ದೇರಳಕಟ್ಟೆ: ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆ ಆವರಣದ 164 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ
ಕೊಣಾಜೆ, ಫೆ.14: ತ್ಯಾಗ, ಬಲಿದಾನ, ಶೌರ್ಯ, ಆತ್ಮಸ್ಥೈರ್ಯ, ಶಾಂತಿ, ಸೌಹಾರ್ದ, ಸಮನ್ವಯತೆ, ಬಹು ಸಂಸ್ಕೃತಿಯ ಆಶಯಗಳು ರಾಷ್ಟ್ರಧ್ವಜದ ಮೂಲಕ ಎಲ್ಲರಲ್ಲೂ ನೆಲೆಗೊಳ್ಳುವುದು ಎಂದು ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ ಹೇಳಿದ್ದಾರೆ.
ಅವರು ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿದ ಕರಾವಳಿ ಕರ್ನಾಟಕದ ಅತಿ ಎತ್ತರದ 164 ಅಡಿ ಉದ್ದದ ರಾಷ್ಟ್ರಧ್ವಜ ಸ್ತಂಭದಲ್ಲಿ ಮಂಗಳವಾರ ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ದೇಶವನ್ನು ಉದಾತ್ತ ಮೌಲ್ಯಗಳ ಮೂಲಕ ಮೊದಲ ಸ್ಥಾನದಲ್ಲಿರಿಸುವ ಚಿಂತನೆಗಳು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡ ರಾಷ್ಟ್ರ ಧ್ವಜಾರೋಹಣದಂತಹ ಪವಿತ್ರವಾದ ಕಾರ್ಯದ ಮೂಲಕ ಸಾಧ್ಯವಾಗಲಿದೆ ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ, ಸಂಸ್ಥೆ ಪರಿಸರದಲ್ಲಿ 24 ವರ್ಷಗಳಿಂದ ಆಸ್ಪತ್ರೆಯನ್ನು ನಡೆಸಿಕೊಂಡು ಬರುತ್ತಿದೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸಂಸ್ಥೆಯಲ್ಲಿ ಬೃಹತ್ ರಾಷ್ಟ್ರಧ್ವಜದ ಅನಾವರಣ ಆಗಿರುವುದು ಗೌರವ ತಂದಿದೆ. ಪ್ರತಿ ವಿದ್ಯಾರ್ಥಿಗಳು ಸಂಸ್ಥೆ ಒಳಬರುವಾಗ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ನೀಡಿ ಪ್ರವೇಶಿಸಿ ಕಾರ್ಯಗಳಲ್ಲಿ ಭಾಗಿಯಾಗಿ. ಗಾತ್ರ ಎಷ್ಟಾದರೂ ವಿಚಾರವಲ್ಲ, ರಾಷ್ಟ್ರಧ್ವಜದ ಮಹತ್ವ ಬಹುಮುಖ್ಯ ಎಂದರು.
ಈ ಸಂದರ್ಭ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ ಸಹಕುಲಾಧಿಪತಿ ವಿಶಾಲ್ ಹೆಗ್ಡೆ, ಸಹಕುಲಾಧಿಪತಿ ಡಾ.ಎಂ.ಶಾಂತರಾಮ ಶೆಟ್ಟಿ, ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ಹಣಕಾಸು ವಿಭಾಗದ ನಿರ್ದೇಶಕ ರಾಜೇಂದ್ರ ಎಂ. ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಕಾರ್ಯಕ್ರಮ ನಿರೂಪಿಸಿದರು.