‘ಅಮೃತ ಕಾಲ’ದಲ್ಲಿ ಭಾರತವು ವಿಶ್ವಕ್ಕೆ ದಿಕ್ಕನ್ನು ತೋರಿಸಲಿದೆ : ಪ್ರಧಾನಿ ನರೇಂದ್ರ ಮೋದಿ

Update: 2022-12-07 15:44 GMT

ಹೊಸದಿಲ್ಲಿ,ಡಿ.7: ಭಾರತದ ಸ್ವಾತಂತ್ರದ ‘ಅಮೃತ ಕಾಲ’('Amrita Kaala')ವು ರಾಷ್ಟ್ರೀಯ ಅಭಿವೃದ್ಧಿ ಮತ್ತು ವೈಭವದ ಅವಧಿಯಾಗಿರುವುದು ಮಾತ್ರವಲ್ಲ,ಅದು ವಿಶ್ವಕ್ಕೆ ಮಾರ್ಗದರ್ಶನ ನೀಡುವಲ್ಲಿ ದೇಶವು ಪ್ರಮುಖ ಪಾತ್ರವನ್ನು ವಹಿಸಲಿರುವ ಸಂದರ್ಭವೂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಬುಧವಾರ ಹೇಳಿದರು.

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ರಾಜ್ಯಸಭೆಯ ಸಭಾಪತಿಗಳಾಗಿ ಅಧಿಕಾರ ವಹಿಸಿಕೊಂಡ ಉಪರಾಷ್ಟ್ರಪತಿ ಜಗದೀಪ ಧನಕರ್(Jagdeep Dhankar) ಅವರನ್ನು ಸ್ವಾಗತಿಸಿದ ಮೋದಿ,ದೇಶವು ಎರಡು ಐತಿಹಾಸಿಕ ಸಂದರ್ಭಗಳಿಗೆ ಸಾಕ್ಷಿಯಾಗಿರುವ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳು ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಭಾರತವು ಈಗಷ್ಟೇ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ ಮತ್ತು ಇದು ನಾವು ‘ಅಮೃತ ಕಾಲ’ದಲ್ಲಿ ಪಯಣವನ್ನು ಆರಂಭಿಸಿರುವ ಸಮಯವೂ ಆಗಿದೆ ಎಂದು ಹೇಳಿದರು.

ಉಪರಾಷ್ಟ್ರಪತಿ ಧನಕರ್ ಅವರು ‘ಜವಾನ್ (ಯೋಧ)’ ಮತ್ತು ‘ಕಿಸಾನ್ (ರೈತ) ಇಬ್ಬರ ಗುಣಗಳನ್ನೂ ಮೈಗೂಡಿಸಿಕೊಂಡಿರುವ ನಾಯಕರಾಗಿದ್ದಾರೆ ಎಂದು ಪ್ರಶಂಸಿಸಿದ ಮೋದಿ,‘ಇತಿಹಾಸದ ಈ ಕಾಲಘಟ್ಟದಲ್ಲಿ ಅವರ ಸಮರ್ಥ ಮತ್ತು ಪರಿಣಾಮಕಾರಿ ನಾಯಕತ್ವ ಲಭಿಸಿರುವುದು ನಮ್ಮ ಅದೃಷ್ಟವಾಗಿದೆ’ಎಂದರು.

ಧನಕರ್ ಅವರ ಮಾರ್ಗದರ್ಶನದಡಿ ಎಲ್ಲ ಸದಸ್ಯರು ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ ಮತ್ತು ಸದನವು ದೇಶದ ಕನಸುಗಳು ಮತ್ತು ಪ್ರತಿಜ್ಞೆಗಳನ್ನು ಸಾಕಾರಗೊಳಿಸುವಲ್ಲಿ ನೆರವಾಗಲು ಪರಿಣಾಮಕಾರಿ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.ಕಿತಾನಾದ ‘ಪುತ್ರ’ನ ಸಾಧನೆಗಳಿಂದ ದೇಶವು ಹರ್ಷಗೊಂಡಿದೆ ಎಂದು ಅವರು ಉಪರಾಷ್ಟ್ರಪತಿಗಳ ಹುಟ್ಟೂರು ರಾಜಸ್ಥಾನದ ಕಿತಾನಾವನ್ನು ಪ್ರಸ್ತಾಪಿಸಿ ಹೇಳಿದರು.

ಸಶಸ್ತ್ರ ಪಡೆಗಳ ಧ್ವಜ ದಿನದ ಸಂದರ್ಭದಲ್ಲಿ ಮೋದಿ ಅವುಗಳಿಗೆ ವಂದನೆಯನ್ನೂ ಸಲ್ಲಿಸಿದರು.

ನಮ್ಮ ಉಪರಾಷ್ಟ್ರಪತಿಗಳು ರೈತನ ಮಗನಾಗಿದ್ದಾರೆ ಮತ್ತು ಅವರು ಸೈನಿಕ ಶಾಲೆಯಲ್ಲಿ ಓದಿದ್ದಾರೆ,ಹೀಗಾಗಿ ಅವರು ಯೋಧರು ಮತ್ತು ರೈತರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ : ‘ಅಮೃತ ಕಾಲ’ದಲ್ಲಿಯ ಈ ಪಯಣದಲ್ಲಿ ಭಾರತದ ಪ್ರಜಾಪ್ರಭುತ್ವ,ಸಂಸತ್ತು ಮತ್ತು ಸಂಸದೀಯ ಸಂಪ್ರದಾಯಗಳೂ ಮಹತ್ವದ ಪಾತ್ರವನ್ನು ನಿರ್ವಹಿಸಲಿವೆ.

Similar News