ಮಂಗಳೂರು: 35ಕ್ಕೂ ಅಧಿಕ ಕಳವು‌ ಪ್ರಕರಣದ ಆರೋಪಿಯ ಬಂಧನ

ಹೂವಿನ ಅಂಗಡಿಯಿಂದ ಕದ್ದ ಹಣವನ್ನು ನೆಲದಡಿ ಬಚ್ಚಿಟ್ಟಿದ್ದ ಆರೋಪಿಯ ಸೆರೆ

Update: 2023-01-15 10:01 GMT

ಮಂಗಳೂರು, ಜ.15:ನಗರದ ಕೆ.ಎಸ್.ರಾವ್ ರಸ್ತೆಯ ನಲಪಾಡ್ ಅಪ್ಸರಾ ಛೇಂಬರ್ಸ್‌ ಕಟ್ಟಡದ ನೆಲಮಹಡಿಯ ಹೂವಿನ ಅಂಗಡಿಯೊಂದರಿಂದ ಕದ್ದ ಹಣವನ್ನು ನೆಲದಡಿ ಬಚ್ಚಿಟ್ಟಿದ್ದ ಆರೋಪಿಯನ್ನು ಸೆರೆಹಿಡಿಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿತನನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಮದ್ದಡ್ಕ, ಅಜ್ರಿಮಾರ್ ಹೌಸ್‌ನ ಹಮೀದ್ ಕುಂಞಿಮೋನು ಯಾನೆ ಜಾಫರ್ ಯಾನೆ ಹಮೀದ್ (48) ಎಂದು ಗುರುತಿಸಲಾಗಿದೆ.

ರವಿವಾರ ಬಂದರ್ ಠಾಣೆಯಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಶಶಿಕುಮಾರ್, ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ನಲಪಾಡ್ ಅಪ್ಸರಾ ಛೇಂಬರ್ಸ್ ಕಟ್ಟಡದ ನೆಲಮಹಡಿಯಲ್ಲಿ ಯು.ಎಂ. ಉಮರ್ ಫ್ಲವರ್ ಸ್ಟಾಲ್ ನಲ್ಲಿ ಕಳೆದ ವರ್ಷದ ನವೆಂಬರ್ 16ರಂದು ರಾತ್ರಿ 9 ಲಕ್ಷ ರೂ. ನಗದು ಕಳವಾಗಿತ್ತು. ಈ ಬಗ್ಗೆ ಕಂಕನಾಡಿ ಬಾಲಿಕಾಶ್ರಮ ರಸ್ತೆಯ ಸಿಂಪೋನಿ ಅಪಾರ್ಟ್‌ಮೆಂಟ್‌ನ ಉಮರಬ್ಬ ನವೆಂಬರ್ 17ರಂದು ಬಂದರು ಠಾಣೆಗೆ ದೂರು ನೀಡಿದ್ದರು.

ಉಮರಬ್ಬರ ಮಗ ರಿಯಾಝ್ ನವೆಂಬರ್ 17ರಂದು ಬೆಳಗ್ಗೆ 6ಕ್ಕೆ ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಮುಖ್ಯದ್ವಾರದ ಶಟರ್‌ನ ಸೆಂಟರ್ ಲಾಕ್ ಮತ್ತು ಒಳಗಿನ ಟೇಬಲ್ ಡ್ರಾವರ್‌ನ ಲಾಕ್ ಮುರಿದು ಅದರಲ್ಲಿದ್ದ 9 ಲಕ್ಷ ರೂ. ಹಾಗೂ ಅಂಗಡಿಯೊಳಗಡೆ ಅಳವಡಿಸಿದ್ದ ಮಾನಿಟರ್ ಇರಿಸಿದ ಬಾಕ್ಸ್ ತೆರೆದು ಸುಮಾರು 10 ಸಾವಿರ ರೂ. ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು ಎಂದರು.

ಪ್ರಕರಣ ದಾಖಲಿಸಿಕೊಂಡಿದ್ದ ಬಂದರ್ ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ಎಂ.ಬೈಂದೂರು ಮತ್ತು ತಂಡವು ಹಳೆ ಆರೋಪಿಗಳ ಹಿನ್ನೆಲೆಯನ್ನು ಜಾಲಾಡಿದಾಗ ಹಮೀದ್‌ನ ಮೇಲೆ ಸಂಶಯಗೊಂಡು ಆತನನ್ನು ಜನವರಿ 14ರಂದು ಮುಂಜಾವ 3ಕ್ಕೆ ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದ ಬಳಿ ಪತ್ತೆಹಚ್ಚಿ ಠಾಣೆಗೆ ಕರೆತಂದು ವಿಚಾರಿಸಿದಾಗ ಕಳ್ಳತನ ಪ್ರಕರಣದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಈತ ಹೂವಿನ ಅಂಗಡಿಯಿಂದ ಕಳವುಗೈದಿದ್ದ 5.80 ಲಕ್ಷ ರೂ. ನಗದು, ಒಂದು ಡಿವಿಆರ್, ಒಂದು ಕಬ್ಬಿಣದ ರಾಡ್ ವಶಪಡಿಸಿಕೊಳ್ಳಲಾಗಿದೆ ಎಂದು ಶಶಿಕುಮಾರ್ ಮಾಹಿತಿ ನೀಡಿದರು.

