ಜಿಲ್ಲೆಯಲ್ಲಿ ಹನ್ನೊಂದು ವಿದ್ಯುತ್ ಸಬ್ಸ್ಟೇಷನ್ಗೆ ಅನುಮೋದನೆ: ವಿ. ಸುನಿಲ್ ಕುಮಾರ್
ಸುಳ್ಯದ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಗೆ ಶಂಕುಸ್ಥಾಪನೆ
ಸುಳ್ಯ: ವಿದ್ಯುತ್ ಬೇಡಿಕೆಯನ್ನು ಮುಂದಿರಿಸಿ ಜಿಲ್ಲೆಯಲ್ಲಿ ಪ್ರಸ್ತಾವನೆಯಲ್ಲಿದ್ದ ಹನ್ನೊಂದು 110 ಕೆ.ವಿ. ಸಬ್ ಸ್ಟೇಷನ್ಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಸುಳ್ಯ ಅಂಬಟಡ್ಕದ 33/11 ಕೆ.ವಿ.ಸಬ್ಸ್ಟೇಷನ್ ಬಳಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ ಸುಳ್ಯದಲ್ಲಿ ನಿರ್ಮಾಣವಾಗುವ 110/33/11 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಮತ್ತು 110 ಕೆವಿ ಮಾಡಾವು-ಸುಳ್ಯ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸಂಪಾಜೆ, ನಿಂತಿಕಲ್ಲು ಮತ್ತು ಚಾರ್ವಾಕ ಸೇರಿ 3 ಕಡೆ ಹೊಸ 33 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗುವುದು. ಅಲ್ಲದೇ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಇದ್ದ ಹಲವಾರು ವಿದ್ಯುತ್ ಯೋಜನೆಗಳಿಗೆ ಕಳೆದ ಒಂದೂವರೆ ವರ್ಷದಲ್ಲಿ ಮಂಜೂರಾತಿ ನೀಡಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 200 ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು.
ಒಂದೂಕಾಲು ವರ್ಷದ ಹಿಂದೆ ಇಂಧನ ಸಚಿವರಾಗಿ ಸುಳ್ಯಕ್ಕೆ ಬಂದಾಗ ಸುಳ್ಯದ 110 ಕೆವಿ ಸಬ್ ಸ್ಟೇಷನ್ ನಿರ್ಮಾಣ ಬಹಳ ದೊಡ್ಡ ಬೇಡಿಕೆಯಾಗಿತ್ತು.ಈ ಬಗ್ಗೆ ಹಲವಾರು ಬೇಡಿಕೆಗಳು, ಟೀಕೆಗಳು ನನ್ನ ಕಿವಿಗೂ ಬಿದ್ದಿತ್ತು.110 ಕೆವಿ ಸಬ್ ಸ್ಟೇಷನ್ ಮಾಡಿಯೇ ಮಾಡುತ್ತೇವೆ ಎಂದು ಅಂದು ಮಾತು ಕೊಟ್ಟಿದ್ದೆ.ಸುಳ್ಯದ ಜನತೆಗೆ ಕೊಟ್ಟ ಆ ಮಾತನ್ನು ಉಳಿಸಿಕೊಂಡಿದ್ದೇವೆ ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ, ಎಲ್ಲಾ ಸವಾಲುಗಳನ್ನು ಹಾಗು ಟೀಕೆಗಳನ್ನು ಎದುರಿಸಿ 110 ಕೆ.ವಿ ಸಬ್ ಸ್ಟೇಷನ್ ಕಾಮಗಾರಿ ಅನುಷ್ಠಾನಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೇವೆ. ಅರಣ್ಯ ಭೂಮಿ ದೊರೆಯುವುದು ದೊಡ್ಡ ಸಮಸ್ಯೆಯಾಗಿತ್ತು. ನಮ್ಮ ಜಿಲ್ಲೆಯವರೇ ಅರಣ್ಯ ಸಚಿವರಾಗಿದ್ದರೂ ಅರಣ್ಯ ಸಮಸ್ಯೆಯನ್ನು ಪರಿಹರಿಸಿಲ್ಲ. ಸಮಸ್ಯೆ ಪರಿಹರಿಸಿದರೆ ಕ್ರೆಡಿಟ್ ಅಂಗಾರರಿಗೆ ಸಿಗುತ್ತದೆ ಎಂಬ ಕಾರಣದಿಂದ ಆ ಸಮಸ್ಯೆ ಪರಿಹರಿಸಿಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ ಕುರುಂಜಿ, ತಹಸೀಲ್ದಾರ್ ಅನಿತಾಲಕ್ಷ್ಮಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಂಜಪ್ಪ, ಮೆಸ್ಕಾಂ ಮುಖ್ಯ ಇಂಜಿನಿಯರ್ ಪುಷ್ಪಾ, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಮಂಜುನಾಥ ಶ್ಯಾನುಭೋಗ್, ಅಧೀಕ್ಷಕ ಇಂಜಿನಿಯರ್ ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ರವಿಕಾಂತ್ ಆರ್ ಕಾಮತ್ ಹೆಚ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾಧರ. ಕೆ ವಂದಿಸಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.