ಪ್ರಾಣಿವಧೆ ಮಾಡಿ ಮಾಂಸವನ್ನು ತೂಗುಹಾಕಬೇಡಿ: ಪೇಜಾವರಶ್ರೀ ಪುನರುಚ್ಚಾರ
"ಮಾಂಸಾಹಾರವನ್ನು ವಿರೋಧಿಸಿ ಯಾವುದೇ ಮಾತನಾಡಿಲ್ಲ"
ಉಡುಪಿ: ಮಕ್ಕಳಿಗೆ ಸಾತ್ವಿಕ ಆಹಾರ ನೀಡಿ. ಪ್ರಾಣಿಗಳನ್ನು ವಧೆ ಮಾಡಿ ಮಾಂಸವನ್ನು ಅಂಗಡಿ ಮುಂದೆ ನೇತುಹಾಕಬೇಡಿ. ಇದು ಮಕ್ಕಳಲ್ಲಿ ಹಿಂಸಾತ್ಮಕ ಮನೋಭಾವನೆಗೆ ಕಾರಣವಾಗುತ್ತದೆ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪುನರುಚ್ಚರಿಸಿದ್ದಾರೆ.
ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಮ್ಮಿಕೊಂಡಿದ್ದ ಮಠಾಧೀಶರುಗಳು ಹಾಗೂ ಧರ್ಮಗುರುಗಳ ದುಂಡುಮೇಜಿನ ಸಮಾಲೋಚನಾ ಸಭೆಯಲ್ಲಿ ಪೇಜಾವರಶ್ರೀಗಳು ನೀಡಿದ ಈ ಸಲಹೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.
ಮಕ್ಕಳ ಮುಂದೆ ಪ್ರಾಣಿ ವಧೆ ಮಾಡಬಾರದು. ಅವರ ಮುಂದೆ ಅಂಗಡಿಗಳಲ್ಲಿ ಮಾಂಸ ನೇತು ಹಾಕಬಾರದು. ಮಾಂಸದ ಅಂಗಡಿಗಳಲ್ಲಿ ನೇತು ಹಾಕುವ ಪದ್ಧತಿ ನಿಲ್ಲಿಸಬೇಕು ಅಥವಾ ಅದನ್ನು ಮರೆ ಮಾಡಬೇಕು ಎಂದು ಸರಕಾರಕ್ಕೆ ನೀಡಿದ ಸಲಹೆಯನ್ನು ಅವರು ಇಲ್ಲಿ ಮತ್ತೆ ಪುನರಾವರ್ತಿಸಿದರು.
ಅಭಿಪ್ರಾಯ ಮಂಡನೆಯ ಬಗ್ಗೆ ಯಾರ ತಕರಾರು ಇರಲಿಲ್ಲ. ಸಮಾಜದ ಶಾಂತಿ ಸುವ್ಯವಸ್ಥೆ ನೆಮ್ಮದಿಗಾಗಿ ಧರ್ಮಗುರುಗಳು ಸಲಹೆ ನೀಡಿದ್ದೇವೆ. ಮಕ್ಕಳಿಂದ ನಾವು ಏನು ಬಯಸುತ್ತೇವೋ, ಅದನ್ನೇ ತೋರಿಸಬೇಕು. ಸಮಾಜದಲ್ಲಿ ನಾವು ಬೇಡ ಎಂದು ಬಯಸುವ ಯಾವುದೇ ದೃಶ್ಯ ಮಾತು ನಡವಳಿಕೆ ಮಕ್ಕಳ ಮುಂದೆ ಕಾಣಬಾರದು ಎಂದರು.
