ಅರ್ಹರನ್ನು ಹುಡುಕಿ ಮತದಾರರ ಪಟ್ಟಿಗೆ ಸೇರಿಸಲು ದ.ಕ.ಜಿಪಂ ಸಿಇಒ ಸೂಚನೆ

Update: 2022-12-03 14:43 GMT

ಮಂಗಳೂರು, ಡಿ.3: ಅರ್ಹತೆ ಇದ್ದೂ ಕೂಡ ಇನ್ನೂ ಸೇರ್ಪಡೆಯಾಗದ ಮತದಾರರನ್ನು ಮತದಾರರ ಪಟ್ಟಿಗೆ ತಕ್ಷಣ ಸೇರಿಸುವಂತೆ ದ.ಕ.ಜಿಪಂ ಸಿಇಒ ಡಾ .ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೃತೀಯ ಲಿಂಗಿಗಳು, ಬುಡಕಟ್ಟು ಜನಾಂಗದ ನಾಗರಿಕರು, ಯುವ ಮತದಾರರು ಸೇರಿದಂತೆ ಇನ್ನೂ ಹಲವು ವರ್ಗದ ಅರ್ಹರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಅಂತಹವರನ್ನು ಹುಡುಕಿ ಆದಷ್ಟು ಬೇಗ ಅವರ ಹೆಸರುಗಳನ್ನು ಸೇರ್ಪಡೆಗೊಳಿಸುವುದು ಮತದಾರರ ಸಾಕ್ಷರತಾ ಸಂಘದ ಕರ್ತವ್ಯವಾಗಿದೆ ಎಂದರು.

ಸದ್ಯ ಜಿಲ್ಲೆಯಲ್ಲಿ ಯುವ ಮತದಾರರ ಅನುಪಾತ ಕಡಿಮೆಯಿದೆ. ಅರ್ಹಯುವಕರಿಗೆ ಮತದಾನದ ಮಹತ್ವದ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅಲೆ ದಾಡುವ ಅಗತ್ಯವಿಲ್ಲ ವೋಟರ್ ಹೆಲ್ಪ್‌ಲೈನ್ ಆ್ಯಪ್ ಅಥವಾ ನ್ಯಾಷನಲ್ ವೋಟರ್ ಸರ್ವಿಸ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಅವುಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡುವಂತೆ ಕರೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣ, ಕಾಲೇಜು ಶಿಕ್ಷಣದ ವಿಶೇಷಾಧಿಕಾರಿ ದೇವಿ ಪ್ರಸಾದ್, ಸಂಪನ್ಮೂಲ ವ್ಯಕ್ತಿ ಪ್ರಮೀಳಾ ರಾವ್, ಪ್ರಾಧ್ಯಾಪಕಿ ಭಾರತಿ ಪಿಲಾರ್ ಮತ್ತಿತರರು ಉಪಸ್ಥಿತರಿದ್ದರು.

Similar News