×
Ad

ಡಾ. ರೊನಾಲ್ಡ್‌ ಕೊಲಾಸೊ ಅವರಿಗೆ ಫೆ 24 ರಂದು ನಗರದಲ್ಲಿ ನಾಗರಿಕ ಸನ್ಮಾನ

ಲಂಡನ್‌ ನ ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ ನಿಂದ ಶ್ರೇಷ್ಠತಾ ಪ್ರಮಾಣಪತ್ರ ಪಡೆದ ಕೊಡುಗೈ ದಾನಿ

Update: 2023-02-20 12:22 IST

ಮಂಗಳೂರು: ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ್ ನಿಂದ ಶ್ರೇಷ್ಠತಾ ಪ್ರಮಾಣ ಪತ್ರ ಪಡೆದಿರುವ ಖ್ಯಾತ ಎನ್ನಾರೈ ಉದ್ಯಮಿ ಹಾಗೂ ದಾನಿ ಡಾ.ರೊನಾಲ್ಡ್ ಕೊಲಾಸೊ ಅವರನ್ನು ಫೆ.24, ಶುಕ್ರವಾರದಂದು ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಅವರ ಸಾಮಾಜಿಕ ಮತ್ತು ಚ್ಯಾರಿಟಿ ಕಾರ್ಯಗಳನ್ನು ಗುರುತಿಸಿ ಹಾಗೂ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಿಂದ ಶ್ರೇಷ್ಠತೆಯ ಪ್ರಮಾಣಪತ್ರವನ್ನು ಪಡೆದ ಇತ್ತೀಚಿನ ಸಾಧನೆಗಾಗಿ ಮಂಗಳೂರಿನ ನಾಗರಿಕರ ಪರವಾಗಿ ಅವರಿಗೆ ಈ ನಾಗರಿಕ ಸನ್ಮಾನವನ್ನು ಏರ್ಪಡಿಸಲಾಗಿದೆ.

 ಬೆಂಗಳೂರು ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಅತಿ ವಂದನೀಯ ಡಾ. ಪೀಟರ್‌ ಮಚಾದೋ ಹಾಗೂ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ, ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ ಆರ್‌ ಲೋಬೋ ಅವರ ನೇತೃತ್ವದ ಸನ್ಮಾನ ಸಮಿತಿ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್‌ ಪೌಲ್‌ ಸಲ್ದಾನ, ರಾಮಕೃಷ್ಣ ಮಠ ಮಂಗಳೂರು ಇದರ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್.‌ ಯೆನಪೋಯ ವಿವಿ ಚಾನ್ಸಲರ್ ಡಾ. ಅಬ್ದುಲ್ಲ ಕುಂಞಿ, ಉಡುಪಿ ಧರ್ಮಪ್ರಾಂತ್ಯದ ಬಿಷಪ್‌ ಅತಿ ವಂ. ಡಾ ಜೆರಾಲ್ಡ್‌ ಐಸಾಕ್‌ ಲೋಬೋ, ಸಿಎಸ್‌ಐ ಕರ್ನಾಟಕ  ಧರ್ಮಪ್ರಾಂತ್ಯದ ಬಿಷಪ್ ರೈಟ್.‌ ರೆ. ಹೇಮಚಂದ್ರ ಕುಮಾರ್‌, ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಡಾ ಲಾರೆನ್ಸ್‌ ಮುಕ್ಕುಝಿ, ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ ಫ್ರಾನ್ಸಿಸ್‌ ಸೆರ್ರಾವೋ, ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ ಹೆನ್ರಿ ಡಿʼಸೋಜ, ಶಾಸಕ ಯು.ಟಿ.ಖಾದರ್, ನಿಟ್ಟೆ ಡೀಮ್ಡ್‌ ಟು ಬಿ ವಿವಿ ಚಾನ್ಸಲರ್‌ ಡಾ ಎನ್‌ ವಿನಯ್‌ ಹೆಗ್ಡೆ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ತೇಜಸ್ವಿನಿ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಶಾಂತಾರಾಮ ಶೆಟ್ಟಿ, ಮಂಗಳೂರಿನ ಬ್ರಹ್ಮಕುಮಾರಿ ಕೇಂದ್ರದ ರಾಜಯೋಗಿನಿ ಬಿ.ಕೆ.ವಿಶ್ವೇಶ್ವರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ, ರಾಷ್ಟ್ರೀಯ ಬಿಲ್ಲವರ ಮಹಾಮಂಡಳದ ಅಧ್ಯಕ್ಷ ರಾಜಶೇಖರ್‌ ಕೋಟ್ಯಾನ್‌ ಸಮಾರಂಭದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

