ಕಾಟಿಪಳ್ಳ ಜಲೀಲ್ ಕೊಲೆಗೆ ಬಿಜೆಪಿ ಸರಕಾರವೇ ನೇರ ಹೊಣೆ: ಡಿವೈಎಫ್‌ಐ

Update: 2022-12-25 18:44 GMT

ಮಂಗಳೂರು: ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಬಿಜೆಪಿ ಸರಕಾರ ಅದರಿಂದ ಪಾರಾಗಲು ಮತೀಯ ಧ್ರುವೀಕರಣದ ಅಪಾಯಕಾರಿ ಆಟಗಳನ್ನು ಆಡುತ್ತಿದೆ. ಕರಾವಳಿ ಭಾಗದಲ್ಲಿ ಪೊಲೀಸರ ಕೈಗಳನ್ನು ಕಟ್ಟಿಹಾಕಿ ಮತೀಯ ಗೂಂಡಾ ತಂಡಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅಂತಹ ದುಂಡಾವರ್ತನೆಯ ಭಾಗವಾಗಿಯೆ ಕಾಟಿಪಳ್ಳದಲ್ಲಿ ಜಲೀಲ್ ಎಂಬ ಅಮಾಯಕ ಅಂಗಡಿ ವ್ಯಾಪಾರಿಯ ಕೊಲೆಯಾಗಿದೆ. ಈ ಕೊಲೆಗೆ ಬಿಜೆಪಿ ಸರಕಾರವೇ ನೇರ ಹೊಣೆ ಎಂದು ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಬಿಜೆಪಿಯ ಮತೀಯ ವಿಭಜನೆಯ ಅಜೆಂಡಾವನ್ನು ರಾಜ್ಯದಲ್ಲಿ ಸರಕಾರವೇ ಮುಂದೆ ನಿಂತು ಪ್ರಾಯೋಜಿಸಿದೆ. ಹಿಜಾಬ್ ವಿವಾದ, ಹಲಾಲ್, ಜಟ್ಕಾ ಕಟ್, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದಂತಹ ಅಭಿಯಾನಗಳು ಕಾನೂನಿನ ಭಯವಿಲ್ಲದೆ ವ್ಯಾಪಕವಾಗಿ ನಡೆಯಿತು. ಇಂತಹ ಸಂದರ್ಭದಲ್ಲಿ ಪೊಲೀಸರು ಮೂಕಪ್ರೇಕ್ಷಕರಾಗುವ ಸಂದರ್ಭ ಎದುರಾಯಿತು. ಮುಖ್ಯಮಂತ್ರಿ ಬೊಮ್ಮಾಯಿ ಸ್ವತಃ ಈ ಅಜೆಂಡಾ ಜಾರಿಗೆ ಬಹಿರಂಗವಾಗಿ ಇಲ್ಲಿ ಮುಂಚೂಣಿಯಲ್ಲಿ ನಿಂತದ್ದು ಗಮನಾರ್ಹ. ಕೊಲೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬದ ಭೇಟಿಗೆ ಆಗಮಿಸಿದಾಗ ಮಸೂದ್ ಹಾಗೂ ಫಾಝಿಲ್ ಕುಟುಂಬವನ್ನು ಕಡೆಗಣಿಸಿದ್ದು, ಕೊಲೆಗೀಡಾದ ಈ ಎರಡೂ ಕುಟುಂಬಗಳಿಗೆ ಪರಿಹಾರ ನೀಡಲು ನಿರಾಕರಿಸಿದ್ದು ಸರಕಾರದ ತಾರತಮ್ಯ ನೀತಿಗೆ ಬಹಿರಂಗ ಉದಾಹರಣೆಯಾಗಿತ್ತು. ಜಿಲ್ಲೆಯ ಬಿಜೆಪಿ ಶಾಸಕ, ಸಂಸದರು ಇದೇ ಮಾದರಿಯನ್ನು ಅನುಸರಿಸಿ ಕೊಲೆಗೀಡಾದ ಮುಸ್ಲಿಮ್ ಕುಟುಂಬಗಳಿಗೆ ಕನಿಷ್ಟ ಸಾಂತ್ವನವನ್ನೂ ಹೇಳಲು ನಿರಾಕರಿಸಿ ಬಹಿರಂಗವಾಗಿ ತಾರತಮ್ಯ ತೋರಿದರು.

