ಸುರತ್ಕಲ್ ಟೋಲ್ ತೆರವು ಆದೇಶ: ಡಿ.1ರಿಂದ ಅನಿರ್ಧಿಷ್ಟಾವಧಿ ಧರಣಿ ಮುಕ್ತಾಯಕ್ಕೆ ಹೋರಾಟ ಸಮಿತಿ ನಿರ್ಧಾರ

ʼಡಿ.2ರಂದು ಹೆಜಮಾಡಿ ಟೋಲ್‌ನಲ್ಲಿ ಸಾಮೂಹಿಕ ಧರಣಿʼ

Update: 2022-11-29 15:43 GMT

ಮಂಗಳೂರು, ನ.29: ಸುರತ್ಕಲ್ ಅಕ್ರಮ ಟೋಲ್ ಗೇಟ್‌ನಲ್ಲಿ ಸುಂಕ ಸಂಗ್ರಹವನ್ನು ಡಿಸೆಂಬರ್ ಒಂದರಿಂದ ಸ್ಥಗಿತಗೊಳಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಅಕ್ಟೋಬರ್ 28ರಿಂದ ನಡೆಯುತ್ತಿರುವ ಅನಿರ್ದಿಷ್ಠಾವಧಿ ಧರಣಿಯನ್ನು ಡಿಸೆಂಬರ್ ಒಂದರಂದು ಸಂಜೆ ಮುಕ್ತಾಯಗೊಳಿಸಲಾಗುವುದು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.

ಇದೇ ವೇಳೆ ಹೆಜಮಾಡಿ ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ ಹೋರಾಟ ಮುಂದುವರಿಯಲಿದ್ದು, ಡಿ. 2ರಂದು ಹೆಜಮಾಡಿ ಟೋಲ್‌ನಲ್ಲಿ ಸಾಮೂಹಿಕ ಧರಣಿ ನಡೆಸಲು ಸಮಿತಿ ನಿರ್ಧರಿಸಿದೆ.

ತಾತ್ಕಾಲಿಕ ನೆಲೆಯಲ್ಲಿ 2015 ಡಿಸೆಂಬರ್ ನಲ್ಲಿ ಸುಂಕ ಸಂಗ್ರಹ ಆರಂಭಿಸಿದ ಸುರತ್ಕಲ್ ಟೋಲ್ ಗೇಟ್ ತೆರವಿಗಾಗಿ ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ’ ಕಳೆದ ಆರು ವರ್ಷಗಳಿಂದ ಸತತ ಹೋರಾಟ ಸಂಘಟಿಸುತ್ತಾ ಬಂದಿದೆ. 2022 ವರ್ಷ ಪೂರ್ತಿ ಹೋರಾಟ ತೀವ್ರ ಸ್ವರೂಪದಲ್ಲಿ ನಡೆದಿದೆ. ಅಕ್ಟೋಬರ್ 28 ರಿಂದ ಟೋಲ್ ಗೇಟ್ ತೆರವುಗೊಳ್ಳದೆ ತೆರಳುವುದಿಲ್ಲ ಎಂಬ ಘೋಷಣೆಯೊಂದಿಗೆ ಸುರತ್ಕಲ್ ಟೋಲ್ ಗೇಟ್ ಸಮೀಪ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನೂರಾರು ಸಂಘ ಸಂಸ್ಥೆಗಳ, ಜನಸಮೂಹದ ವ್ಯಾಪಕ ಬೆಂಬಲ ಪಡೆದ ಹಗಲು ರಾತ್ರಿ ಧರಣಿಯ ತೀವ್ರತೆಗೆ ಮಣಿದ ಸರಕಾರ ಡಿಸೆಂಬರ್ ಒಂದರಿಂದ ಸುರತ್ಕಲ್ ಟೋಲ್ ಗೇಟ್ ಮುಚ್ಚಲು ಆದೇಶಿಸಿದೆ. ಇದು ಪಟ್ಟು ಬಿಡದ ಜನ ಹೋರಾಟಕ್ಕೆ ಸಂದ ಗೆಲುವು ಎಂದು ಅಭಿಪ್ರಾಯ ಪಟ್ಟಿರುವ ಹೋರಾಟ ಸಮಿತಿ ಹೋರಾಟಕ್ಕೆ ಸಹಕರಿಸಿದೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದೆ.

ನವಂಬರ್ 30 ಮಧ್ಯರಾತ್ರಿ 12 ಗಂಟೆಗೆ ಸುರತ್ಕಲ್ ಟೋಲ್ ಗೇಟ್ ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 1ರಂದು  ಸಂಜೆ ನಾಲ್ಕು ಗಂಟೆಗೆ ಅನಿರ್ಧಿಷ್ಟಾವಧಿ ಧರಣಿ ಸಮಾರೋಪ ನಡೆಸಲು ನಿರ್ಧರಿಸಿದೆ.

ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವ ಸಂದರ್ಭದಲ್ಲಿ ಹೆಜಮಾಡಿಯ ನವಯುಗ್ ಟೋಲ್ ಗೇಟ್‌ ನೊಂದಿಗೆ ವಿಲೀನಗೊಳಿಸಿ ಸುರತ್ಕಲ್ ಅಕ್ರಮ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವುದು ಅನ್ಯಾಯ.  ಇದು ಎರಡೂ ಜಿಲ್ಲೆಯ ಜನರಿಗೆ ಬಿಜೆಪಿ ಸರಕಾರ ಎಸಗಿರುವ ದ್ರೋಹ.  ಇಂತಹ ಕೆಟ್ಟ ಸ್ಥಿತಿಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಂಸದ, ಶಾಸಕರು ನೇರ ಹೊಣೆ. ಟೋಲ್ ತೆರವು ಪ್ರಕ್ರಿಯೆ ಸಂದರ್ಭ ಅವರು ಮಧ್ಯಪ್ರವೇಶ ನಡೆಸದೆ ನಿರ್ಲಿಪ್ತರಾಗಿದ್ದ ಕಾರಣ ಹೆಜಮಾಡಿಯಲ್ಲಿ ಶುಲ್ಕ ಹೆಚ್ಚಳಕ್ಕೆ ಕಾರಣವಾಗಿದೆ. ಹೋರಾಟ ಸಮಿತಿಯು ಹೆಜಮಾಡಿಯಲ್ಲಿ ಹೆಚ್ಚುವರಿ ಶುಲ್ಕ ಸಂಗ್ರಹದ ನಿರ್ಧಾರವನ್ನು ಕಟುವಾಗಿ ಖಂಡಿಸುತ್ತದೆ, ಹೆಜಮಾಡಿಯಲ್ಲಿ ಶುಲ್ಕ ಕಡಿತಕ್ಕಾಗಿ ನಡೆಯಲಿರುವ ಹೋರಾಟದಲ್ಲಿ ಭಾಗಿಯಾಗಲಿದೆ.  ಹೆಜಮಾಡಿ ಟೋಲ್ ಹೆಚ್ಚಳ ರದ್ದುಗೊಳಿಸಲು ಆಗ್ರಹಿಸಿ ನಡೆಯಲಿರುವ ಹೋರಾಟ ಡಿಸೆಂಬರ್ ಎರಡರಂದು ಹೆಜಮಾಡಿಯಲ್ಲಿ ಸಾಮೂಹಿಕ ಧರಣಿಯ ಮೂಲಕ ಚಾಲನೆಗೊಳ್ಳಲಿದೆ ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Similar News