ಮಂಗಳೂರು: ಚಿನ್ನಾಭರಣದ ಮಳಿಗೆಗೆ ನುಗ್ಗಿ ಗುಂಪಿನಿಂದ ಹಲ್ಲೆ; ಮೂರು ಪ್ರತ್ಯೇಕ ಪ್ರಕರಣಗಳು ದಾಖಲು

Update: 2022-12-06 16:45 GMT

ಮಂಗಳೂರು, ಡಿ.6: ನಗರದ ಚಿನ್ನಾಭರಣದ ಮಳಿಗೆಯೊಂದಕ್ಕೆ ಮಂಗಳವಾರ ಸಂಜೆ ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ ಯುವಕರ ಗುಂಪೊಂದು ನುಗ್ಗಿದ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತ  ಶಶಿಕುಮಾರ್ ತಿಳಿಸಿದ್ದಾರೆ.

ಚಿನ್ನಾಭರಣ ಮಳಿಗೆಯ ಮಾರಾಟ ವಿಭಾಗದ ಯುವಕ ಮತ್ತು ಯುವತಿಯು ಅನ್ಯೋನ್ಯತೆಯಿಂದ ಇದ್ದಾರೆ ಎಂದು ಆರೋಪಿಸಿ ಗುಂಪು ಯುವತಿಯ ಪೋಷಕರೊಂದಿಗೆ ಚಿನ್ನಾಭರಣದ ಮಳಿಗೆಗೆ ನುಗ್ಗಿ ಪೊಲೀಸರ ಸಮ್ಮುಖವೇ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.

ಯುವತಿ ಶೃಂಗೇರಿ ಮೂಲದವಳು ಎಂದು ತಿಳಿದುಬಂದಿದೆ. ಗುಂಪು ಚಿನ್ನಾಭರಣದ ಮಳಿಗೆಗೆ ನುಗ್ಗಿ ಕಾನೂನನ್ನು ಕೈಗೆತ್ತಿಕೊಂಡಿರುವ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಯುವಕ ಮತ್ತು ಯುವತಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಮಳಿಗೆಗೆ ಅಕ್ರಮವಾಗಿ ಪ್ರವೇಶಿಸಿ ದಾಂಧಲೆಗೈದ ಗುಂಪಿನ ವಿರುದ್ಧ ಚಿನ್ನಾಭರಣ ಮಳಿಗೆಯವರು ಮತ್ತು ಹಲ್ಲೆಗೊಳಗಾದ ಯುವಕ ಹಾಗೂ ಯುವಕನ ವಿರುದ್ಧ ಯುವತಿಯ ತಾಯಿ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Similar News