ಬೈಬಲ್ ಎಂದಿಗೂ ಖಾಲಿಯಾಗದ ನಿಧಿ: ವಂ. ಮ್ಯಾಕ್ಸಿಮ್ ನೊರೊನ್ಹಾ

Update: 2023-01-30 18:03 GMT

ಮಂಗಳೂರು: ಮಂಗಳೂರಿನ ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ನಡೆದ ಮೂರು ದಿನಗಳ ಬೈಬಲ್ ಪ್ರದರ್ಶನ ಶನಿವಾರ ಮುಕ್ತಾಯಗೊಂಡಿತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟಗುರು ವಂ. ಮ್ಯಾಕ್ಸಿಮ್ ಎಲ್. ನೊರೊನ್ಹಾ ಮಾತನಾಡಿ, ‘‘ಬೈಬಲ್ ಎಂದಿಗೂ ಅಕ್ಷಯ ಪಾತ್ರೆಯಂತೆ ಖಾಲಿಯಾಗದ ಸಂಪತ್ತು. ಇದು ಹೊಸತನ ಮತ್ತು ಜೀವ ನೀಡುವ ಪುಸ್ತಕವಾಗಿದೆ ಮತ್ತು ಯಾವುದೇ ಸಂದರ್ಭಕ್ಕೂ, ಕಾಲಕ್ಕೂ ಸಕಾಲವಾದುದು. ಬೈಬಲ್ ಅನೇಕರಿಗೆ ಸ್ಫೂರ್ತಿ ನೀಡಿದೆ, ಅನೇಕರ ಜೀವನವನ್ನು ಪರಿವರ್ತಿಸಿದೆ, ನಾಸ್ತಿಕರು ಆಸ್ತಿಕರಾಗಿದ್ದಾರೆ ಎಂದು ಹೇಳಿದರು.

ವೆಬ್‌ಬ್ಲಾಗ್‌ನಲ್ಲಿ ಬೈಬಲ್ ಸಂದೇಶ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊಗಳ ಮೂಲಕ ದೇವರ ವಾಕ್ಯವನ್ನು ಪ್ರಸರಿಸುವ ಜೆಪ್ಪುವಿನ ಸಂತ ಜೋಸೆಫ್ ಸೆಮಿನರಿಯಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾದ ವಂ. ಮ್ಯಾಕ್ಸಿಮ್ ಡಿಸೋಜಾರವರನ್ನು ಗೌರವಿಸಲಾಯಿತು.

ಪ್ರತಿದಿನ ‘‘ಶುಭ್‌ವರ್ತಮಾನ್’’ ಕಿರು ವೀಡಿಯೋ ಸರಣಿ ಮೂಲಕ ದೈನಂದಿನ ಸುವಾರ್ತೆ ವಾಚನಗಳ ಮೇಲೆ ಎರಡು ನಿಮಿಷಗಳ ಸಂದೇಶಗಳನ್ನು ನೀಡುವ, ಮತ್ತು ಹಳ್ಳಿಗಳಳ್ಳಿ ಬೈಬಲ್ ಆಧ್ಯಯನಕ್ಕೆ ತರಗತಿಗಳನ್ನು ಏರ್ಪಡಿಸಿದ ಮಂಗಳಜ್ಯೋತಿ ಕೇಂದ್ರದ ಸಹಾಯಕ ನಿರ್ದೇಶಕ , ಬೈಬಲ್ ಆಯೋಗದ ಕಾರ್ಯದರ್ಶಿ ಮತ್ತು ಸಂತ ಜೋಸೆಫ್ ಸೆಮಿನರಿಯಲ್ಲಿ ದೇವಶಾಸ್ತ್ರದ ಪ್ರಾಧ್ಯಾಪಕ ವಂ. ಡಾ .ವಿನ್ಸೆಂಟ್ ಸಿಕ್ವೇರಾ ಅವರನ್ನು ಗೌರವಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟೆಲಿನೊ ಮತ್ತು ಆಶ್ರಮದ ಮಂಡಳಿಯ ಸದಸ್ಯರಾದ ಡಾ.ಜಾನ್ ಡಿಸಿಲ್ವಾ, ಉಪಸ್ಥಿತರಿದ್ದರು.

