×
Ad

ಕುಂದಾಪುರ: ದೇವಸ್ಥಾನದ ಬಾಗಿಲು ಮುರಿದು ನಗದು ಕಳವು

Update: 2022-12-30 21:04 IST

ಕುಂದಾಪುರ: ತಾಲೂಕಿನ ರಟ್ಟಾಡಿ ಗ್ರಾಮದ ರಟ್ಟೇಶ್ವರ ದೇವಸ್ಥಾನದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ ಸಾವಿರಾರು ರೂ. ನಗದು ಕಳವುಗೈದ ಬಗ್ಗೆ ವರದಿಯಾಗಿದೆ.

ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಹೆಬ್ಬಾಗಿಲಿನ ಹತ್ತಿರ ಇರುವ ಕಾಣಿಕೆ ಡಬ್ಬಿ ಹಾಗೂ ನಾಗ ದೇವರ ಹತ್ತಿರ ಇರುವ ಕಾಣಿಕೆ ಡಬ್ಬಿಯ ಬೀಗ ಮುರಿದು ನಗದು ಕಳವು ಮಾಡಿದ್ದಾರೆ. ಅಲ್ಲದೆ, ಕಛೇರಿಯ ಬಾಗಿಲು ತೆರೆದು ಒಳ ಪ್ರವೇಶಿಸಿ ಸಿಸಿ ಕ್ಯಾಮರಾದ ಹಾರ್ಡ್ ಡಿಸ್ಕ್ ಅನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. 

ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 40 ಸಾವಿರ ರೂ.ನಗದು ಮತ್ತು ಹಾರ್ಡ್ ಡಿಸ್ಕ್ ನ ಮೌಲ್ಯ ಸುಮಾರು 7000 ಸಾವಿರ ರೂ. ಸೇರಿದಂತೆ ಒಟ್ಟು ಸುಮಾರು 47 ಸಾವಿರ ರೂ. ಮೌಲ್ಯದ ಸೊತ್ತು ಕಳವುಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News