ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

Update: 2022-12-22 17:41 GMT

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಭಾರತ್ ಸೌಟ್ಸ್-ಗೈಡ್ಸ್ ವತಿಯಿಂದ ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಭಾಗವಾಗಿ ಗುರುವಾರ 8 ಕಡೆಗಳಲ್ಲಿ ಸುಮಾರು 5,000 ಸ್ಕೌಟ್ಸ್-ಗೈಡ್ಸ್ ಪ್ರಶಿಕ್ಷಾರ್ಥಿಗಳು ಹಾಗೂ ಇತರ ಸ್ವಯಂಸೇವಕರು ಸ್ವಚ್ಛತಾ ಕಾರ್ಯಕೈಗೊಂಡರು.

ವಿದ್ಯಾರ್ಥಿಗಳ ಜತೆಗೆ ಗ್ರಾಪಂ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಸ್ಥಳೀಯ ಶಾಲಾ ಕಾಲೇಜುಗಳ ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಸ್ವಯಂಸೇವಕರು ಹಾಗೂ ಸಾರ್ವಜನಿಕರು ಸ್ವಚ್ಛತೆಯಲ್ಲಿ ಭಾಗವಸಿದರು.

ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ದ.ಕ ಜಿಪಂ ಸಿಇಒ ಡಾ. ಕುಮಾರ್‌ರ ಮಾರ್ಗದರ್ಶನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ಅಕ್ಷಯ್ ಜೈನ್, ನಿತಿನ್, ಕುಮಾರಸ್ವಾಮಿ, ದೀಪಕ್ ಕೊಳಕೆ, ಮೂಸಾ ಶರೀಫ್, ನಿತಿನ್ ಪೂಜಾರಿ, ಅಮರ್ ಕೋಟೆ, ತನ್ವಿ ರೈ, ರಂಜಿತಾ ಆಚಾರ್ಯ, ಸುಧಾಕರ್ ಪೂಂಜಾ ಮತ್ತಿತರರು  ಸ್ವಚ್ಛತಾ ಅಭಿಯಾನದ ನೇತೃತ್ವ ವಹಿಸಿದರು. 

►ನೇತ್ರಾವತಿ ತಂಡ : 650 ವಿದ್ಯಾರ್ಥಿಗಳು ಹಾಗೂ ಇನ್ನಿತರ ಸ್ಥಳೀಯರನ್ನೊಳಗೊಂಡ ನೇತ್ರಾವತಿ ತಂಡವು ವಾಮಂಜೂರಿನಿಂದ ಗುರುಪುರದವರೆಗೆ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿದರು. 

►ಶರಾವತಿ ತಂಡ: ಕಾರ್ಕಳದ 8 ರಸ್ತೆಗಳಲ್ಲಿ ಸ್ವಚ್ಛತೆ ಕೈಗೊಂಡ ಶರಾವತಿ ತಂಡದ 250 ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು, ಭುವನೇಂದ್ರ ಕಾಲೇಜಿನ 150 ಎನ್‌ಎಸ್‌ಎಸ್ ಸ್ವಯಂಸೇವಕರು ದಾನ ಶಾಲೆ, ಗ್ಯಾಸ್ ಗೋದಾಮು, ಆನೆಕೆರೆ, ಮೂರುಮಾರ್ಗ, ಸಾಣೂರು, ಪುಲ್ಕೇರಿ, ಅನಂತಶಯನ ರಸ್ತೆಗಳಲ್ಲಿ 5 ಕಿ.ಮೀ. ಸ್ವಚ್ಛತೆ ನಡೆಸಿದರು.

►ಶಾಂಭವಿ ತಂಡ: ಮುಲ್ಕಿ ಕಾರ್ನಾಡು ಜಂಕ್ಷನ್‌ನಿಂದ ಕಿಲ್ಪಾಡಿ ರೈಲ್ವೆ ಸ್ಟೇಷನ್‌ವರೆಗೆ, ಬಪ್ಪನಾಡು ದೇವಾಲಯದಿಂದ ಪುನರೂರಿನವರೆಗೆ ಶಾಂಭವಿ ತಂಡವು ಸುಮಾರು 7.2 ಕಿ.ಮೀ ರಸ್ತೆಯನ್ನು ಸ್ವಚ್ಛಗೊಳಿಸಿದರು. 250 ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು, 50 ಮಂದಿ ಎನ್‌ಸಿಸಿ ವಿದ್ಯಾರ್ಥಿಗಳು ಮತ್ತಿತರರು ಪಾಲ್ಗೊಂಡಿದ್ದರು.

►ಎತ್ತಿನಹೊಳೆ ತಂಡ: ಎತ್ತಿನಹೊಳೆ ತಂಡವು ಬಂಟ್ವಾಳ-ಮೂಡುಬಿದಿರೆ ಜಂಕ್ಷನ್‌ನಿಂದ ಸೊರ್ನಾಡು ಅಂಗನವಾಡಿಯವರೆಗೆ ಸುಮಾರು 7.5 ಕಿ.ಮೀ.ನಷ್ಟು ರಸ್ತೆಯನ್ನು ಸ್ವಚ್ಛಗೊಳಿಸಿದರು. 250 ಸೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು, ಅಮ್ಟಾಡಿ ಗ್ರಾಪಂ ಅಧಿಕಾರಿಗಳು, ಪಂಜಿಕಲ್ ಗ್ರಾಪಂ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯರ ಸಹಿತ  800 ಮಂದಿ ಸ್ವಚ್ಛತೆಯಲ್ಲಿ ಪಾಲ್ಗೊಂಡರು.

►ಇತರ ತಂಡಗಳು: ಹೊಸ್ಮಾರಿನ ಈದು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 5 ಕೀ.ಮೀ. ಸ್ವಚ್ಛತೆಯನ್ನು ಪಯಸ್ವಿನಿ ತಂಡ, ಬೆಳ್ಮಣ್‌ನಲ್ಲಿ ಸ್ವರ್ಣಹೊಳೆ ತಂಡದ ಜತೆಗೆ ಫಲ್ಗುಣಿ ಹಾಗೂ ನಂದಿನಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.