×
Ad

ಡಾ.ಶಶಿಕಿರಣ್‌ಗೆ ‘ಅಲೆವೂರು ಗ್ರೂಪ್’ ಪ್ರಶಸ್ತಿ ಪ್ರದಾನ

Update: 2022-12-23 22:07 IST

ಉಡುಪಿ: ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೊರೋನಾ ಸೋಂಕು ಮತ್ತೆ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಆತಂಕ ಬೇಡ. ಭಾರತದಲ್ಲಿ ಶೇ.90ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಆದರೂ ಮುನ್ನಚ್ಛರಿಕಾ ಕ್ರಮ ಅವಶ್ಯಕ ಎಂದು ಉಡುಪಿ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಹೇಳಿದ್ದಾರೆ.

ಅಲೆವೂರಿನ ಶಾಂತಿ ನಿಕೇತನ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಲೆವೂರು ಗ್ರೂಪ್ ಫೋರ್ ಎಜ್ಯುಕೇಶನ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಅಲೆವೂರು ಗ್ರೂಪ್ ಅವಾರ್ಡ್’ನ್ನು 2022ನೇ ಸಾಲಿನಲ್ಲಿ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಕೋವಿಡ್-19 ಆರಂಭದಲ್ಲೇ ಮುನ್ನಚ್ಛರಿಕಾ ಕ್ರಮ ಕೈಗೊಳ್ಳಲಾಗಿತ್ತು. ಈ ಸಾಂಕ್ರಾಮಿಕ ರೋಗವನ್ನು  ಸಾರ್ವಜನಿಕರ ಸಹಕಾರದೊಂದಿಗೆ ವೈದ್ಯಕೀಯ ಕ್ಷೇತ್ರ ಸಮರ್ಥವಾಗಿ ಎದುರಿಸಿದ ಪರಿಣಾಮ ಮುಂದಾಗುವ ತೊಂದರೆ ಯನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯವಾಗಿತ್ತು. ನಮ್ಮಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಜಾಗತಿಕ ಮಟ್ಟದಲ್ಲಿ ಮಾದರಿಯಾಗಿತ್ತು. ಭಾರತದಲ್ಲಿ ಕೋವಿಡ್ ಲಸಿಕೆ ವಿತರಣೆ ಉತ್ತಮವಾಗಿ ನಡೆದಿದೆ. ಈ ಬಾರಿ ಕೋವಿಡ್ ಸೋಂಕು ಕಾಣಿಸಿಕೊಂಡರೂ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇರಬಹುದು ಎಂದವರು ಅಭಿಪ್ರಾಯಪಟ್ಟರು.

ದೇಶದಲ್ಲಿ ಕೋವಿಡ್ ಮಾದರಿಯಲ್ಲೇ ಅನೇಕ ಸವಾಲುಗಳು ಭವಿಷ್ಯದಲ್ಲಿ ಎದುರಾಗಬಹುದು. ಯುವ ಸಮುದಾಯ ಈ ಎಲ್ಲಾ ಸವಾಲುಗಳನ್ನು ಎದುರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಲೆವೂರು ಗ್ರೂಪ್ ಫಾರ್ ಎಜುಕೇಶನ್ ಅಧ್ಯಕ್ಷ ಎ.ಗಣಪತಿ ಕಿಣಿ ಅಧ್ಯಕ್ಷತೆ ವಹಿಸಿದ್ದರು. 317ಸಿ ಜಿಲ್ಲಾ ಮಾಜಿ ಗವರ್ನರ್ ಎನ್.ಎಂ.ಹೆಗ್ಡೆ, ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್ ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ ಸ್ವಾಗತಿಸಿದರು. ಕೋಶಾಧಿಕಾರಿ ಹರೀಶ್ ಕಿಣಿ ಸನ್ಮಾನಿತರನ್ನು ಪರಿಚಯಿಸಿದರು. ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ್ ರೂಪಾ ಡಿ. ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿ, ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ವಿಭಾ ಅಡಿಗ ವಂದಿಸಿ, ಸುಹಾಸಿನಿ ಸರಳಾಯ, ಶ್ರೀನಿವಾಸ್ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

Similar News