ಗುರುವಾಯನಕೆರೆ ಕೆರೆಗೆ ಹಾರಿದನೆನ್ನಲಾದ ರಿಕ್ಷಾ ಚಾಲಕನಿಗಾಗಿ ಹುಡುಕಾಟ

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೆಳೆಯರಿಗೆ ಕರೆ ಮಾಡಿದ್ದ ವ್ಯಕ್ತಿ

Update: 2022-11-30 04:53 GMT

ಬೆಳ್ತಂಗಡಿ, ನ.30: ಗೆಳೆಯರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಆಟೊ ರಿಕ್ಷಾ ಚಾಲಕನಿಗಾಗಿ ಗುರುವಾಯನಕೆರೆಯ ಕೆರೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದೆ.

ಬೆಳ್ತಂಗಡಿಯಲ್ಲಿ ರಿಕ್ಷಾ ಚಾಲಕಾನಾಗಿರುವ ಪ್ರವೀಣ್ ಪಿಂಟೊ ಎಂಬವರು ಇಂದು ಬೆಳಗ್ಗೆ ತನ್ನ ಸ್ನೇಹಿತರಿಗೆ ಕರೆ ಮಾಡಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆತಂಕಿತರಾದ ಸ್ಥಳೀಯರು ಹುಡುಕಾಟ ನಡೆಸಿದಾಗ ಗುರುವಾಯನಕೆರೆ ಕೆರೆಯ ಬದಿಯಲ್ಲಿ ಪ್ರವೀಣ್ ಚಪ್ಪಲಿ ಹಾಗೂ ಆಧಾರ್ ಕಾರ್ಡ್ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪ್ರವೀಣ್ ಕೆರೆಗೆ ಹಾರಿರಬಹುದೆಂದು ಶಂಕಿಸಿರುವ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಹಾಗೂ ಬೆಳಾಲಿನ ಶೌರ್ಯ ವಿಪತ್ತು ನಿರ್ಬಹಣಾ ಘಟಕದ ಸ್ವಯಂಸೇವಕರು ಕೆರೆಯಲ್ಲಿ ಹುಡುಕಾಟದಲ್ಲಿ ಆರಂಭಿಸಿದ್ದಾರೆ. ಆದರೆ ಇದುವರೆಗೆ ಪ್ರವೀಣ್ ನ ಸುಳಿವು ಪತ್ತೆಯಾಗಿಲ್ಲ. ಕೆರೆಯಲ್ಲಿ ನೀರಿನ ಪ್ರಮಾಣ ತುಂಬಾ ಹೆಚ್ಚಾಗಿರುವುದರಿಂದ ಹುಡುಕಾಟ ಕಷ್ಟವಾಗುತ್ತಿದೆ.

Similar News