×
Ad

‘ನಮ್ಮ ಕುಂದಾಪುರ’ ಫೇಸ್‌ಬುಕ್ ಗ್ರೂಪ್‌ನಿಂದ 'ಸ್ನೇಹ ಸಹಮಿಲನ'

Update: 2023-02-19 16:11 IST

ಕುಂದಾಪುರ, ಫೆ.19: ‘ನಮ್ಮ ಕುಂದಾಪುರ’ ಫೇಸ್‌ಬುಕ್ ಗ್ರೂಪ್ ಸದಸ್ಯರ ’ಸ್ನೇಹ ಸಹಮಿಲನ’ ಕಾರ್ಯಕ್ರಮವು ಇತ್ತೀಚೆಗೆ ಕುಂದಾಪುರದ ನಗು ಫ್ಯಾಲೇಸ್ ಹೋಟೇಲಿನಲ್ಲಿ ಜರುಗಿತು.

 ಗ್ರೂಪ್ ಸದಸ್ಯರನ್ನು ಒಗ್ಗೂಡಿಸುವ ಹಾಗೂ ಪರಸ್ಪರ ಪರಿಚಯಿಸಿ ಕುಟುಂಬ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಸಹಮಿಲನ ಕಾರ್ಯ ಕ್ರಮವನ್ನು ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

‘13 ವರ್ಷದ ಹಿಂದೆ ಫೇಸ್‌ಬುಕ್ ಆರಂಭದ ದಿನಗಳಲ್ಲಿ ’ನಮ್ಮ ಕುಂದಾಪುರ’ ಗ್ರೂಪ್ ರಚಿಸಿ ಕುಂದಾಪುರದ ಸೊಗಡು, ಪ್ರಪಂಚದ ವಿವಿಧೆಡೆ ನೆಲೆಸಿದ ಕುಂದಾಪುರದವರನ್ನು ಬೆಸೆಯುವ ತಳಹದಿಯಾಗಿ ಮಾಡಲಾಯಿತು. ಬರಬರುತ್ತಾ ಗ್ರೂಪಿಗೆ ಸೇರುವ ಸದಸ್ಯರ ಸಂಖ್ಯೆ ಕೂಡ ಹೆಚ್ಚಿತು. ಭಾರತ ಮಾತ್ರವಲ್ಲದೆ ಅಮೆರಿಕಾ, ಗಲ್ಫ್ ರಾಷ್ಟ್ರದಲ್ಲಿಯೂ ಗ್ರೂಪ್ ಸದಸ್ಯರಿದ್ದಾರೆ. ಊರಿನ ವಿಚಾರ, ಆಚಾರ, ಕಲೆ, ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ರಾಜಕೀಯ, ನಿಂದನೆಗೆ ಗ್ರೂಪಿನಲ್ಲಿ ಮುಲಾಜಿಲ್ಲದೆ ಅವಕಾಶ ನಿರಾಕರಿಸಿದ್ದೇವೆ’ ಎಂದು ಗ್ರೂಪ್ ಅಡ್ಮಿನ್ ರಾಧಾಕೃಷ್ಣ ಶೆಟ್ಟಿ ತಿಳಿಸಿದರು.

‘10 ವರ್ಷಗಳ ಹಿಂದೆ ರಾಧಾಕೃಷ್ಣ ಶೆಟ್ಟಿಯವರ ನಮ್ಮ ಕುಂದಾಪುರ ಫೇಸ್‌ಬುಕ್ ಗ್ರೂಪ್ ಸೇರಿದ್ದೆ. ಬಳಿಕ ಬೆಂಗಳೂರು, ಮೈಸೂರು, ಕುಂದಾಪುರ ಸಹಿತ ವಿವಿಧೆಡೆ ನಡೆದ 6-7 ಸ್ನೇಹ ಸಹಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕುಟುಂಬದ ವಾತಾವರಣವಿದೆ. ವಿವಿಧೆಡೆ ಇರುವ ಕುಂದಾಪುರದವರ ಪರಿಚಯ, ಸ್ನೇಹ ವಾಗುತ್ತದೆ. ಗ್ರೂಪ್ ಮೂಲಕವಾಗಿ ಕುಂದಾಪ್ರ ಕನ್ನಡಕ್ಕೂ ಹೆಚ್ಚಿನ ಒತ್ತು ಸಿಗುತ್ತಿದೆ’ ಎಂದು ಝಹೀರ್ ಅಹ್ಮದ್ ನಾಕುದಾ ಗಂಗೊಳ್ಳಿ ಹೇಳಿದರು.

