ಮಂಗಳೂರು ವಿವಿ: ಕಸಾಪದಿಂದ ವಿಶೇಷೋಪನ್ಯಾಸ

ಕರಾವಳಿಯ ಅಡ್ಡಹೆಸರುಗಳ ಬಗೆಗೆ ಅಧ್ಯಯನ ನಡೆಯಲಿ: ಪ್ರೊ. ವಿ.ಎಲ್ ಪಾಟೀಲ್

Update: 2023-01-31 11:20 GMT

ಕೊಣಾಜೆ: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಕುಲನಾಮಗಳ ಅಧ್ಯಯನ ಸ್ವರೂಪ ಮತ್ತು ಸಾಧ್ಯತೆ ಎಂಬ ವಿಷಯದ ಕುರಿತು ಉಪನ್ಯಾಸ   ಕಾರ್ಯಕ್ರಮ ಸೋಮವಾರ ನಡೆಯಿತು.

ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಜಾನಪದ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ. ವಿ. ಎಲ್. ಪಾಟೀಲ್ ಅವರು ಮಾತನಾಡಿ, ವ್ಯಕ್ತಿಗಳ ಹೆಸರಿನ ಜೊತೆಗಿರುವ ಅಡ್ಡಹೆಸರುಗಳ ಹಿಂದೆ ಸಾಂಸ್ಕೃತಿಕ ಮಹತ್ವದ ಕಥನಗಳಿವೆ. ಇವುಗಳ ಅಧ್ಯಯನ ಸ್ವಾರಸ್ಯಪೂರ್ಣ ವಿಚಾರಗಳನ್ನು ಮುನ್ನೆಲೆಗೆ ತರುತ್ತದೆ. ಕರಾವಳಿಯ ಅಡ್ಡಹೆಸರುಗಳ ಬಗೆಗೆ ಅಧ್ಯಯನ ನಡೆಯಲಿ ಎಂದು ಅಭಿಪ್ರಾಯಪಟ್ಟರು. 

ಹೆಸರಿನ ಜೊತೆಗೆ ಜಾತಿಯನ್ನು ಸೇರಿಸಿಕೊಳ್ಳುವ, ಊರನ್ನು ಸೇರಿಸಿಕೊಳ್ಳುವ, ತಂದೆಯ ಹೆಸರನ್ನು ಸೇರಿಸಿಕೊಳ್ಳುವ ಕ್ರಮವಿದ್ದು ಅದರಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ವ್ಯತ್ಯಾಸಗಳಿವೆ. ವೃತ್ತಿ ಕೇಂದ್ರಿತವಾಗಿ, ದೇಹದ ಸ್ವರೂಪವನ್ನು ಗುರುತಿಸಿ, ಊರಿನ ಸಂಸ್ಕೃತಿಯ ಕಾರಣಕ್ಕಾಗಿ ಅಡ್ಡಹೆಸರುಗಳು ಸೃಷ್ಟಿಯಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕನ್ನಡ ವಿಭಾಗದ ಅಧ್ಯಕ್ಷರಾಗಿರುವ ಪ್ರೊ. ಸೋಮಣ್ಣ ಹೊಂಗಳ್ಳಿ ಅವರು ಮಾತನಾಡಿ ಸಾಮಾಜಿಕವಾಗಿ ಜಾತಿಯನ್ನು ಗುರುತಿಸಿಕೊಳ್ಳುವ ಕ್ರಮ ಇತ್ತೀಚೆಗೆ ಹೆಚ್ಚಾಗಿದೆ. ಜಾತಿಯನ್ನು ಬಿಟ್ಟು ಊರ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಜೋಡಿಸಿಕೊಳ್ಳುವುದರಲ್ಲಿ ಸಾಮಾಜಿಕ ಮೇಲರಿಮೆ, ಕೀಳರಿಮೆಗಳು ಕಾರಣವಾಗಿವೆ ಎಂದರು.

ಕಸಾಪ ಉಳ್ಳಾಲ ಘಟಕದ ಅಧ್ಯಕ್ಷರಾಗಿರುವ ಡಾ. ಧನಂಜಯ ಕುಂಬ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.. ಘಟಕದ ಕಾರ್ಯದರ್ಶಿಗಳಾಗಿರುವ ರವೀಂದ್ರ ರೈ ಕಲ್ಲಿಮಾರು ವಂದಿಸಿದರು. ಮಾಡಿದರು. ಕಾರ್ಯದರ್ಶಿ ಎಡ್ವರ್ಡ್ ಲೋಬೋ, ಕೋಶಾಧಿಕಾರಿಗಳಾಗಿರುವ ಲಯನ್ ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಪದಾಧಿಕಾರಿಗಳಾಗಿರುವ ಗುಣಾಜೆ ರಾಮಚಂದ್ರ ಭಟ್, ತೋನ್ಸೆ ಪುಷ್ಕಳ ಕುಮಾರ್, ಡಾ.ನವೀನ್ ಗಟ್ಟಿ, ಡಾ.ಅರುಣ್ ಉಳ್ಳಾಲ ಮಂಜುಳ ರಾವ್ ಇರಾ, ಕುಸುಮ ಅಂಬ್ಲಮೊಗರು, ಅಮಿತ ಆಳ್ವ, ಅಶ್ವಿನಿ ಕುರ್ನಾಡು,ರವಿ ಕೋಡಿ, ರಮೇಶ್ ತೊಕ್ಕೊಟ್ಟು, ಅಚ್ಯುತ ಗಟ್ಟಿ,ರಾಧಾಕೃಷ್ಣ ರಾವ್, ತ್ಯಾಗಂ ಹರೇಕಳ  ಕನ್ನಡ ವಿಭಾಗದ ಡಾ.ನಾಗಪ್ಪ ಗೌಡ ಉಪಸ್ಥಿತರಿದ್ದರು.

ಕನ್ನಡ  ವಿಭಾಗದ ವಿದ್ಯಾರ್ಥಿಗಳು , ಸಂಶೋಧಕರು, ವಿವಿಧ ಪೀಠಗಳ ಸಂಶೋಧಕರು ಭಾಗವಹಿಸಿದ್ದರು. 
ಇದೇ ಸಂದರ್ಭದಲ್ಲಿ ಅಗಲಿದ ಕನ್ನಡದ ಕವಿ ಭಾಷಾವಿಜ್ಞಾನಿ ಡಾ.ಕೆ.ವಿ ತಿರುಮಲೇಶ್ ಇವರಿಗೆ ಕಸಾಪ ಉಳ್ಳಾಲ ತಾಲೂಕು ಘಟಕದ ವತಿಯಿಂದ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

Similar News