×
Ad

ದೇಶಗಳಲ್ಲಿ ಉದ್ಯೋಗ ಪಡೆಯಲು ವಲಸೆ ಕೇಂದ್ರದ ನೆರವು ಪಡೆಯಿರಿ: ಕಿರಣ್ ಪೆಡ್ನೇಕರ್

Update: 2023-02-09 21:58 IST

ಉಡುಪಿ: ವಿದೇಶಗಳಿಗೆ ಉದ್ಯೋಗ ಅರಸಿ ತೆರಳಿದಾಗ ಅಲ್ಲಿ ಉಂಟಾಗುವ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಲು ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಇದ್ದಾಗ ಮಾತ್ರ ಅವುಗಳನ್ನು ಎದುರಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹೇಳಿದ್ದಾರೆ.

ಗುರುವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ,  ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಜಾರಿಗೊಳಿಸುತ್ತಿರುವ ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಕುರಿತು ಭಾಗೀದಾರಿ ಇಲಾಖೆಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಇತ್ತೀಚಿನ ದಿನಗಳಲ್ಲಿ ವಿದೇಶಗಳಿಗೆ ಉದ್ಯೋಗ ಅರಿಸಿ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಇವರುಗಳಲ್ಲಿ ಉನ್ನತ ಹುದ್ದೆಗಳನ್ನು ಅರಸಿ ಹಾಗೂ ಕಾರ್ಮಿಕ ಕೆಲಸಕ್ಕೂ ಸಹ ಹೋಗುತ್ತಿದ್ದಾರೆ. ಪರದೇಶಗಳಲ್ಲಿ ಅಲ್ಲಿನ ಕಾನೂನು ಸೇರಿದಂತೆ ಮತ್ತಿತರ ನಿಯಮಗಳ ಬಗ್ಗೆ ಮಾಹಿತಿಗಳ ಕೊರತೆಯಿಂದ ಕೆಲವೊಮ್ಮೆ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಗಳಿವೆ. ಇವುಗಳನ್ನು ಪರಿಹರಿಸಲು ಸರಕಾರ ಯೋಜನೆ ರೂಪಿಸಿದೆ ಎಂದರು.

ಅಸಂಘಟಿತ ಕಾರ್ಮಿಕರು ಸಾಗರೋತ್ತರ ಪ್ರದೇಶಗಳಲ್ಲಿ ಕೆಲಸವನ್ನು ಮಾಡಲು ಅನುಕೂಲವಾಗುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯು ಕಾರ್ಮಿಕರಿಗಾಗಿ ಅನೇಕ ಸೇವೆಗಳನ್ನು ಒದಗಿಸಿದೆ. ಕಾರ್ಮಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.

ನಿವೃತ್ತ ಉದ್ಯೋಗ ವಿನಿಮಯ ಅಧಿಕಾರಿ ಹಾಗೂ  ಸಮಾಲೋಚಕ  ಡಾ.ಕೆ.ವಿ.ಸ್ವಾಮಿ ಮಾತನಾಡಿ, ವಿದೇಶಗಳಲ್ಲಿ ವೃತ್ತಿ ನಿರ್ವಹಿಸುತ್ತಿರುವವರು ಈ ಹಿಂದೆ ಅನೇಕ ರೀತಿಯ ಸಮಸ್ಯೆಗಳಿಗೆ ಒಳಗಾಗಿ ಕಷ್ಟವನ್ನು ಅನುಭವಿ ಸಿರುವುದನ್ನು ಅರಿತು ಸರಕಾರ ಕಾರ್ಮಿಕರ ಒಳಿತಿಗಾಗಿ ನಿಯಮಾವಳಿಗಳನ್ನು ರೂಪಿಸಿದೆ ಎಂದರು.

ಸರಕಾರದ ಅಧಿಕೃತ ಸಂಸ್ಥೆಗಳ ಮೂಲಕ ಉದ್ಯೋಗಗಳನ್ನು ನಿರ್ವಹಿಸಲು ಅನ್ಯ ದೇಶಗಳಿಗೆ ತೆರಳಿದ ಸಂದರ್ಭದಲ್ಲಿ ಕಾನೂನಾತ್ಮಕವಾಗಿ ಎಲ್ಲಾ ರೀತಿಯ ಪರಿಹಾರಗಳನ್ನು ಪಡೆಯಲು ಸಾಧ್ಯ. ಆದರೆ ಕೆಲವರು  ಖಾಸಗಿ ಸಂಸ್ಥೆಯ ಮಧ್ಯಸ್ಥಿಕೆಯೊಂದಿಗೆ ಹೋಗಿ, ತೊಂದರೆ ಅನುಭವಿಸಿದ್ದಾರೆ ಎಂದರು.

ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಕಾರ್ಯಕ್ರಮ ವ್ಯವಸ್ಥಾಪಕಿ ಸಂಗೀತಾ ಅವರು ವಿದೇಶ ಪ್ರಯಾಣ,  ನೇಮಕಾತಿ, ಪೂರ್ವ ನಿರ್ಗಮನ, ವಿದೇಶದಲ್ಲಿ ಕೆಲಸ ಹಾಗೂ ಅಲ್ಲಿಂದ ವಾಪಸಾತಿ ಆಗುವ ಬಗ್ಗೆ ಸವಿವರ ಮಾಹಿತಿ ನೀಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಮಾತನಾಡಿ, ವಿದೇಶಗಳಲ್ಲಿ ಭಾರತೀಯ ಕಾರ್ಮಿಕರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪರದೇಶಗಳಲ್ಲಿ ವೃತ್ತಿ ನಿರ್ವಹಿಸುವಾಗ ಜಾಗೃತಿ ವಹಿಸುವುದು ಕಾರ್ಮಿಕರ ಆದ್ಯ ಕರ್ತವ್ಯ. ಸರ್ಕಾರ ಇವರುಗಳಿಗೆ ಅನುಕೂಲ ಮಾಡಿಕೊಡಲು ಹಾಗೂ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ವಿವಿಧ ನರ್ಸಿಂಗ್ ಕಾಲೇಜುಗಳ ಪ್ರಾಂಶುಪಾಲರು, ಕಾರ್ಮಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Similar News