ಮಾಂಸದ ಅಂಗಡಿಗಳು ಯಾವುದು ಎಂದು ಎಲ್ಲರಿಗೂ ಗೊತ್ತಿರುತ್ತೆ. ಪ್ರಾಣಿವಧೆಯನ್ನು ಮಕ್ಕಳ ಎದುರಲ್ಲಿ ಮಾಡಲೇಬಾರದು. ಕೇವಲ ಮಾಂಸದ ಅಂಗಡಿ ಮಾತ್ರವಲ್ಲ ಮನೆಯಲ್ಲೂ ಈ ನಿಯಮ ಪಾಲಿಸಿ. ದಯವಿಟ್ಟು ಮಕ್ಕಳ ಎದುರಲ್ಲಿ ಪ್ರಾಣಿವಧೆ ಮಾಡಬೇಡಿ. ರಕ್ತ ಚಿಮ್ಮುವ, ಜೋತಾಡುವ, ಸ್ಥಿತಿಯಲ್ಲಿ ಪ್ರಾಣಿಗಳನ್ನು ಮಾರ್ಗದ ಬದಿಯಲ್ಲಿ ನೇತು ಹಾಕುವುದು ಸರಿಯಲ್ಲ. ಬೇಕಿದ್ದರೆ ವಧೆ ಮಾಡಿದ ಪ್ರಾಣಿಯನ್ನು ಒಳಗಿಟ್ಟುಕೊಳ್ಳಿ. ಪುಟ್ಟ ಮಕ್ಕಳ ಮನಸ್ಸು ವಿಕಾರ ಆಗುವ ಸಾಧ್ಯತೆ ಇದೆ. ನಿತ್ಯವೂ ಅದನ್ನೇ ನೋಡಿದರೆ ರೂಢಿಯಾಗುವ ಅಪಾಯ ಇದೆ ಎಂದರು.
ಇದು ಸಮಾಜಕ್ಕೆ ನನ್ನ ಸಲಹೆ. ಮಕ್ಕಳು ಸಾತ್ವಿಕ ಆಹಾರ ತಿನ್ನಬೇಕು ಎಂದು ಹೇಳಿದ್ದೇನೆ. ಸಸ್ಯಾಹಾರ ಮತ್ತು ಮಾಂಸಹಾರ ಎರಡರಲ್ಲೂ ಸಾತ್ವಿಕ ಮತ್ತು ತಾಮಸ ಗುಣಗಳಿವೆ. ಮನಸ್ಸನ್ನು ಉದ್ವಿಗ್ನಗೊಳಿಸುವ ಥಾಮಸ ಆಹಾರವನ್ನು ಮಕ್ಕಳಿಗೆ ಕೊಡಬೇಡಿ. ಮಕ್ಕಳಿಗೆ ಒಳ್ಳೆಯ ಭಾವನೆ ಮೂಡುವ ಆಹಾರ ನೀಡಿ ಎಂದು ಸ್ವಾಮೀಜಿ ಸಲಹೆ ನೀಡಿದರು.
ವಿರೋಧಿಸಿಲ್ಲ: ಮಾಂಸಾಹಾರವನ್ನು ವಿರೋಧಿಸಿ ನಾನು ಯಾವುದೇ ಮಾತನಾಡಿಲ್ಲ. ಸಸ್ಯಾಹಾರದಲ್ಲೂ ತಮಸ ಆಹಾರ ಇರಬಹುದು. ಮಾಂಸಹಾರದಲ್ಲಿ ಸಾತ್ವಿಕ ಆಹಾರ ಇರಬಹುದು. ಮಕ್ಕಳಿಗೆ ನೈತಿಕ ಮೌಲ್ಯ ಗಳನ್ನು ನೀಡಬೇಕು ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದರು.
ಕಾರ್ಟೂನ್ಗಳು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತವೆ. ಕಾರ್ಟೂನ್ ಮೂಲಕ ನೈತಿಕ ಮೌಲ್ಯ ತೋರಿಸಬೇಕು. ಇದಕ್ಕಾಗಿ ಪ್ರತ್ಯೇಕ ತರಗತಿ ಮಾಡಬೇಕು. ನೈತಿಕ ಮೌಲ್ಯದ ದೃಶ್ಯಗಳನ್ನು ಮಕ್ಕಳ ಮೂಲಕ ಆಡಿಸಬೇಕು. ಒಂದು ತರಗತಿಯಲ್ಲಿ ಮೌಲ್ಯ ಪ್ರದರ್ಶಿಸುವ ರಾಮಾಯಣ, ಮಹಾಭಾರತದ ಪಾತ್ರಗಳನ್ನು ಮಕ್ಕಳು ನಟಿಸಬೇಕು. ಮಕ್ಕಳು ಪಾತ್ರದೊಳಗೆ ಪರಕಾಯ ಪ್ರವೇಶವಾಗುತ್ತಾರೆ. ಇವುಗಳು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತವೆ ಎಂದು ಪೇಜಾವರಶ್ರೀ ನುಡಿದರು.