ಎರಡನೆ ದಿನದ ಪ್ರದರ್ಶನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಆತೀ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಭೇಟಿ ನೀಡಿ ಪ್ರದರ್ಶನದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು. 

ಆಶ್ರಮದ ನಿರ್ದೇಶಕ ಮತ್ತು ಪ್ರದರ್ಶನದ ಸಂಚಾಲಕ ವಂ. ಜೆ. ಬಿ. ಕ್ರಾಸ್ತಾ ಮಾತನಾಡಿ, ‘‘ಸಿಎಸ್‌ಐ ಚರ್ಚ್‌ನ ಸದಸ್ಯರು, ಧಾರ್ಮಿಕ ಸಹೋದರಿಯರು, ಉಡುಪಿ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು, ಸ್ಥಳೀಯ ಶಾಲಾ-ಕಾಲೇಜುಗಳ ಕ್ಯಾಥೋಲಿಕ್ ವಿದ್ಯಾರ್ಥಿಗಳು, ಗುರುಮಠದ ಸಹೋದರರು, ಕನ್ಯಾಮಠದ ಸಹೋದರಿಯರು ಸೇರಿದಂತೆ ಸುಮಾರು 2,500 ಮಂದಿ  ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ,’’ ಎಂದು ಹೇಳಿದರು.

ಸಂತ ಆಗ್ನೆಸ್ ಕಾನ್ವೆಂಟ್‌ನ ಶ್ರೀ ಜಾನೆಟ್ ಸಿಕ್ವೇರಾರವರು ‘‘ಬೈಬಲ್ ಪ್ರದರ್ಶನದಿಂದ ನನಗೆ ಅದ್ಭುತ ಅನುಭವ ಸಿಕ್ಕಿದೆ. ಬೈಬಲಿನ ವಿವಿಧ ಭಾಷೆೆಗಳ ಆವೃತ್ತಿಗಳನ್ನು ನೋಡಿ, ನಾನು ಹೆಚ್ಚು ಅಧ್ಯಯನ ಮಾಡದಿರಬಹುದು, ಆದರೆ ಆ ಬೈಬಲ್‌ಗಳನ್ನು ಸ್ಪರ್ಶಿಸುವ ಒಂದು ಅನನ್ಯ ಅವಕಾಶ ನನಗೆ ಸಿಕ್ಕಿತು’’ ಎಂದು ಹೇಳಿದರು.

ಮೋರ್ಗನ್ಸ್‌ಗೇಟ್‌ನ ಜೆನಿಟಾ ಡಿಸೋಜಾ ಅವರು, ‘‘ಬೈಬಲ್ ಇಷ್ಟು ವಿಸ್ತಾರವಾಗಿದೆ ಎಂದು ನನಗೆ ಈವರೆಗೂ ತಿಳಿದಿರಲಿಲ್ಲ. ಈ ಪುಸ್ತಕ ಜ್ಞಾನ ಮತ್ತು ಬುದ್ಧಿವಂತಿಕೆಯ ದೊಡ್ಡ ನಿಧಿಯಾಗಿದೆ. ಇದು ಸ್ಫೂರ್ತಿಯ ಮೂಲವಾಗಿದೆ. ಚಿಕ್ಕ ಮಕ್ಕಳ ವರ್ಣಚಿತ್ರಗಳು ಸೇರಿದಂತೆ ಬೈಬಲ್ ವೈವಿಧ್ಯತೆಯ ಪ್ರಸ್ತುತಿಯಿಂದ ನಾನು ಪ್ರಭಾವಿತನಾಗಿದ್ದೇನೆ.’’ ಎಂದು ಹೇಳಿದರು.

ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರು ಕ್ರೈಸ್ತ ಸಮುದಾಯದ ಆಯೋಗಗಳ ಸಹಯೋಗದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚ್‌ಗಳು ಜಂಟಿಯಾಗಿ ನಗರದ ಜೆಪ್ಪು, ಸಂತ ಅಂತೋನಿ ಆಶ್ರಮದಲ್ಲಿ ಜನವರಿ 26 ರಿಂದ 28 ರ ಸಂಜೆ ತನಕ ಆಯೋಜಿಸಿದ್ದ ಪ್ರದರ್ಶನವು ಯಶಸ್ವಿಯಾಗಿ ಪ್ರಸ್ತುತಪಡಿಸಲಾಯಿತು.

