ಸ್ವಚ್ಛತೆ ಪ್ರತೀಯೊಬ್ಬರ ಜವಾಬ್ದಾರಿ ಆಗಬೇಕು: ಯು.ಟಿ.ಖಾದರ್

Update: 2022-12-03 15:35 GMT

ಬಂಟ್ವಾಳ, ಡಿ.3: ದ.ಕ.ಜಿ.ಪಂ. ವತಿಯಿಂದ ಜಿಲ್ಲೆಯ ಗ್ರಾಮ ನೈರ್ಮಲ್ಯ ಹಾಗೂ ಶುಚಿತ್ವ ಕಾಪಾಡುವ ದೃಷ್ಟಿಯಿಂದ ಶಾಲಾ-ಕಾಲೇಜು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯಲ್ಲಿ ಮುಂದಿನ ದಿನಗಳಲ್ಲಿ ತಿಂಗಳ ಮೊದಲ ಶನಿವಾರ ನಡೆಯಲಿರುವ ಸ್ವಚ್ಛ ಶನಿವಾರ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಪುದು ಗ್ರಾ.ಪಂ.ಸಹಕಾರದೊಂದಿಗೆ ಶನಿವಾರ ಫರಂಗಿಪೇಟೆಯಲ್ಲಿ ಉದ್ಘಾಟಿಸಲಾಯಿತು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಯು.ಟಿ.ಖಾದರ್ ಮಾತನಾಡಿ, ಸ್ವಚ್ಛತೆಯ ಪಂಚಾಯತ್‌ನವರೇ ಮಾಡಬೇಕು ಎಂದು ಕಾಯದೆ ಪ್ರತಿ ಮನೆಯವರು ಕೂಡ ಇದು ನಮ್ಮ ಜವಾಬ್ದಾರಿ ಎಂದು ತಿಳಿದುಕೊಂಡಾಗ ಮಾತ್ರ ಸ್ವಚ್ಛ ಪರಿಹಾರ ಸೃಷ್ಟಿಯಾಗುತ್ತದೆ. ಪ್ರತಿ ಅಂಗಡಿಗಳ ಮುಂದೆಯೂ ಹಸಿ, ಒಣ ಕಸದ ತೊಟ್ಟಿಗಳನ್ನು ಇಡುವ ಕಾರ್ಯ ಅತಿ ಅಗತ್ಯವಾಗಿದ್ದು, ಕಸದಿಂದ ಆದಾಯವನ್ನು ಗಳಿಸುವ ಅವಕಾಶವೂ ಇದೆ ಎಂದರು. 

ಜಿ.ಪಂ.ಸಿಇಒ ಡಾ. ಕುಮಾರ್ ಮಾತನಾಡಿ, ಸ್ವಚ್ಛತಾ ಕಾರ್ಯ ಮಾತಿನ ಮೂಲಕ ನಡೆಯದೆ ಕ್ರಿಯೆಯಲ್ಲೂ ಆಗಬೇಕಿದೆ. ಸ್ವಚ್ಛ ಮನಸ್ಸುಗಳಿಂದ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ ಎಂದರು. 

ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುದು ಪಂಚಾಯತ್‌ನ ಕಸ ಸಂಗ್ರಹ ವಾಹನಕ್ಕೆ ಚಾಲನೆ ನೀಡಲಾಯಿತು. 

ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ, ಗ್ರಾ.ಪಂ. ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ ಮನೋಜ್‌ ಕುಮಾರ್ ನಾಣ್ಯ, ಭಾಸ್ಕರ್ ರೈ, ಹುಸೇನ್ ಪಾಡಿ, ರಝಾಕ್ ಅಮ್ಮೆಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ ಉಪಸ್ಥಿತರಿದ್ದರು. 

ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ. ಸ್ವಾಗತಿಸಿದರು. ಹನೀಫ್ ಗೋಳ್ತಮಜಲು ಕಾರ್ಯಕ್ರಮ ನಿರ್ವಹಿಸಿದರು.

Similar News