ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಆರೋಪ: ಆರು ಲಾರಿಗಳಿಗೆ ಮಿಝೋರಾಂನಲ್ಲಿ ಬೆಂಕಿ

Update: 2022-12-11 03:21 GMT

ಗುವಾಹತಿ: ಮ್ಯಾನ್ಮಾರ್‌ನಿಂದ ಒಣ ಅಡಿಕೆ ಕಳ್ಳಸಾಗಾಣಿಕೆ ಮಾಡುತ್ತಿದ್ದ ಆರೋಪದಲ್ಲಿ ಆರು ಲಾರಿಗಳನ್ನು ಮಿಝೋರಾಂನ ಮಮಿಟ್ ಜಿಲ್ಲೆಯಲ್ಲಿ ಶನಿವಾರ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ ಎಂದು newindianexpress.com ವರದಿ ಮಾಡಿದೆ.

ಝೌಲ್ನುಮ್ ಮತ್ತು ಝಮುವಾಂಗ್ (Zawlnuam and Zamuang) ಗ್ರಾಮಗಳ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಎಸ್ಪಿ ಲಲ್ತಾಂಗ್‍ ಪೀ ಪುಲಂಟ್ ಹೇಳಿದ್ದಾರೆ.

ಅಡಕೆಯನ್ನು ಯಾರು ಕಳ್ಳಸಾಗಾಣಿಕೆ ಮಾಡುತ್ತಿದ್ದರು ಎನ್ನುವುದು ಪತ್ತೆಯಾಗಿಲ್ಲ. ಜತೆಗೆ ವಾಹನಗಳು ಎಲ್ಲಿಗೆ ಹೋಗುತ್ತಿತ್ತು ಎನ್ನುವುದೂ ತಿಳಿದು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನೆರೆ ದೇಶಗಳಿಂದ ಅಡಿಕೆ ಕಳ್ಳಸಾಗಾಣಿಕೆ ಸ್ಥಳೀಯ ಅಡಿಕೆ ಬೆಳೆಗಾರರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಎರಡು ದಿನಗಳ ಹಿಂದೆ ಮಿಝೋರಾಂ ಸಂಸದ ವನ್ಲಲ್‍ ವೇನಾ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು. ಮ್ಯಾನ್ಮಾರ್‌ ನಿಂದ ಅಡಿಕೆ ಕಳ್ಳಸಾಗಾಣಿಕೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಈ ಬಗ್ಗೆ newindianexpress.com ವರದಿ ಮಾಡಿದೆ.

Similar News