ಪ್ರತಿದಿನ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ‘ಮೇರಿ ಮ್ಯಾಗ್ಡಲೀನ್’ (ಜೋಶಲ್ ಡಿಸೋಜಾ), ‘ಜೋಸೆಫ್ ಆಫ್ ಅರಿಮಥಿಯಾ’ (ಸಹೋ. ಲಾಯ್ಡ್, ಜೆಪ್ಪು ಸೆಮಿಯನರಿ), ಮತ್ತು ‘ಬರಬ್ಬಾಸ್’ (ಅಲ್ವಿನ್ ಮಿರಾಂಡಾ, ಜೆಪ್ಪು) ಕುರಿತ ಬೈಬಲ್ ಏಕಪಾತ್ರ ಕಿರುನಾಟಕಗಳನ್ನು ಪ್ರಸ್ತುತಪಡಿಸಲಾಯಿತು.

ಬೈಬಲ್ ವಿಷಯಗಳ ಮೇಲೆ ವಿಶಿಷ್ಟವಾದ ಮ್ಯಾಜಿಕ್ ಪ್ರದರ್ಶನವನ್ನು ವೆಲೆನ್ಸಿಯಾದ ವಂ. ಪಾವ್ಲ್ ಸೆಬಾಸ್ಟಿಯನ್ ಡಿಸೋಜಾ ಅವರು ಪ್ರಸ್ತುತಪಡಿಸಿದರು. ಜೊತೆಗೆ, ನಗರದ ಜೆಪ್ಪು ಹೋಲಿ ರೋಜರಿ ಕಾನ್ವೆಂಟ್, ಪಾನೀರ್ ‘ಸಮರ್ಪಣ್’ ಕಾನ್ವೆಂಟ್ ಆರ್ಸುಲಾ ಧರ್ಮಭಗಿನಿಯರಿಂದ ಹಾಗೂ ಮಂಗಳೂರಿನ ಆಶಾನಿಕೇತನ ಕಾನ್ವೆಂಟ್ ಮತ್ತು ಗ್ಲ್ಯಾಡ್ಸಮ್ ಹೋಮ್ ಮೈನರ್ ಸೆಮಿನರಿ ವಿದ್ಯಾರ್ಥಿಗಳಿಂದ ಬೈಬಲ್ ನೃತ್ಯ, ಬೈಬಲ್ ಹಾಡುಗಳು, ಹತ್ತು ಕನ್ಯೆಯರ ಸಾಮತಿ, ಬಿತ್ತುವವನ ಸಾಮತಿ, ಸ್ವರ್ಗದ ಸಾಮ್ರಾಜ್ಯದ ಸಾಮತಿ, ದಾರಿತಪ್ಪಿದ ಮಗ, ಒಳ್ಳೆಯ ಸಾಮಾರಿತನನ ಸಾಮತಿ ಮತ್ತು ಶಿಷ್ಯರ  ಕರೆಯನ್ನು ತೋರ್ಪಡಿಸುವ ನೃತ್ಯ ನಾಟಕಗಳು ಪ್ರದರ್ಶನಗೊಂಡವು.

ಪ್ರದರ್ಶನವು 300 ವಿಧದ ಬೈಬಲ್‌ಗಳು, 150 ವರ್ಣಚಿತ್ರಗಳು, 20 ಬೈಬಲ್ ಮಾದರಿಗಳು, 30 ನಿಮಿಷಗಳ ಸಾಕ್ಷ್ಯಚಿತ್ರ ವೀಡಿಯೊ, ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ಒಳಗೊಂಡಿತ್ತು.

ಪ್ರದರ್ಶನಕ್ಕೆ ಸಂಬಂದಿಸಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಬಹುಮಾನ ನೀಡಿ ಗೌರವಿಸಲಾಯಿತು.

Similar News