ಮಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ; ವಲಯ ಅರಣ್ಯಾಧಿಕಾರಿಗೆ 1.50 ಕೋ.ರೂ. ದಂಡ

Update: 2023-01-27 16:23 GMT

ಮಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪದ ಮೇರೆಗೆ ಬೆಳ್ತಂಗಡಿ ಸಹ್ಯಾದ್ರಿ ವಲಯ ಅರಣ್ಯಾಧಿಕಾರಿ ಎಸ್.ರಾಘವ ಪಾಟಾಳಿಗೆ 3ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು 5 ವರ್ಷ ಸಾದಾ ಶಿಕ್ಷೆ ಮತ್ತು 1.50 ಕೋ.ರೂ.ದಂಡ ವಿಧಿಸಿದೆ. ದಂಡ ತೆರಲು ತಪ್ಪಿದರೆ ಮತ್ತೆ 1 ವರ್ಷ ಸಾದಾ ಶಿಕ್ಷೆ ಅನುಭವಿಸುವಂತೆ ಶುಕ್ರವಾರ ಆದೇಶಿಸಿದೆ.

ಕೊಂಚಾಡಿ-ದೇರೇಬೈಲ್‌ನಲ್ಲಿ ವಾಸವಾಗಿದ್ದ ಎಸ್. ರಾಘವ ಪಾಟಾಳಿಯು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆ ಎಂಬ ದೂರಿನ ಮೇರೆಗೆ ವಲಯ ಅರಣ್ಯಾಧಿಕಾರಿಯ ವಿರುದ್ಧ 2011ರ ಜುಲೈ 21ರಂದು ಮಂಗಳೂರು ಲೋಕಾಯುಕ್ತ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದರಂತೆ ವಾದ-ಪ್ರತಿವಾದ ಆಲಿಸಿದ 3ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಆರೋಪಿಗೆ 5 ವರ್ಷ ಸಾದಾ ಶಿಕ್ಷೆ ಮತ್ತಯ 1.50 ಕೋ.ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದರೆ ಮತ್ತೆ 1 ವರ್ಷ ಶಿಕ್ಷೆ ಅನುಭವಿಸಲು ಆದೇಶಿಸಿದ್ದಾರೆ.

ಲೋಕಾಯುಕ್ತ ಇನ್‌ಸ್ಪೆಕ್ಟರ್ ಉದಯ ಎಂ.ನಾಯಕ್ ಆರೋಪಿಯ ವಿರುದ್ಧ ದೂರು ನೀಡಿದ್ದರೆ, ಲೋಕಾಯುಕ್ತ ಡಿವೈಎಸ್ಪಿ  ವಿಠಲದಾಸ ಪೈ ಜಾರ್ಜ್‌ಶೀಟ್ ಸಲ್ಲಿಸಿದ್ದರು. ಸರಕಾರದ ಪರವಾಗಿ ರವೀಂದ್ರ ಮನ್ನಿಪ್ಪಾಡಿ ವಾದಿಸಿದ್ದರು.

Similar News