“ಡಾ. ರೊನಾಲ್ಡ್ ಕೊಲಾಸೊ ಕರ್ನಾಟಕದ  ಹೆಮ್ಮೆಯ ಮಣ್ಣಿನ ಮಗ, ಮಂಗಳೂರಿನ ಹೆಮ್ಮೆ. ಹಲವು ಕ್ಷೇತ್ರಗಳಲ್ಲಿ ಕೈಯ್ಯಾಡಿಸಿ ಯಶಸ್ಸು ಕಂಡವರು.ಚಿಕ್ಕ ವಯಸ್ಸಿನಲ್ಲೇ ಯಶಸ್ಸು ದೊರೆತ ನಂತರ ಅವರು ತಮ್ಮ ಪರೋಪಕಾರಿ ಚಟುವಟಿಕೆಗಳ ಮೂಲಕ ತಮ್ಮ ತಾಯ್ನಾಡಿನೊಂದಿಗೆ ತಮ್ಮ ನಿಕಟ ಸಂಬಂಧವನ್ನು ಮುಂದುವರಿಸಿದರು. ನಮ್ಮವರೇ ಆದ ರೊನಾಲ್ಡ್ ಕೊಲಾಸೊ ಅವರು ಉದ್ಯಮ ಮತ್ತು ಸಮಾಜ ಸೇವೆ ಚಟುವಟಿಕೆಗಳಲ್ಲಿ ಕಳೆದ ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಸಲ್ಲಿಸಿದ ಸೇವೆ ಎಲ್ಲಾ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ," ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಯಾವುದೇ ಬೇಧಭಾವವಿಲ್ಲದೆ ಅವರ ಪರೋಪಕಾರಿ ಮತ್ತು ಸಮಾಜ ಸೇವಾ ಚಟುವಟಿಕೆಗಳು ಸಮಾಜದ ಎಲ್ಲಾ ವರ್ಗಗಳವರಿಗೆ ತಲುಪಿವೆ, ಎಂದೂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಭಿನಂದನಾ ಸಮಿತಿಯ ಉಪಾಧ್ಯಕ್ಷರಾಗಿ ಯು.ಟಿ ಇಫ್ತಿಕಾರ್ ಅಲಿ, ಐವನ್ ಡಿಸೋಜಾ, ರೋಹನ್ ಮೊಂತೇರೊ, ಲೂಯಿಸ್ ಜೆ ಪಿಂಟೋ, ಸುರೇಶ್ ಬಲ್ಲಾಳ್, ವಾಲ್ಟರ್ ನಂದಳಿಕೆ, ಮತ್ತು ಕೆರ್ರಿ ವಿನ್ಸೆಂಟ್ ಡಯಾಸ್ ಇದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಆಸ್ಟಿನ್ ಪೆರೆಸ್ ಮತ್ತು ಸಮಾರಂಭದ ಸಂಚಾಲಕರಾಗಿ ಡೆನಿಸ್ ಡಿಸಿಲ್ವಾ ಸೇವೆ ಸಲ್ಲಿಸುತ್ತಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ ಡಾ. ರೊನಾಲ್ಡ್ ಕೊಲಾಸೊ  1975 ರಲ್ಲಿ ಒಮನ್ ದೇಶದಲ್ಲಿ ಅಕೌಂಟೆಂಟ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದರು. ತಮ್ಮ ದಕ್ಷತೆ ಹಾಗು ನಿಷ್ಠಾವಂತ ದುಡಿಮೆಯಿಂದಾಗಿ ಗಲ್ಫ್ ನ ಎಂಟು ಹಾಗು ಯುರೋಪ್ ನ ಹಲವು ದೇಶಗಳಲ್ಲಿ ಅಕೌಂಟ್ಸ್ ಮುಖ್ಯಸ್ಥರಾಗಿ, ಆಡಳಿತ ವ್ಯವಸ್ಥಾಪಕರಾಗಿ , ಫೈನಾನ್ಷಿಯಲ್ ಕಂಟ್ರೋಲರ್ ಆಗಿ ಭಡ್ತಿ ಪಡೆಯುತ್ತಾ ಹೋದರು. ಗ್ರೀಸ್ ನ ಅಥೆನ್ಸ್ ನಲ್ಲಿರುವ ಸಿಸಿಐಸಿಎಲ್, ಜರ್ಮನಿಯ ಮನ್ನೆಸ್ ಮನ್ ಹಾಗು ಮಿಲಾನೊದ ಸೈಪೇಮ್ ಎಂಬ ಮೂರು ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳ ಒಕ್ಕೂಟದ ಕಮರ್ಷಿಯಲ್ ಸಿಇಒ ಆದರು.

Similar News