ಮಂಗಳೂರು: ಮನೆ ಕಟ್ಟಿಸಿದ ಹಣ ಕೊಡದೆ ಸತಾಯಿಸಿದ ಪರಿಣಾಮ ನೊಂದ ಗುತ್ತಿಗೆದಾರ ಆತ್ಮಹತ್ಯೆ; ಆರೋಪ

8 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2022-12-09 17:13 GMT

ಮಂಗಳೂರು, ಡಿ.9: ಮನೆಯನ್ನು ಕಟ್ಟಿಸಿಕೊಂಡ ಬಳಿಕ ಹಣ ನೀಡದೆ ಸತಾಯಿಸಿದ್ದರಿಂದ ಮನನೊಂದು ಗುತ್ತಿಗೆದಾರ ಆತ್ಮಹತ್ಯೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಗುತ್ತಿಗೆದಾರನ ಪತ್ನಿಯು 8 ಮಂದಿಯ ವಿರುದ್ಧ ವಂಚನೆಯ ಆರೋಪ ಹೊರಿಸಿ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

ದಿನೇಶ್ ಕೆ.ವಿ. ಎಂಬವರು ಮನೆ ಕಟ್ಟುವ ಗುತ್ತಿಗೆದಾರರಾಗಿದ್ದಾರೆ. ಅವರಿಂದ ಮನೆಯನ್ನು ಕಟ್ಟಿಸಿಕೊಂಡಿದ್ದ ಆರೋಪಿಗಳಾದ ಮಹಾಬಲ ಶೆಟ್ಟಿ, ಸೀತಾರಾಮ ಶೆಟ್ಟಿ, ದೀಪಕ್ ಕೋಡಿಕಲ್, ರಮೇಶ್ ಬಿ.ಎನ್, ನಾಗರಾಜ, ಸಪ್ನಾ ರಾಜೇಶ್, ಸೀತಾರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಗಂಗಾಧರ ಎಂಬವರು ಕಾಮಗಾರಿಯ ಹಣವನ್ನು ಸರಿಯಾಗಿ ನೀಡದೇ ತೊಂದರೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಹಣ ಬಾಕಿಯಿರುವ ಬಗ್ಗೆ ದಿನೇಶ್ ತನ್ನ ಡೈರಿಯಲ್ಲಿ  ಬರೆದು ಪತ್ನಿ ಉಷಾ ಅವರಲ್ಲೂ ತಿಳಿಸಿದ್ದರು ಎನ್ನಲಾಗಿದೆ. ಅಲ್ಲದೆ ಈ ವಿಚಾರದಲ್ಲಿ ಖಿನ್ನತೆಗೊಳಗಾಗಿ ದಿನೇಶ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಎ.16ರಂದು ಮೃತಪಟ್ಟಿದ್ದರು.

ಆ ಬಳಿಕ ಉಷಾ ಡೈರಿಯಲ್ಲಿ ನಮೂದಾಗಿರುವ ಆರೋಪಿಗಳ ಮೊಬೈಲ್‌ಗೆ ಕರೆ ಮಾಡಿ ತನ್ನ ಗಂಡನಿಗೆ ನೀಡಲು ಬಾಕಿಯಿರುವ ಹಣದ ಬಗ್ಗೆ ಕೇಳಿದಾಗ ಅರೋಪಿಗಳು ಮನೆಗೆ ಆಗಮಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ಮತ್ತು ಬಾಕಿ ಹಣವನ್ನು ನೀಡದೆ ಮೋಸ ಮಾಡಿರುವುದಾಗಿ ಉಷಾ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News