MRPL ವಿರುದ್ಧ 'ಮನೆ ಮನೆ ಪ್ರತಿಭಟನೆ'ಗೆ ಚಾಲನೆ

Update: 2023-02-05 05:23 GMT

ಮಂಗಳೂರು, ಫೆ.5: ಹಸಿರು ವಲಯ ನಿರ್ಮಿಸುವ ಸರಕಾರದ ಆದೇಶ ಧಿಕ್ಕರಿಸುತ್ತಿರುವ, ಸ್ಥಳೀಯರಿಗೆ ಉದ್ಯೋಗ ನಿರಾಕರಿಸುವ, ಮಾರಕ ಮಾಲಿನ್ಯದಿಂದ ಜೋಕಟ್ಟೆ, ಕಳವಾರು, ಕೆಂಜಾರು, ತೋಕೂರು ಗ್ರಾಮಗಳನ್ನು ರೋಗಗ್ರಸ್ತಗೊಳಿಸಿರುವ MRPL ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ 'ನಾಗರಿಕ ಹೋರಾಟ ಸಮಿತಿ ಜೋಕಟ್ಟೆ' ಹಮ್ಮಿಕೊಂಡಿರುವ 'ಮನೆ ಮನೆ ಪ್ರತಿಭಟನೆ'ಗೆ ರವಿವಾರ ಚಾಲನೆ ನೀಡಲಾಗಿದೆ.

ಜೋಕಟ್ಟೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಹೋರಾಟ ಸಮಿತಿಯ ಸಂಚಾಲಕ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಚಾಲನೆ ನೀಡಿದರು.

ಈ ವೇಳೆ 62ನೇ ತೋಕೂರು ಗ್ರಾಪಂ ಅಧ್ಯಕ್ಷ ಫಾರೂಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ.ಎಸ್.ಬಶೀರ್, ಗ್ರಾಪಂ ಸದಸ್ಯ ಅಬೂಬಕರ್ ಬಾವ, ಹೋರಾಟ ಸಮಿತಿಯ ಮುಖಂಡರುಗಳಾದ ಚಂದ್ರಶೇಖರ್, ಐತಪ್ಪ ಜೋಕಟ್ಟೆ, ಮನೋಜ್ ನಿರ್ಮುಂಜೆ, ಶೇಖರ್ ನಿರ್ಮುಂಜೆ, ಶ್ರೀನಿವಾಸ್ ಕೆಂಜಾರು, ಲಾನ್ಸಿ ಕಳವಾರು, ಇಕ್ಬಾಲ್ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮದ ಜನವಸತಿಗೆ ತಾಗಿಕೊಂಡು, ಹಸಿರು ವಲಯ ನಿರ್ಮಿಸದೆ ಅಪಾಯಕಾರಿ ಕೋಕ್ ಸಲ್ಫರ್ ಘಟಕ ಸ್ಥಾಪಿಸಿರುವುದರಿಂದ ಸುತ್ತಲ ಗ್ರಾಮಗಳಲ್ಲಿ ಅಸಹನೀಯ ಪರಿಸ್ಥಿತಿ ಉಂಟಾಗಿದೆ. ಗ್ರಾಮಸ್ಥರು ರೋಗ ರುಜಿನಗಳಿಂದ ಬಳಲುತ್ತಿದ್ದಾರೆ. ಅಂತರ್ಜಲ ಹಾಳಾಗಿ ಬಾವಿಗಳ ನೀರು ಬಳಕೆಗೆ ಅನರ್ಹಗೊಂಡಿವೆ. ಶಬ್ದ, ವಾಯು ಮಾಲಿನ್ಯಗಳು ವಿಪರೀತವಾಗಿವೆ. ಇಂತಹ ಅಸಹನೀಯ ಮಾಲಿನ್ಯದ ವಿರುದ್ದ 2015, 16 ನೇ ಇಸವಿಯಲ್ಲಿ ಗ್ರಾಮಸ್ಥರು ತೀವ್ರರೀತಿಯ ಹೋರಾಟ ಸಂಘಟಿಸಿದ್ದರು. ಅದರ ಪರಿಣಾಮ ರಾಜ್ಯ ಸರಕಾರ ಆರು ಅಂಶಗಳ ಪರಿಹಾರ ಕ್ರಮಗಳನ್ನು ಕಾಲಮಿತಿಯಲ್ಲಿ ನಡೆಸಲು ಕಂಪೆನಿಗೆ ಆದೇಶಿಸಿತ್ತು. ಆದರೆ ಆರು ಅಂಶಗಳಲ್ಲಿ ಐದು ಅಂಶಗಳನ್ನು ಅರಬರೆಯಾಗಿ ಕಂಪೆನಿ ಜಾರಿಗೊಳಿಸಿದೆ. ಆದರೂ ಮಾಲಿನ್ಯದ ಪ್ರಮಾಣ ಕಡಿಮೆಯಾಗಿಲ್ಲ. ಆರು ಅಂಶಗಳಲ್ಲಿ ಪ್ರಧಾನವಾಗಿರುವ ಜನವಸತಿ ಭಾಗದಲ್ಲಿ 27 ಎಕರೆ ಹಸಿರು ವಲಯ ನಿರ್ಮಾಣವನ್ನು ಜಮೀನು ಗುರುತಿಸಿ ವರ್ಷಗಳು ದಾಟಿದರೂ ಆದೇಶವನ್ನು ಕಂಪೆನಿ ಜಾರಿಗೊಳಿಸದೆ ತಪ್ಪಿಸಿಕೊಳ್ಳುತ್ತಿದೆ. ಅದಲ್ಲದೆ ಕಂಪೆನಿಯ ನೇಮಕಾತಿಯಲ್ಲಿ ಸ್ಥಳೀಯರನ್ನು ಪೂರ್ತಿಯಾಗಿ ಹೊರಗಿಡಲಾಗುತ್ತಿದೆ ಎಂದು ಸ್ಥಳೀಯರ ಆರೋಪ. ಇದರ ವಿರುದ್ಧ ಸ್ಥಳೀಯ ಗ್ರಾಮಸ್ಥರು MRPL ಕಂಪೆನಿ ವಿರುದ್ಧ ಮನೆಮನೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

Similar News