ಬೈಂದೂರು-ರಾಣಿಬೆನ್ನೂರು ರಾ.ಹೆದ್ದಾರಿ ಅಭಿವೃದ್ಧಿಗೆ 1012.75 ಕೋಟಿ ರೂ.ಮಂಜೂರು

Update: 2022-12-21 15:01 GMT

ಉಡುಪಿ: ಬೈಂದೂರು- ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766(ಸಿ) ಅಭಿವೃದ್ಧಿಗೆ 1012.75 ಕೋಟಿ ರೂ. ಅನುದಾನ ಮಂಜೂರಾತಿ  ಸಿಕ್ಕಿದ್ದು, ಇದರೊಂದಿಗೆ ಶಿವಮೊಗ್ಗ ನಗರ ಉತ್ತರ ಭಾಗದ ಬೈಪಾಸ್ ರಸ್ತೆಗೆ ಒಪ್ಪಿಗೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಮುಖ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಅನುಮೋದನೆ ದೊರಕಿದೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.

ಕರಾವಳಿಯ ಬೈಂದೂರಿನಿಂದ ಕೊಲ್ಲೂರು, ನಗರ, ಹೊಸನಗರ, ಆನಂದಪುರ, ಶಿಕಾರಿಪುರ, ಮಾಸೂರು, ರಟ್ಟೆಹಳ್ಳಿ, ಮೂಲಕ ರಾಣೆಬೆನ್ನೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 766(ಸಿ)ಯನ್ನು ಸಂಪೂರ್ಣವಾಗಿ ಅಗಲೀ ಕರಣ ಮಾಡಿ ಅಭಿವೃದ್ಧಿಗೊಳಿಸಲು ಕೇಂದ್ರ ಭೂಸಾರಿಗೆ ಸಚಿವರಿಗೆ ಮನವಿ ಮಾಡಿದ ಫಲವಾಗಿ ಕೇಂದ್ರ ಭೂಸಾರಿಗೆ ಮಂತ್ರಾಲಯವು ಸಕಾರಾತ್ಮಕವಾಗಿ ಸ್ಪಂದಿಸಿ ಕಳೆದ ವರ್ಷ ಹೆದ್ದಾರಿಯ 7 ಕಿರು ಸೇತುವೆಗಳ ಹಾಗು 27.70 ಕಿ.ಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣಕ್ಕೆ ಒಟ್ಟು 238.70 ಕೋಟಿ ರೂ.ಗಳ ಡಿಪಿಆರ್‌ಗೆ ಮಂಜೂರಾತಿ ನೀಡಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವರ್ಷ 2022-23ನೇ ಸಾಲಿಗೆ ಬೈಂದೂರಿನಿಂದ ಹಾಲ್ಕಲ್ ಜಂಕ್ಷನ್ ಮತ್ತು ಕೊಲ್ಲೂರು ಮೂಲಕ ನಾಗೋಡಿವರೆಗಿನ 40.40 ಕಿ.ಮೀ ಉದ್ದದ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸುವ  394.05 ಕೋಟಿ ರೂ. ಮೊತ್ತದ ಡಿಪಿಆರ್‌ಗೆ ಕೇಂದ್ರ ಭೂಸಾರಿಗೆ ಮಂತ್ರಾಲಯ ಮಂಜೂರಾತಿ ನೀಡಿದೆ.

ಅಲ್ಲದೆ ಈ ಹೆದ್ದಾರಿಯ ಶಿಕಾರಿಪುರ ಪಟ್ಟಣಕ್ಕೆ 6.576 ಕಿ.ಮೀ ಉದ್ದದ ಬೈಪಾಸ್ ರಸ್ತೆ ನಿರ್ಮಾಣ ಮಾಡಲು 66.44 ಕೋಟಿ ರೂ.ಗಳ ಡಿಪಿಆರ್ ಹಾಗು ಹೊಸನಗರ ಮಾವಿನಕೊಪ್ಪ ವೃತ್ತದಿಂದ ಹೊಸನಗರ ಬೈಪಾಸ್, ಶರಾವತಿ ಹಿನ್ನೀರಿಗೆ 1.54 ಕಿ.ಮೀ ಮತ್ತು 0.72 ಕಿ.ಮೀ ಉದ್ದದ 2 ಭಾರೀ ಸೇತುವೆಗಳ ನಿರ್ಮಾಣದೊಂದಿಗೆ ಆಡುಗೋಡಿವರೆಗೆ 13.82 ಕಿ.ಮೀ ಉದ್ದದ ಬದಲೀ ರಸ್ತೆ ನಿರ್ಮಾಣ ಮಾಡುವ 313.56 ಕೋಟಿ ರೂ.ಗಳ ಡಿಪಿಆರ್‌ಗೆ ಮಂಜೂರಾತಿ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಬಾಕಿ ಉಳಿದ ಹೆದ್ದಾರಿ ಅಗಲೀಕರಣ ಮಾಡಲು ಡಿಪಿಆರ್ ತಯಾರಿಸಲು ಕೇಂದ್ರ ಭೂಸಾರಿಗೆ ಮಂತ್ರಾಲಯವು ಆದೇಶಿಸಿದೆ. ಈ ಹೆದ್ದಾರಿಯನ್ನು ಸಂಪೂರ್ಣ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲು ಕ್ರಮವಹಿಸಿ ಈ ವರೆಗೆ ಒಟ್ಟು 1012.75 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಿದ ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರಿಗೆ ಸಂಸದ ಬಿ.ವೈ.ರಾಘವೇಂದ್ರ ಖುದ್ದಾಗಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Similar News