ಚಿಕನ್ ಖಾದ್ಯದಲ್ಲಿ ಹುಳ: ಸಾಮಾಜಿಕ ಜಾಲತಾಣದಲ್ಲಿ ವೈರಲ್

ಉಪ್ಪಿನಂಗಡಿಯ ಹೊಟೇಲೊಂದಕ್ಕೆ ಬೀಗ ಮುದ್ರೆ

Update: 2023-01-12 18:38 GMT

ಉಪ್ಪಿನಂಗಡಿ:  ಹುಳವಿದ್ದ ಚಿಕನ್ ಖಾದ್ಯವನ್ನು ಗ್ರಾಹಕರಿಗೆ ನೀಡಿದ್ದಾರೆಂಬ ಆಪಾದನೆಯ ಸಚಿತ್ರ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದ.ಕ. ಜಿಲ್ಲಾಧಿಕಾರಿಯವರ ನಿರ್ದೇಶನದಂತೆ  ಪುತ್ತೂರು ತಹಶೀಲ್ದಾರ್ ನೇತೃತ್ವದ ತಂಡ  ದಾಳಿ ನಡೆಸಿ ಹೊಟೇಲನ್ನು ಮುಚ್ಚಿಸಿದ  ಘಟನೆ  ಉಪ್ಪಿನಂಗಡಿಯಿಂದ ವರದಿಯಾಗಿದೆ.

ಉಪ್ಪಿನಂಗಡಿಯ ಹಳೇ ಬಸ್ ನಿಲ್ದಾಣದ ಪರಿಸರದಲ್ಲಿನ ಮಾಂಸಾಹಾರಿ ಹೊಟೇಲೊಂದರಲ್ಲಿ ಗ್ರಾಹಕನಾಗಿ ಹೋಗಿದ್ದ ವೇಳೆ ನೀಡಲಾದ ಚಿಕನ್ ಫ್ರೈಯಲ್ಲಿ ಹುಳವೊಂದು ಕಾಣಿಸಿಕೊಂಡಿತ್ತೆನ್ನಲಾಗಿದೆ. ಈ ಮಾಹಿತಿಯು ಭಾರೀ ಪ್ರಮಾಣದಲ್ಲಿ ವೈರಲ್ ಆದಾಗ ಎಚ್ಚೆತ್ತ ಜಿಲ್ಲಾಡಳಿತ ಈ ಬಗ್ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಸತ್ಯ ಶೋಧನೆ ನಡೆಸಲು ನಿರ್ದೇಶನ ನೀಡಿತು.

ಅದರಂತೆ ಪುತ್ತೂರು ತಹಶೀಲ್ದಾರ್ ನಿಸರ್ಗ ಪ್ರಿಯ, ಉಪ್ಪಿನಂಗಡಿ ಉಪ ತಹಶೀಲ್ದಾರ್ ಚೆನ್ನಪ್ಪಗೌಡ, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಪೊಲೀಸ್ ಸಬ್‌ಇನ್‌ಸ್ಪೆೆಕ್ಟರ್ ರಾಜೇಶ್ ಕೆ.ವಿ., ವಿಎ ಮಹೇಶ್, ಕಂದಾಯ ಇಲಾಖಾ ಸಿಬ್ಬಂದಿ ಯತೀಶ್ ಮಡಿವಾಳ್, ಮತ್ತಿತರನ್ನು ಒಳಗೊಂಡ ಅಧಿಕಾರಿಗಳ ತಂಡ ಗುರುವಾರ ರಾತ್ರಿ ಡಿಢೀರ್ ದಾಳಿ ನಡೆಸಿ ಆಹಾರ ಖಾದ್ಯಗಳ ತಪಾಸಣೆ ನಡೆಸಿತು. ಮಾಂಸ ಸಂಗ್ರಹಣಾ ಫ್ರಿಡ್ಜ್‌ಗಳನ್ನು ಪರಿಶೀಲಿಸಿತು. ಕೆಲವೊಂದು ಖಾದ್ಯಗಳ ಸ್ಯಾಂಪಲ್ ಗಳನ್ನು  ಪರೀಕ್ಷಾಕೇಂದ್ರಕ್ಕೆ ಕಳುಹಿಸಲು  ಸಂಗ್ರಹಿಸಲಾಯಿತು.

ಈ ವೇಳೆ ಹೋಟೇಲ್ ಉದ್ಯಮಕ್ಕೆ ಸಂಬಂಧಿಸಿ ಪಂಚಾಯತ್ ಪರವಾನಿಗೆ, ಆಹಾರ ವಿಭಾಗದ ಪರವಾನಿಗೆ, ಆರೋಗ್ಯ ಇಲಾಖಾ ಪರವಾನಿಗೆಯನ್ನು ಹೊಂದದೇ ಇರುವುದು ಕಂಡು ಬಂದಾಗ ತಹಶೀಲ್ದಾರ್  ಹೊಟೇಲನ್ನು ಮುಚ್ಚಿಸಲು  ನಿರ್ದೇಶನ ನೀಡಿದರು. ಅದರಂತೆ ಅಧಿಕಾರಿಗಳು ಹೊಟೇಲನ್ನು ಬಂದ್ ಮಾಡಿಸಿದರು.
ದಾಳಿ ವೇಳೆ ಸ್ಥಳೀಯ ಪೊಲೀಸರು ಸೂಕ್ತ ಬಂದೋ ಬಸ್ತು ಕೈಗೊಂಡಿದ್ದರು.

Similar News