ಹಣ ಕದ್ದು ನೆಲದಡಿ ಹೂತಿಟ್ಟಿದ್ದ ಆರೋಪಿ: ಉಮರ್ ಫ್ಲವರ್ಸ ಸ್ಟಾಲ್ ನಲ್ಲಿ ಕದ್ದ 9 ಲಕ್ಷ ರೂ.ವನ್ನು ಮುಂದೇನು ಮಾಡಬೇಕೆಂದು ತೋಚದೆ ಆರೋಪಿ ಹಮೀದ್ ಅದನ್ನು ಗೋಣಿಚೀಲವೊಂದರಲ್ಲಿ ತುಂಬಿಸಿ ಮೂರು ಬ್ಯಾಗ್‌ಗಳಲ್ಲಿ ಸುತ್ತಿ ನಗರದ ನೆಲ್ಲಿಕಾಯಿ ರಸ್ತೆಯ ಹಳೆ ಕಟ್ಟಡದ ಸಮೀಪ ಹೂತಿಟ್ಟಿದ್ದ. ತನಗೆ ಬೇಕಾದ ತೆಗೆದುಕೊಳ್ಳಬಹುದು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದ ಎನ್ನಲಾಗಿದೆ. ಕೆಲವು ದಿನಗಳ ಬಳಿಕ ಹಮೀದ್ ಆ ಸ್ಥಳಕ್ಕೆ ತೆರಳಿ ನೋಡಿದಾಗ ಈ ಕಟ್ಟಡದ ಮಾಲಕರು ಕಟ್ಟಡವನ್ನು ನೆಲಸಮ ಮಾಡಿಸಿದ್ದರು. ಅಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಮಿಕರು ತೆರಳಿದ ಬಳಿಕ ಹಣ ತೆಗೆದುಕೊಳ್ಳಬಹುದು ಎಂದು ಭಾವಿಸಿ ಆರೋಪಿಯು ಕೆಲವು ಹೊತ್ತು ಅಲ್ಲೇ ಬೀಡುಬಿಟ್ಟಿದ್ದ. ಆದರೆ ಹಣ ಸಿಗದ ಹಿನ್ನೆಲೆಯಲ್ಲಿ ಅಲ್ಲಿಂದ ಮರಳಿದ್ದ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಈ ಮಧ್ಯೆ ಅಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಚಾಲಕನು ಮಣ್ಣನ್ನು ಅಗೆಯುವಾಗ ಗೋಣಿ ಚೀಲ ಕಂಡಿತ್ತು. ಅದರಲ್ಲಿ ಹಣ ಇರುವುದನ್ನು ತಿಳಿದ ಆತ, ತಕ್ಷಣ ಉಳಿದ ಕೆಲಸಗಾರರನ್ನು ಊಟಕ್ಕೆ ಕಳುಹಿಸಿ ಹಣದ ಆ ಕಟ್ಟನ್ನು ತೆಗೆದುಕೊಂಡಿದ್ದಾನೆ. ಅಲ್ಲದೆ ಅದರಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾನೆ. ಪೊಲೀಸರು ಆರೋಪಿ ಹಮೀದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣ ಬಚ್ಚಿಟ್ಟ ಸತ್ಯವನ್ನು ಆತ ಪೊಲೀಸರಿಗೆ ತಿಳಿಸಿದ್ದಾನೆ. ಆತ ಹೇಳಿದ ಸ್ಥಳಕ್ಕೆ ಕರೆದುಕೊಂಡು ಬಂದು ಪರಿಶೀಲಿಸಿದಾಗ ಅಲ್ಲಿ ಹಣ ಇರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರನನ್ನು ವಿಚಾರಿಸಿ ಬಳಿಕ ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದಾಗ ಆತ ತನಗೆ ಹಣ ಸಿಕ್ಕಿರುವುದನ್ನು ಒಪ್ಪಿಕೊಂಡಿರುವುದಾಗಿ ಕಮಿಷನರ್ ಮಾಹಿತಿ ನೀಡಿದ್ದಾರೆ.

