ಉಡುಪಿ| ಅಕ್ರಮ ಮರಳುಗಾರಿಕೆ ಧಕ್ಕೆಗೆ ದಾಳಿ: 2 ಟಿಪ್ಪರ್ ವಶ
Update: 2023-02-24 20:55 IST
ಉಡುಪಿ: ಕುಂದಾಪುರ ತಾಲೂಕು ಶಂಕರನಾರಾಯಣ ವ್ಯಾಪ್ತಿಯ ಭರತ್ಕಲ್ ಎಂಬಲ್ಲಿ ವಾರಾಹಿ ನದಿಯಿಂದ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಬಂದ ದೂರಿನ ಹಿನ್ನೆಲೆಯಲ್ಲಿ ಇಲಾಖೆಯ ಹಿರಿಯ ಭೂಜ್ಞಾನಿ ಸಂದೀಪ್ ಜಿ.ಯು ಮಾರ್ಗದರ್ಶನದಲ್ಲಿ ಭೂವಿಜ್ಞಾನಿ ಸಂಧ್ಯಾ ಅವರು ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿ ಮರಳು ಧಕ್ಕೆಯಲ್ಲಿದ್ದ ಎರಡು ಲಾರಿಗಳನ್ನು ವಶಕ್ಕೆ ಪಡೆದುಕೊಂಡರು.
ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಮರಳು ಸಾಗಾಣಿಕೆಗೆ ಬಳಸುತ್ತಿದ್ದ 2 ಲಾರಿ ಹಾಗೂ 5 ಮೆಟ್ರಿಕ್ ಟನ್ ಮರಳನ್ನು ಶಂಕರನಾರಾಯಣ ಪೊಲೀಸ್ ಠಾಣೆ ವಶಕ್ಕೆ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಕಟಣೆ ತಿಳಿಸಿದೆ.