ಸಾಸ್ತಾನ: ಆರ್ ಟಿಐ ಕಾರ್ಯಕರ್ತನಿಗೆ ಮನೆಗೆ ನುಗ್ಗಿ ಜೀವ ಬೆದರಿಕೆ
ಸಾಸ್ತಾನ, ಡಿ.25: ಮರಳುಗಾರಿಕೆ ನಿರತ ತಂಡವೊಂದು ಮಾರಕಾಸ್ತ್ರ, ದೊಣ್ಣೆಯೊಂದಿಗೆ ಮಾಹಿತಿ ಹಕ್ಕು ಕಾರ್ಯಕರ್ತನ ಮನೆಗೆ ಅಕ್ರಮವಾಗಿ ಪ್ರವೇಶಿಸಿ ದಾಳಿ ನಡೆಸಲು ಮುಂದಾದ ಘಟನೆ ಸಾಸ್ತಾನ ಸಮೀಪದ ಐರೋಡಿಯಲ್ಲಿ ಡಿ.24ರಂದು ನಡೆದಿರುವುದು ವರದಿಯಾಗಿದೆ.
ಆರ್ಟಿಐ ಕಾರ್ಯಕರ್ತ ಥೋಮಸ್ ರೋಡಿಗ್ರಸ್ ಎಂಬವರ ಮನೆಗೆ ಆರೋಪಿಗಳಾದ ಅರಾಟೆ ರಾಘವೇಂದ್ರ ಆಚಾರ್ಯ, ಕುಂಜಾಲು ಮನೋಜ್ ಆಚಾರ್ಯ, ಮೊವಾಡಿಯ ಸದಾ ಹಾಗೂ ನಾಗರಾಜ ಮೊವಾಡಿ, ರವಿ ಮೊಗವೀರ ಸೇನಾಪುರ, ಚಂದ್ರ ಅರಾಟೆ ಮೊದಲಾದವರು ಏಕಾಏಕಿ ಅಕ್ರಮ ಪ್ರವೇಶಗೈದು ಜೀವ ಬೆದರಿಕೆ ಹಾಕಿದ್ದಾರೆ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಹೊಸಾಡು ಸೇನಾಪುರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರೋಧಿಸಿ ಥೋಮಸ್ ನಡೆಸುತ್ತಿರುವ ಹೋರಾಟವನ್ನು ನಿಲ್ಲಿಸುವಂತೆ, ಇಲ್ಲವಾದರೆ ಕೊಲೆ ಮಾಡುವುದಾಗಿ ತಂಡ ಬೆದರಿಕೆಯೊಡ್ಡಿದೆ ಎಂದು ಆರೋಪಿಸಲಾಗಿದೆ.
ಹೀಗಾಗಿ ತನಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಥೋಮಸ್ ರೋಡಿಗ್ರಸ್ ಮನವಿ ಮಾಡಿದ್ದಾರೆ.