‘ನಾವು ತುಂಬಾ ಬಡವರು, ದೇವರೇ ನಮಗೆ ಹಣವನ್ನು ಕೊಟ್ಟಿರಬಹುದು ಎಂದು ಭಾವಿಸಿ ಅದರಿಂದ ಖರ್ಚು ಮಾಡಿದ್ದೇನೆ’ ಎಂದು ಜೆಸಿಬಿ ಚಾಲಕ ಪೊಲೀಸರ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ.
ಜೆಸಿಬಿ ಚಾಲಕನ ಬಳಿಯಿಂದ 5.80 ಲಕ್ಷ ರೂ.ವಶಪಡಿಸಿಕೊಳ್ಳಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿಲ್ಲ. ಸಿಕ್ಕಿದ ಹಣವನ್ನು ಆತ ಬಳಸದೆ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತು. ಖರ್ಚು ಮಾಡಿದ ಹಣವನ್ನು ಹೊಂದಿಸಿ ಠಾಣೆಗೆ ತಂದು ಒಪ್ಪಿಸುವಂತೆ ಸೂಚಿಸಿ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಶಶಿಕುಮಾರ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಪತಿಯ ಕೃತ್ಯದಿಂದ ರೋಸಿ ಹೋಗಿದ್ದ: ಆರೋಪಿ ಹಮೀದ್ ವೃತ್ತಿಪರ ಕಳವು ಆರೋಪಿ ಎಂಬುದನ್ನು ತಿಳಿದಿದ್ದ ಆತನ ಪತ್ನಿಯಯ ಆತನ ಕೃತ್ಯದಿಂದ ರೋಸಿಹೋಗಿದ್ದಳು. ಪ್ರತಿ ನಾಲ್ಕೈದು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದ. ಅದಾದ ಕೆಲವೇ ದಿನಗಳಲ್ಲಿ ಪೊಲೀಸರು ಮನೆಗೆ ಬಂದು ಆತನನ್ನು ಬೇರೊಂದು ಪ್ರಕರಣದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಆಕೆ ಪೊಲೀಸರು ಮನೆಗೆ ಬರುವ ಮೊದಲೇ ಪತಿಗೆ ಜೈಲಿಗೆ ಬೇಕಾದ ಬಟ್ಟೆ ಬರೆ ಸಿದ್ಧಪಡಿಸಿಡುತ್ತಿದ್ದಳು. ಪೊಲೀಸರು ಮನೆಗೆ ಬಂದಾಗ ಆ ಬ್ಯಾಗನ್ನು ಅವರಿಗೆ ನೀಡುತ್ತಿದ್ದಳು ಎಂದು ಶಶಿಕುಮಾರ್ ತಿಳಿಸಿದರು.

35ಕ್ಕೂ ಅಧಿಕ ಪ್ರಕರಣ: ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಸುಮಾರು 35ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಹಮೀದ್‌ನ ವಿರುದ್ಧ 22 ವಾರೆಂಟ್ ಜಾರಿಯಾಗಿತ್ತು. ಈತನ ವಿರುದ್ಧ ಬಂದರ್ ಠಾಣೆಯಲ್ಲಿ ನಾಲ್ಕು, ಪುತ್ತೂರು ನಗರ ಠಾಣೆಯಲ್ಲಿ 2, ಉಪ್ಪಿನಂಗಡಿ, ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ಪುರ ಠಾಣೆಯಲ್ಲಿ ತಲಾ ಒಂದು, ಚಿಕ್ಕಮಗಳೂರು ಗ್ರಾಮಾಂತರ, ವೇಣೂರು, ಬೆಳ್ತಂಗಡಿಯಲ್ಲಿ ತಲಾ 2, ಪುಂಜಾಲಕಟ್ಟೆ, ಶೃಂಗೇರಿ, ಬಂಟ್ವಾಳ, ಮೂಡಿಗೆರೆ, ಬೇಲೂರು, ಕಡಬ, ಧರ್ಮಸ್ಥಳ, ಹರಿಹರಪುರ, ಕೊಡಗು ಜಿಲ್ಲೆಯ ಭಾಗಮಂಡಲ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್‌ರ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತರಾದ ದಿನೇಶ್ ಕುಮಾರ್, ಅಂಶುಕುಮಾರ್, ಎಸಿಪಿ ಪರಮೇಶ್ವರ ಹೆಗ್ಡೆ, ಬಂದರು ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಎಂ.ಬೈಂದೂರು, ಎಸ್ಸೈಗಳಾದ ಮಂಜುಳಾ, ಫೈಝುನ್ನಿಸಾ, ಎಎಸ್ಸೈ ದಾಮೋದರ್, ಸಿಬ್ಬಂದಿ ಯಶವಂತ ರೈ, ತಿಪ್ಪರೆಡ್ಡಪ್ಪ, ಚಿದಾನಂದ, ಅಭಿಷೇಕ್, ಸಂಪತ್, ಸುನೀಲ್ ಕುಮಾರ್, ರಾಕೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Similar News