ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣ: ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ

Update: 2023-01-04 15:33 GMT

ಮಂಗಳೂರು: ರಾಜ್ಯಾದ್ಯಂತ ಭಾರೀ ಚರ್ಚೆಗೊಳಗಾಗಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ವಿಚಾರಣೆಯು 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರದಿಂದ ಆರಂಭಗೊಂಡಿದೆ.

ರಾಜ್ಯ ಸರಕಾರದಿಂದ ವಿಶೇಷವಾಗಿ ನೇಮಕಗೊಂಡಿದ್ದ ಬೆಂಗಳೂರಿನ ಹಿರಿಯ ನ್ಯಾಯವಾದಿ ಎಸ್.ಬಾಲಕೃಷ್ಣನ್ ಸರಕಾರದ ಪರವಾಗಿ ವಾದಿಸುತ್ತಿದ್ದಾರೆ.

ನಗರದ ವೆಂಕಟರಮಣ ದೇವಸ್ಥಾನದ ಬಳಿ 2016ರ ಮಾರ್ಚ್ 21ರಂದು ವಿನಾಯಕ ಬಾಳಿಗಾರನ್ನು ಮಾರಕಾಸ್ತ್ರ ಬಳಸಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಯಕ ಬಾಳಿಗಾರ ಸಹೋದರಿ ಅನುರಾಧಾ ಬಾಳಿಗಾ ನೀಡಿದ ದೂರಿನಂತೆ ಬರ್ಕೆ ಪೊಲೀಸರು ನಮೋ ಬ್ರಿಗೇಡ್‌ನ ಮುಖ್ಯಸ್ಥ ನರೇಶ್ ಶೆಣೈ, ಶ್ರೀಕಾಂತ್, ಶಿವಪ್ರಸಾದ್, ವಿನೀತ್ ಪೂಜಾರಿ, ನಿಶ್ಚಿತ್ ದೇವಾಡಿಗ, ಶೈಲೇಶ್, ಮಂಜುನಾಥ್ ಶೆಣೈ, ವಿಘ್ನೇಶ್ ನಾಯಕ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.

ಈ ಮಧ್ಯೆ ರಾಜಕೀಯ ಒತ್ತಡದಿಂದ ಕೊಲೆ ಕೃತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

ಆದಾಗ್ಯೂ ಪ್ರತಿಭಟನೆ, ರ್‍ಯಾಲಿ ನಡೆದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಇದಾದ ಕೆಲವು ಸಮಯದ ಬಳಿಕ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದರು.

ಈ ಮಧ್ಯೆ ಆರೋಪಿಗಳ ಪೈಕಿ ವಿಘ್ನೇಶ್ ನಾಯಕ್ ಎಂಬಾತ 2020ರ ನವೆಂಬರ್‌ನಲ್ಲಿ ತನ್ನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆತ್ಮಹತ್ಯೆಗೆ ಕಾರಣ ಏನು ಎಂಬುದು ಸ್ಪಷ್ಟಗೊಂಡಿರಲಿಲ್ಲ.

ಕೊಲೆ ಪ್ರಕರಣದ ತನಿಖೆಯು ಸಮರ್ಪಕವಾಗಿ ನಡೆಯುತ್ತಿಲ್ಲ. ಪೊಲೀಸರ ಮೇಲೆ ರಾಜಕಾರಣಿಗಳು ಒತ್ತಡ ಹೇರುತ್ತಿದ್ದಾರೆ ಎಂದು ‘ಸಮಾನ ಮನಸ್ಕ ದೇಶಪ್ರೇಮಿ’ ಸಂಘಟನೆಯ ಪ್ರಮುಖರು ಆರೋಪಿಸಿದ್ದರಲ್ಲದೆ, ರ್‍ಯಾಲಿ ಪ್ರತಿಭಟನೆಯ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ತನಿಖೆಗೆ ‘ಎಸ್‌ಐಟಿ’ ರಚಿಸಬೇಕು ಎಂದು ಆಗ್ರಹಿಸಿದ್ದರು.

ಒಟ್ಟಿನಲ್ಲಿ ರಾಜಕೀಯ ಒತ್ತಡದ ಮಧ್ಯೆಯೂ ರಾಜ್ಯ ಸರಕಾರವು ಎರಡು ತಿಂಗಳ ಹಿಂದೆ ಅಂದರೆ 2022ರ ನವೆಂಬರ್ 2ರಂದು ಹಿರಿಯ ನ್ಯಾಯವಾದಿ ಎಸ್. ಬಾಲಕೃಷ್ಣನ್ ಅವರನ್ನು ಸರಕಾರಿ ವಿಶೇಷ ಅಭಿಯೋಜಕರನ್ನಾಗಿ ನೇಮಿಸಿತ್ತು.

ಇದೀಗ ಜಿಲ್ಲಾ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ಆರಂಭಗೊಂಡಿವೆ. ಮಂಗಳವಾರ ಐದು ಮಂದಿ ಸಾಕ್ಷಿದಾರರು ಹೇಳಿಕೆ ನೀಡಿದ್ದರೆ, ಬುಧವಾರ 6 ಮಂದಿಯ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Similar News