×
Ad

ಕಾಂಗ್ರೆಸ್‌ನಿಂದ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಹುನ್ನಾರ: ಅಣ್ಣಾಮಲೈ ಆರೋಪ

Update: 2023-02-27 17:54 IST

ಉಡುಪಿ, ಫೆ.27: ಮುಂದೆ ಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವುದಕ್ಕೆ ಅಧಿಕಾರಕ್ಕೇರಲು ಯೋಜನೆ ಹಾಕುತ್ತಿದೆ. ಕರ್ನಾಟಕದ ಬಜೆಟ್‌ನ ಶೇ.10ರಷ್ಟು ಹಣವನ್ನು ಮುಂದಿನ ಚುನಾವಣೆಗೆ ಬಳಸುವ ಯೋಚನೆ ಮಾಡುತ್ತಿದೆ ಎಂದು ಕರ್ನಾಟಕ ವಿಧಾನ ಸಭಾ ಚುನಾವಣೆಯ ರಾಜ್ಯ ಸಹ ಉಸ್ತುವಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆರೋಪ ಮಾಡಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಸೊಮವಾರ ಭೇಟಿ ನೀಡಿದ ಅವರು ಜಿಲ್ಲಾ ಬಿಜೆಪಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಹೇಳುತ್ತಿರುವ ಯಾವುದೇ ಉಚಿತ ಭರವಸೆಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಈಗಾಗಲೇ ಉಚಿತ ಯೋಜನೆಗಳು ವಿಫಲವಾಗಿವೆ ಎಂದರು.

ಕಾಂಗ್ರೆಸ್ ಮಾಡುವ ಆರೋಪಗಳಿಗೆ ನಮ್ಮ ಕಾರ್ಯಕರ್ತರು ಉತ್ತರ ನೀಡುವ ಅಗತ್ಯ ಇಲ್ಲ. ಅದರ ಬದಲು ಸಕಾರಾತ್ಮಕವಾಗಿ ಕೆಲಸ ಮಾಡಬೇಕು. ಈ ಬಾರಿ ಉಡುಪಿ ಜಿಲ್ಲೆಯ ಎಲ್ಲ ಐದು ಸೇರಿದಂತೆ ರಾಜ್ಯದ 150 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಿದ್ದೆಯಿಂದ ಎದ್ದ ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ನಿದ್ದೆ ಮಾಡಿ ಹಲ್ಲುಜ್ಜಲು ಹೋಗುವ ಗ್ಯಾಪ್‌ನಲ್ಲಿ ಕಾಂಗ್ರೆಸ್ ಸದಾ ಆರೋಪ ಮಾಡುತ್ತಿದೆ. ಬಾಯಿ ಇರುವುದು ಮಾತಾಡಲು, ಸುಳ್ಳು ಹೇಳಲು ಅಲ್ಲ ಎಂಬುದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕು ಎಂದು ಅವರು ಟೀಕಿಸಿದರು.

ಅಭಿವೃದ್ಧಿಯಲ್ಲಿ ಕರ್ನಾಟಕ ದಕ್ಷಿಣ ಭಾರತದಲ್ಲೇ ಮುಂಚೂಣಿಯಲ್ಲಿದೆ. ಕರ್ನಾಟಕದಿಂದ ಹೊರಗೆ ನಿಂತು ನೋಡಿದಾಗ ಇಲ್ಲಿನ ಅಭಿವೃದ್ಧಿ ತಿಳಿಯುತ್ತದೆ. ನಮ್ಮ ಬಳಿ ಅಭಿವೃದ್ಧಿ ಇದೆ. ಡಬಲ್ ಇಂಜಿನ್ ಸರಕಾರ ಇದೆ. ಶಿಕ್ಷಣ ಮತ್ತು ಜಿಎಸ್‌ಟಿ, ತೆರಿಗೆ ಸಂಗ್ರಹ ಹಾಗೂ ಉದ್ಯಮದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದರು.

ಈ ಸಂದರ್ಭದಲ್ಲಿ  ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಲಿರುವ 5 ಪ್ರಗತಿ ರಥಗಳಿಗೆ ರಾಜ್ಯ ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಚಾಲನೆ ನೀಡಿದರು.

ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನ ಗಣೇಶ್, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಉಡುಪಿ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನೋಹರ್ ಕಲ್ಮಾಡಿ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು. ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿದರು.

Similar News