ಗುರುವಾಯನಕೆರೆ ಕೆರೆಗೆ ಹಾರಿದ್ದನೆನ್ನಲಾದ ಆಟೊ ರಿಕ್ಷಾ ಚಾಲಕನ ಮೃತದೇಹ ಪತ್ತೆ

Update: 2022-11-30 09:32 GMT

ಬೆಳ್ತಂಗಡಿ, ನ.30: ಗೆಳೆಯರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಆಟೊ ರಿಕ್ಷಾ ಚಾಲಕನ ಮೃತದೇಹ ಹುಡುಕಾಟದ ಬಳಿಕ ಗುರುವಾಯನಕೆರೆಯ ಕೆರೆಯಲ್ಲಿ ಪತ್ತೆಯಾಗಿದೆ.

ಸ್ಥಳೀಯ ಆಟೊ ರಿಕ್ಷಾ ಡ್ರೈವರ್ ಪ್ರವೀಣ್ ಮೃತಪಟ್ಟವರು. ಬೆಳ್ತಂಗಡಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಪ್ರವೀಣ್ ಇಂದು ಮುಂಜಾವ 4 ಗಂಟೆ ಸುಮಾರಿಗೆ ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದನೆನ್ನಲಾಗಿದೆ. ಈ ಹುಡುಕಾಟ ನಡೆಸಿದಾಗ ಗುರುವಾಯನಕೆರೆಯ ಕೆರೆಯ ಬಳಿ ಪ್ರವೀಣ್ ರಿಗೆ ಸೇರಿದ ಕೆಲವು ದಾಖಲೆಗಳು ಪತ್ತೆಯಾಗಿದ್ದವು. ಇದರಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ, ಬೆಳಾಲು ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರು ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದು, ಮಧ್ಯಾಹ್ನ ವೇಳೆ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಶವಾಗಾರಕ್ಕೆ ಸಾಗಿಸಲಾಗಿದೆ.

ಆತ್ಮಹತ್ಯೆಗೆ ಕಾರಣ ಕಾರಣ ತಿಳಿದುಬಂದಿಲ್ಲ. ಒಟ್ಟು ಘಟನೆಯ ಬಗ್ಗೆ ಹಲವಾರು ಅನುಮಾನಗಳಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

Similar News