ಬ್ರೆಕ್ಸಿಟ್ ನಂತರದ ಜಗತ್ತಿನಲ್ಲಿ ಭಾರತ-ಯುರೋಪಿಯನ್ ಒಕ್ಕೂಟದ ಸಂಬಂಧದಲ್ಲಿ ಮಹತ್ತರ ತಿರುವು: ರಾಬರ್ಟ್ ಇವಾನ್ಸ್

Update: 2023-01-30 16:59 GMT

ಕೊಣಾಜೆ: ಯುರೋಪಿಯನ್ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಬಲಿಷ್ಠವಾದ ಅರ್ಥಿಕ ವ್ಯವಸ್ಥೆಯನ್ನು ಹೊಂದಿದ್ದು ಭಾರತದ ಮುಖ್ಯವಾದ ವ್ಯಾಪಾರ ಪಾಲುದಾರ ಸಂಘಟನೆಯಾಗಿದೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದು ಜಾಗತಿಕ ವ್ಯವಸ್ಥೆಯಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿದೆ ಎಂದು ಯುರೋಪಿಯನ್ ಸಂಸತ್ತು ಮಾಜಿ ಸದಸ್ಯ ರಾಬರ್ಟ್ ಇವಾನ್ಸ್ ಅಭಿಪ್ರಾಯಪಟ್ಟರು. 

ಅವರು ಮಂಗಳೂರು ವಿಶ್ವವಿದ್ಯಾನಿಲಯ, ರಾಜ್ಯಶಾಸ್ತ್ರ ವಿಭಾಗ ಮತ್ತು ಯುರೋಪಿಯನ್ ಅಧ್ಯಯನ ಕೇಂದ್ರ, ಮಾಹೆ ಹಾಗೂ ಯುರೋಪಿಯನ್ ಸಂಸತ್ತಿನ ವಿಶ್ರಾಂತ ಸದಸ್ಯರ ಸಂಘದ ಸಹಯೋಗದೊಂದಿಗೆ ಕೊಣಾಜೆ ಮಂಗಳೂರು ವಿ.ವಿ.ಯ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸ ಕೊಠಡಿಯಲ್ಲಿ ನಡೆದ ಬ್ರೆಕ್ಸಿಟ್ ನಂತರದ ಜಗತ್ತಿನಲ್ಲಿ ಭಾರತ- ಯುರೋಪಿಯನ್ ಯೂನಿಯನ್ ಸಂಬಂಧಗಳು ಕುರಿತಾದ ವಿಶೇಷ ಉಪನ್ಯಾಸ ನೀಡಿದರು. 

ಮಾಹೆ ಯುರೋಪಿಯನ್ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ. ನೀತಾ ಇನಾಂದಾರ್ ಮಾತನಾಡಿ, ಯುರೋಪಿಯನ್ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಪ್ರಮುಖ ಸಂಘಟನೆಯಾಗಿದ್ದು ಭಾರತದ ಜೊತೆಗೆ ಸಂಬಂಧ ವೃದ್ದಿಸಲು ಒಕ್ಕೂಟವು ಒಲವನ್ನು ತೋರಿದ್ದು, ಈ ನಿಟ್ಟಿನಲ್ಲಿ ಭಾರತವು ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರನಡೆದ ನಂತರದಲ್ಲಾಗುತ್ತಿರುವ ಬೆಳವಣಿಗೆ ಮತ್ತು ಸವಾಲುಗಳನ್ನು ಅವಲೋಕಿಸುವುದು ಸೂಕ್ತವೆನಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಜಯರಾಜ್ ಅಮೀನ್, ಯುರೋಪಿಯನ್ ಒಕ್ಕೂಟವು ಇಂದು ಜಾಗತಿಕ ಮಟ್ಟದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊಂದಿರುವ ಸಂಘಟನೆಯಾಗಿದ್ದು ರಾಜಕೀಯ ಕ್ಷೇತ್ರಗಳಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರು. 

ಕಾರ್ಯಕ್ರಮದಲ್ಲಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ದಯಾನಂದ ನಾಯ್ಕ್, ಡಾ. ರಾಜ್ ಪ್ರವೀಣ್ ಸಿ.ಎಂ, ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಪ್ರೊ. ಕಿಶೋರಿ ನಾಯಕ್, ಸಮಾಜಶಾಸ್ತ್ರ ವಿಭಾಗದ ಡಾ ಸಬಿತಾ, ಮಣಿಪಾಲ್ ವಿಶ್ವವಿದ್ಯಾನಿಲಯದ ಅಧ್ಯಾಪಕ ಮತ್ತು ವಿದ್ಯಾರ್ಥಿಗಳು,  ಮಂಗಳೂರು ವಿಶ್ವವಿದ್ಯಾನಿಲಯದ ಸಂವಹನ ವಿಭಾಗ, ಅರ್ಥಶಾಸ್ತ್ರ ವಿಭಾಗ ಮತ್ತು ರಾಜ್ಯಶಾಸ್ತ್ರ ವಿಭಾಗದ ಅದ್ಯಾಪಕರು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭೂಮಿಕಾ ನಿರೂಪಿಸಿದರು,  ಪ್ರವೀಣ್ ವಂದಿಸಿದರು

Similar News