ಆಚರಿಸಿದರು. ಇದರ ಮುಂದುವರಿದ ಭಾಗವಾಗಿ ಕಳೆದ ಮೂರು ತಿಂಗಳುಗಳಲ್ಲಿ ನಿರಂತರವಾಗಿ ಮುಸ್ಲಿಮರ ಮೇಲೆ ಗುಂಪುಹಲ್ಲೆಗಳು ನಡೆಯುತ್ತಿದೆ. ಈ ಎಲ್ಲಾ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಂತ್ರಸ್ತರ ಮೇಲೆಯೆ ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದೆ. ದಾಳಿಕೋರ ಗುಂಪುಗಳೊಂದಿಗೆ ಮೃದುವಾಗಿ ನಡೆದು ಕೊಂಡಿದೆ. ಇದೆಲ್ಲವೂ ಪೊಲೀಸರ ಕೈಗಳನ್ನು ಬಿಜೆಪಿ ಸರಕಾರ ಕಟ್ಟಿಹಾಕಿರುವುದರ ಪರಿಣಾಮ ಎಂಬುದು ವಾಸ್ತವ ವಿಚಾರ. ಆ ಮೂಲಕ ಚುನಾವಣೆಯ ಸಂದರ್ಭ ಹಿಂದು ಮುಸ್ಲಿಂ ವಿಭಜನೆಯನ್ನು ಮತ್ತಷ್ಟು ತೀವ್ರಗೊಳಿಸುವುದು ಬಿಜೆಪಿಯ ಘೋಷಿತ ಅಜೆಂಡಾವಾಗಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದೆ.

ಇಂತಹ ಬಹಿರಂಗ ತಾರತಮ್ಯ, ಪೊಲೀಸರ ಮೌನದ ಪರಿಣಾಮವಾಗಿಯೇ ಕಾಟಿಪಳ್ಳದಲ್ಲಿ ಅಂಗಡಿ ವ್ಯಾಪಾರಿ ಜಲೀಲ್ ಕೊಲೆಗೆ ಕೋಮುವಾದಿ ಸಂಘಟನೆಗಳ ಸಹವಾಸ ಹೊಂದಿರುವ ಕ್ರಿಮಿನಲ್‌ಗಳಿಗೆ ಕುಮ್ಮಕ್ಕು ದೊರಕಿದೆ. ಬಿಜೆಪಿ ಸರಕಾರದ ಇಂತಹ ಅಪಾಯಕಾರಿ ನೀತಿಗಳ ಕುರಿತು ಜನತೆ ಎಚ್ಚರಗೊಳ್ಳಬೇಕು. ಸರಕಾರದ ಘೋರ ವೈಫಲ್ಯ, ಜನಪ್ರತಿನಿಧಿಗಳ ವಿರುದ್ದ ಮತದಾರರಲ್ಲಿ ಮೂಡಿರುವ ಅಸಮಾಧಾನದಿಂದ ಚುನಾವಣೆಯ ಸಂದರ್ಭ ತಪ್ಪಿಸಿಕೊಳ್ಳಲು ನಡೆಸುತ್ತಿರುವ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಬೇಕು. ಅಮಾಯಕ ಜಲೀಲ್ ಕೊಲೆಯ ನಿಷ್ಪಕ್ಷಪಾತ ತನಿಖೆ ಹಾಗೂ ಆ ಕುಟುಂಬಕ್ಕೆ ಪರಿಹಾರ ಒದಗಿಸಲು ಧರ್ಮಾತೀತವಾಗಿ ಜನತೆ ಒಗ್ಗಟ್ಟಿನಿಂದ ಆಗ್ರಹಿಸಬೇಕು ಎಂದು ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.

Similar News