ಆಂಧ್ರದ ರಾಜ್ಯಪಾಲರಾಗಿ ಕನ್ನಡಿಗ
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ, ಕನ್ನಡಿಗ, ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವ ರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ರವಿವಾರ ನೇಮಿಸಿದ್ದಾರೆ. 6 ವರ್ಷಗಳ ಸೇವೆಯ ಬಳಿಕ ಇದೇ ವರ್ಷ ಜನವರಿ 4 ರಂದು ನ್ಯಾ. ಅಬ್ದುಲ್ ನಝೀರ್ ಅವರು ಸುಪ್ರೀಂ ಕೋರ್ಟ್ನಿಂದ ನಿವೃತ್ತ ರಾಗಿದ್ದರು. ಈ ಅವಧಿಯಲ್ಲಿ ಅವರು 458 ಪೀಠಗಳ ಭಾಗ ವಾಗಿ 93 ತೀರ್ಪುಗಳನ್ನು ನೀಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಕಾನ ಗ್ರಾಮದ ಜಸ್ಟಿಸ್ ಎಸ್. ಅಬ್ದುಲ್ ನಝೀರ್ ಅವರು ಜನವರಿ5 , 1958 ರಂದು ಫಕೀರ್ ಸಾಬ್ ಹಾಗೂ ಹಮೀದಾಬಿದಂಪತಿಯ ಪುತ್ರನಾಗಿ ಜನಿಸಿದರು. ಇವರಿಗೆ ನಾಲ್ಕು ಸೋದರರು, ಒಬ್ಬರು ಸೋದರಿ. ಮೂಡುಬಿದಿರೆಯ ಅಲಂಗಾರಿನ ಸಂತ ಥೋಮಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಜೈನ್ ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣ ಹಾಗೂ ಮಹಾವೀರ ಕಾಲೇಜಿನಲ್ಲಿ ಪದವಿ ಪಡೆದ ಅವರು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ನ್ಯಾ.ನಝೀರ್ ಅವರು 1983ರಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ವಕೀಲಿಕೆ ಆರಂಭಿಸಿದರು. ಎರಡು ದಶಕಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಅವರು ಮೇ 2003ರಲ್ಲಿ, ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ವಾದರು. ಒಂದು ವರ್ಷದ ಬಳಿಕ ಹೈಕೋರ್ಟ್ನ ಖಾಯಂ ನ್ಯಾಯಾಧೀಶರಾದರು.
ಫೆಬ್ರವರಿ 2017ರಲ್ಲಿ, ಅವರು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಪಡೆದರು. ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗದೆಯೇ ಸುಪ್ರೀಂಕೋರ್ಟ್ ಗೆ ಪದೋನ್ನತಿ ಪಡೆದ ಕೇವಲ ಮೂರನೇ ನ್ಯಾಯಾಧೀಶ ನ್ಯಾ. ನಝೀರ್. ಸುಪ್ರೀಂ ಕೋರ್ಟ್ನಲ್ಲಿ ಹಲವು ಮಹತ್ವದ ಪ್ರಕರಣಗಳ ತೀರ್ಪು ನೀಡಿದ ಪೀಠದ ಭಾಗವಾಗಿ ನ್ಯಾ. ನಝೀರ್ ಅವರು ಸುದ್ದಿಯಾಗಿದ್ದರು. ಆ ಪೈಕಿ ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದ ತೀರ್ಪು, ಅಯೋಧ್ಯೆ-ಬಾಬರಿ ಮಸೀದಿ ವಿವಾದದ ತೀರ್ಪು, ನೋಟು ನಿಷೇಧ ಕ್ರಮವನ್ನು ಎತ್ತಿ ಹಿಡಿದ ತೀರ್ಪು, ಖಾಸಗಿತನ ಮೂಲಭೂತ ಹಕ್ಕು ಎಂದ ತೀರ್ಪುಗಳು ಪ್ರಮುಖವಾದ ವುಗಳು. ಅವರು ನಿವೃತ್ತರಾಗುವ ಮೊದಲು ಅವರ ನೇತೃತ್ವದ ಸಾಂವಿಧಾನಿಕ ಪೀಠ 2016 ರ ಕೇಂದ್ರ ಸರಕಾರದ ನೋಟು ರದ್ದತಿ ತೀರ್ಮಾನವನ್ನು ಎತ್ತಿ ಹಿಡಿದಿತ್ತು. ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಿಂದ ಬಂದ ನ್ಯಾ. ನಝೀರ್ ಅವರು ವಕೀಲರಾಗಿ ವೃತ್ತಿ ಜೀವನ ಆರಂಭಿಸಿ ಹಂತಹಂತವಾಗಿ ಮೇಲೇರುತ್ತಾ ನ್ಯಾಯಾಂಗದಲ್ಲಿ ಉನ್ನತ ಸ್ಥಾನಕ್ಕೆ ತಲುಪಿದವರು. ಅವರು ನಿವೃತ್ತರಾಗುವಾಗ ಸುಪ್ರೀಂ ಕೋರ್ಟ್ನ ಮೂರನೇ ಅತ್ಯಂತ ಹಿರಿಯ ಜಡ್ಜ್ ಹಾಗೂ ಪ್ರತಿಷ್ಠಿತ ಸುಪ್ರೀಂ ಕೋರ್ಟ್ ಕೊಲಿಜಿಯಂನ ಸದಸ್ಯ ರಾಗಿದ್ದರು. ನ್ಯಾಯಾಂಗದಲ್ಲಿ ತಾನು ಕ್ರಮಿಸಿದ ಹಾದಿ ಯನ್ನು ಒಂದು ಕನಸನ್ನೇ ಜೀವಿಸಿದ ಹಾಗೆ ಎಂದವರು ನಿವೃತ್ತರಾಗುವಾಗ ಬಣ್ಣಿಸಿದ್ದರು. ಅವರನ್ನು ಸುಪ್ರೀಂ ಕೋರ್ಟ್ ನಿಂದ ಬೀಳ್ಕೊಡು ವಾಗ ದೇಶದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರ ಚೂಡ್ ಅವರು ನ್ಯಾ. ಅಬ್ದುಲ್ ನಝೀರ್ ಅವರು ಅತ್ಯಂತ ಸರಳ ವ್ಯಕ್ತಿತ್ವದವರು. ತೀರಾ ಇತ್ತೀಚಿನವರೆಗೂ ಡ್ರೈವಿಂಗ್ ಲೈಸೆನ್ಸ್ ಹಾಗೂ ನ್ಯಾಯಾಧೀಶರ ಗುರುತಿನ ಚೀಟಿಗಳೇ ಅವರಿಗೆ ಐಡಿಗಳಾಗಿದ್ದವು. ಅವರು ಪಾಸ್ ಪೋರ್ಟ್ ಮಾಡಿದ್ದೇ 2019 ರಲ್ಲಿ. ಕೆಲವು ವಾರಗಳ ಹಿಂದೆ ಮಾಸ್ಕೊಗೆ ಹೋಗಿದ್ದೇ ಅವರ ಮೊದಲ ವಿದೇಶ ಪ್ರವಾಸ ಎಂದು ಬಣ್ಣಿಸಿದ್ದರು. ನಿವೃತ್ತರಾದ ಬಳಿಕ ಪತ್ನಿ ಸಮೀರಾ ಜೊತೆ ಬೆಂಗಳೂರಿನಲ್ಲಿ ವಾಸವಿದ್ದ ಅವರನ್ನು ಇದೀಗ ಆಂಧ್ರ ಪ್ರದೇಶದ ರಾಜ್ಯಪಾಲ ಹುದ್ದೆ ಅರಸಿಕೊಂಡು ಬಂದಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರನ್ನು ಕೇರಳ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. ಅದಕ್ಕೂ ಮೊದಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದ ಫಾತಿಮಾ ಬೀವಿ ಅವರು ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ನ್ಯಾ. ನಝೀರ್ ಅವರ ಪುತ್ರ ಅಖಿಲ್ ಹಾಗು ಪುತ್ರಿ ಇರ್ಫಾನ ಕರ್ನಾಟಕ ಹೈಕೋರ್ಟ್ನಲ್ಲಿ ವಕೀಲರಾಗಿದ್ದಾರೆ.