ ಒಳಗಿರುವ ಟ್ಯೂಮರ್ ಅಥವಾ ಗಡ್ಡೆಗಳ ಚಿಕಿತ್ಸೆಯಲ್ಲಿ ಅತ್ಯಂತ ಸೂಕ್ತವಾದ ಈ ಉಪಕರಣವನ್ನು ಪ್ರಪಂಚದಾದ್ಯಂತ ಉಪಯೋಗಿಸಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.

ಡಾ.ಗೌತಮ್ ಮಾಹಿತಿ ನೀಡಿ, ಮೆದುಳು ದ್ರವ ಸೋರಿಕೆ, ಪಿಟ್ಯುಟರಿ ಗಡ್ಡೆಗಳು, ಕಣ್ಣಿನ ಸಾಕೆಟ್‌ಗಳು, ಕಪ್ಪು ಶಿಲೀಂಧ್ರಗಳಂತಹ (ಬ್ಲಾಕ್ ಫಂಗಸ್), ಸೈನಸ್ ಸೋಂಕುಗಳಂತಹ ಹಲವಾರು ರೋಗಗಳನ್ನು ಮೂಗಿನ ಮೂಲಕ ಮಾಡುವ ಚಿಕಿತ್ಸೆಯನ್ನು ಈ ಉಪಕರಣದ ನೆರವಿನಿಂದ ಬಹಳ ಸುಲಭದಲ್ಲಿ ನೆರವೇರಿಸಬಹುದು, ಅಲ್ಲದೆ ‘ಲ್ಯಾಟರಲ್ ಸಲ್ ಬೇಸ್’ ಎಂದು ಕರೆಯಲಾಗುವ ಕಿವಿಯ ಗಡ್ಡೆಗಳನ್ನು ಸುರಕ್ಷಿತವಾಗಿ ಪರಿಹರಿಸಬಹುದು ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗಣಪತಿ ಸಿ., ಆಡಳಿತ ನಿರ್ದೇಶಕಿ ಡಾ.ಅನಿತಾ, ಮಂಗಳಾ ಕಿಡ್ನಿಫೌಂಡೇಶನ್ ನಿರ್ದೇಶಕ ಡಾ.ಮೊಹಿಯುದ್ದೀನ್ ನಪ್ಸೀರ್ ಮತ್ತಿತರರು ಉಪಸ್ಥಿತರಿದ್ದರು.

Similar News