ಮಂಗಳೂರು: ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿಯ ಕೊಲೆ ಪ್ರಕರಣದ ಆರೋಪಿ ಪತ್ತೆಗೆ ಮುಂದುವರಿದ ಶೋಧ

60 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವು

Update: 2023-02-04 15:33 GMT

ಮಂಗಳೂರು: ನಗರದ ಬಲ್ಮಠ-ಹಂಪನಕಟ್ಟೆ ರಸ್ತೆಯಲ್ಲಿರುವ ಮಂಗಳೂರು ಜ್ಯುವೆಲ್ಲರ್ಸ್‌ನ ಸೇಲ್ಸ್‌ಮ್ಯಾನ್ ರಾಘವೇಂದ್ರ ಆಚಾರ್ಯರನ್ನು ಚೂರಿಯಿಂದ ಇರಿದು ಕೊಲೆಗೈದು ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಂದರು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಜುವೆಲ್ಲರಿಯಲ್ಲಿ ರಾಘವೇಂದ್ರ ಆಚಾರ್ಯರು ಏಕಾಂಗಿಯಾಗಿದ್ದಾಗ ಆರೋಪಿಯು ಕೊಲೆಗೈದು ರಿಕ್ಷಾದಲ್ಲಿ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಆ ರಿಕ್ಷಾದ ನಂಬರ್ ಆಧರಿಸಿ ಶೋಧ ನಡೆಸಲಾಗುತ್ತಿದೆ. ಅಲ್ಲದೆ ರಾಘವೇಂದ್ರ ಆಚಾರ್ಯರ ಮೊಬೈಲ್ ಕರೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಲಕ ಕೇಶವ ಆಚಾರ್ಯರು ಊಟ ಮುಗಿಸಿ ಸಂಜೆ 3:45ಕ್ಕೆ ಕಾರಿನಲ್ಲಿ ಜ್ಯುವೆಲ್ಲರಿಗೆ ಬಂದಾಗ ಮಳಿಗೆಯ ಮುಂದೆ ಬೈಕೊಂದು ಅಡ್ಡವಿತ್ತು ಎನ್ನಲಾಗಿದೆ. ತಾನು ರಾಘವೇಂದ್ರ ಆಚಾರ್ಯರಿಗೆ ಕರೆ ಮಾಡಿದಾಗ ನನಗೆ ಚೂರಿ ಹಾಕಿದ್ದಾರೆ. ಬಚಾವ್ ಮಾಡಿ ಎಂದಿದ್ದರು. ತಕ್ಷಣ ಕಾರನ್ನು ನಿಲ್ಲಿಸಿ ಅಂಗಡಿಯೊಳಗೆ ಹೋಗಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರೂ ಸಾವಿಗೀಡಾಗಿರುವ ವೈದ್ಯರು ಘೋಷಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.

ಚಿನ್ನಾಭರಣ ಕಳವು: ಅಂಗಡಿ ಶೋಕೇಸಿನಲ್ಲಿದ್ದ ಸುಮಾರು 12 ಗ್ರಾಂ ತೂಕದ 60 ಸಾವಿರ ರೂ. ಅಂದಾಜು ಮೌಲ್ಯದ ಚಿನ್ನಾಭರಣವು ಕಳವಾಗಿದೆ. ಅಪರಿಚಿತ ವ್ಯಕ್ತಿಯು ಅಂಗಡಿಯ ಶೋಕೇಸಿನಲ್ಲಿದ್ದ ಬಂಗಾರದ ಚೈನ್‌ಗಳನ್ನು ಲೂಟಿ ಮಾಡಲು ಮುಂದಾದಾಗ ರಾಘವೇಂದ್ರ ಆಚಾರ್ಯರು ತಡೆಯಲು ಹೋಗಿರುವ ಸಾಧ್ಯತೆ ಇದೆ. ಆವಾಗ ಅಪರಿಚಿತ ವ್ಯಕ್ತಿಯು ತನ್ನ ಬಳಿಯಿದ್ದ ಯಾವುದೋ ಹರಿತವಾದ ಆಯುಧದಿಂದ ರಾಘವೇಂದ್ರ ಆಚಾರ್ಯರ ಕುತ್ತಿಗೆಯ ಭಾಗಕ್ಕೆ ಬಲವಾಗಿ ಚುಚ್ಚಿದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Similar News