ನೇಪಾಳ ಸಂಸತ್ತಿನೆದುರು ಬೆಂಕಿ ಹಚ್ಚಿಕೊಂಡಿದ್ದ ಉದ್ಯಮಿ ಮೃತ್ಯು‌

Update: 2023-01-25 18:17 GMT

ಕಠ್ಮಂಡು, ಜ.25: ಮಂಗಳವಾರ ನೇಪಾಳ ಸಂಸತ್ತಿನೆದುರು ಬೆಂಕಿ ಹಚ್ಚಿಕೊಂಡಿದ್ದ ಉದ್ಯಮಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತ ಉದ್ಯಮಿಯನ್ನು ಪ್ರೇಮ್ ಪ್ರಸಾದ್ ಆಚಾರ್ಯ ಎಂದು ಗುರುತಿಸಲಾಗಿದೆ. ಮಂಗಳವಾರ ಸಂಸತ್ತಿನ ಎದುರು ತನ್ನ ಮೇಲೆ ಡೀಸೆಲ್ ಸುರುವಿಕೊಂಡು  ಬೆಂಕಿ ಹಚ್ಚಿಕೊಂಡಿದ್ದ ಪ್ರೇಮ್ ಪ್ರಸಾದ್ ನನ್ನು 80%ದಷ್ಟು ಸುಟ್ಟಗಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ಹಲವು ವರ್ಷಗಳಿಂದ ಮಾನಸಿಕ ಮತ್ತು ಆರ್ಥಿಕ ತೊಂದರೆಗೊಳಗಾಗಿದ್ದು  ನೆರವು ಕೋರಿ ಹಲವು ಬಾರಿ ಸರಕಾರವನ್ನು ಸಂಪರ್ಕಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಲಿ ಸರಕಾರ ಕೂಡಾ ತನ್ನ ಮನವಿಯನ್ನು ಕಡೆಗಣಿಸಿದೆ. ಆದ್ದರಿಂದ ಸಂಸತ್ತಿನ ಎದುರು ಪ್ರಾಣತ್ಯಾಗಕ್ಕೆ ನಿರ್ಧರಿಸಿದ್ದೇನೆ ಎಂದು ಘಟನೆಗೂ ಮುನ್ನ ಪ್ರೇಮ್‌ ಪ್ರಸಾದ್ ಆಚಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ತನ್ನ ಕಣ್ಣೆದುರೇ ಈ ಘಟನೆ ನಡೆದಿದ್ದರೂ ಪ್ರಧಾನಿ ಪುಷ್ಪಕಮಲ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Similar News