ನಮ್ಮ ಕುಂದಾಪುರ ಫೇಸ್ ಬುಕ್ ಗ್ರೂಪ್ ಅಡ್ಮಿನ್ ರಾಧಾಕೃಷ್ಣ ಶೆಟ್ಟಿ, ಕರುಣಾಕರ್, ಗಿರಿಧರ್ ಶೆಟ್ಟಿ, ತಲ್ಲೂರು ನಾರಾಯಣ ಶೆಟ್ಟಿ, ಲಲಿತಾ ವಾರಂಬಳ್ಳಿ ವೇದಿಕೆಯಲ್ಲಿದ್ದರು.

ಕನ್ನಡ ತುಳು ಸಾಹಿತ್ಯ ತುಳು ಬಳಗದ ವತಿಯಿಂದ ರಾಧಾಕೃಷ್ಣ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಪುಂಡಲೀಕ ಪೂಜಾರಿ ಆಜ್ರಿ ಕಾರ್ಯಕ್ರಮ ನಿರೂಪಿಸಿದರು.


ಗ್ರೂಪಿನಲ್ಲಿ 2.36 ಲಕ್ಷಕ್ಕೂ ಅಧಿಕ ಸದಸ್ಯರು!

ಊರಭಿಮಾನ, ಭಾಷಾಭಿಮಾನ, ಆಚಾರ-ವಿಚಾರಗಳನ್ನು ತಿಳಿಸುವ ಹಾಗೂ ಕಲೆ, ಸಂಸ್ಕೃತಿಯ ಬೆಳೆಸುವಿಕೆ ಮತ್ತು ಉಳಿಸುವಿಕೆಯ ಉದ್ದೇಶದಿಂದ 2010ರಲ್ಲಿ ಮೂಲತಃ ಕುಂದಾಪುರದ ರಾಧಾಕೃಷ್ಣ ಶೆಟ್ಟಿ ನಮ್ಮ ಕುಂದಾಪುರ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಗ್ರೂಪ್ ರಚಿಸಿದ್ದರು. ಈ ಗ್ರೂಪ್ ಸದಸ್ಯರ ಸಂಖ್ಯೆ ಬರೋಬ್ಬರಿ 2.36 ಲಕ್ಷಕ್ಕೂ ಅಧಿಕ. ಭಾರತ ದೇಶ ಸಹಿತ, ಗಲ್ಫ್ ರಾಷ್ಟ್ರ ಹಾಗೂ ಅಮೆರಿಕದಲ್ಲೂ ಈ ಗ್ರೂಪ್‌ ಸದಸ್ಯರು ಸಕ್ರಿಯರಾಗಿದ್ದಾರೆ. ಈವರೆಗೆ ಕುಂದಾಪುರದಲ್ಲಿ 7 ಬಾರಿ, ಅಮೆರಿಕದಲ್ಲಿ 7, ಮುಂಬೈ ಹಾಗೂ ಮೈಸೂರಿನಲ್ಲಿ ತಲಾ ಒಂದು ಬಾರಿ, ಬೆಂಗಳೂರಿನಲ್ಲಿ ಒಟ್ಟು 26 ಸದಸ್ಯರ ಸ್ನೇಹ ಸಹಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Similar News