ಕುಂದಾಪುರ: ಕುಗ್ರಾಮದಲ್ಲಿನ ಸರಕಾರಿ ಶಾಲೆಯ ಅಂದ ಹೆಚ್ಚಿಸಿದ ‘ಬೆಳಕು’ ತಂಡ

Update: 2023-02-27 14:49 GMT

ಕುಂದಾಪುರ: ಕುಂದಾಪುರ ತಾಲೂಕಿನ ಕುಗ್ರಾಮವಾಗಿರುವ ಕೊಡ್ಲಾಡಿ ಗ್ರಾಮದ ಮಾರ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಸುಣ್ಣ-ಬಣ್ಣದಿಂದ ಸಿಂಗಾರಗೊಂಡು ನಳನಳಿಸುತ್ತಿದೆ. ಇದಕ್ಕೆಲ್ಲಾ ಕಾರಣವಾಗಿ ರುವುದು ಬೆಂಗಳೂರಿನ ಬೆಳಕು ತಂಡ.

ಬೆಳಕು ತಂಡದ 21 ಮಂದಿ ಸ್ವಯಂ ಸೇವಕರು ಶಾಲೆಯ ಎರಡು ದಿನಗಳ ಕಾಲ ಸೌಂದರ್ಯೀಕರಣದಲ್ಲಿ ತೊಡಗಿಸಿಕೊಂಡರು. ಸುಮಾರು 60 ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಶಾಲೆ ಇದಾಗಿದ್ದು ಇಡೀ ಶಾಲೆ ಕಟ್ಟಡದ ಒಳಗೆ ಮತ್ತು ಹೊರಗೆ ಸುಣ್ಣ-ಬಣ್ಣ, ಬೋರ್ಡಿಗೆ ಬಣ್ಣ ಬಳಿಯಲಾಗಿದೆ. ಶಾಲೆ ಎದುರಿನ ಗೋಡೆಗೆ ಶಿಕ್ಷಣ ಹಾಗೂ ಮಾಹಿತಿ ಆಧಾರಿತ ಚಿತ್ರಗಳು. ಹೊರಭಾಗದ ಕಂಪೌಂಡ್ ಹಾಗೂ ಶಾಲಾ ಸ್ವಾಗತ ಗೋಪುರಕ್ಕೆ ಬಣ್ಣ ಬಳಿಯುವ ಮೂಲಕ ಇಡೀ ಶಾಲೆಯ ಅಂದ ಹೆಚ್ಚಿಸಲಾಗಿದೆ.

ಶಾಲೆಯ ಹಳೆ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ ಅವರ ಕೋರಿಕೆಯಂತೆ ಬೆಳಕು ತಂಡ ಆಗಮಿಸಿ ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈಗಾಗಾಲೇ ಬೆಂಗಳೂರು, ಮಂಡ್ಯ, ಉತ್ತರಕನ್ನಡ ಸಹಿತ 9 ಶಾಲೆಗಳ ಸೌಂದರ್ಯೀಕರಣ ನಡೆದಿದ್ದು ಮಾರ್ಡಿ ಶಾಲೆ ಹತ್ತನೆಯದ್ದಾಗಿದೆ. ತಂಡದ ವಿನಯ್ ಕೆ.ಆರ್.ಪೇಟೆ ಅವರ ಕೆೃಚಳಕದಿಂದ ಗೋಡೆಗಳ ಮೇಲೆ ಸುಂದರ ವಾದ ಚಿತ್ರಗಳು ಮೂಡಿಬಂದವು.

ಇದರ ಸಮಾರೋಪ ಸಮಾರಂಭವು ರವಿವಾರ ಸಂಜೆ ನಡೆಯಿತು. ಸ್ಥಳೀಯರಾದ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ, ಗ್ರಾಪಂ ಸದಸ್ಯರಾದ ರತ್ನಾಕರ ನಾಯ್ಕ, ಪ್ರವೀಣ್ ಕುಮಾರ್ ಶೆಟ್ಟಿ, ಯೋಗೇಂದ್ರ ನಾಯ್ಕ ಕೊಡ್ಲಾಡಿ, ವಿದ್ಯಾಧರ ಶೆಟ್ಟಿ, ನಿವೃತ್ತ ಯೋಧ ಶಿವರಾಮ ನಾಯ್ಕ, ಉದಯಕುಮಾರ್ ಉಪಸ್ಥಿತರಿದ್ದರು. ಶಾಲೆ ಹಳೆಯ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ ಅವರನ್ನು  ಸನ್ಮಾನಿಸಲಾಯಿತು.

ಮುಖ್ಯೋಪಾಧ್ಯಾಯಿನಿ ಗೌರಿಬಾಯಿ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಂಕರ್ ಬಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರ ಗಜೇಂದ್ರ ನಾಯ್ಕ ವಂದಿಸಿದರು. ಶಿಕ್ಷಕ ಗಣೇಶ್ ಸಿ.ಎನ್. ಕಾರ್ಯಕ್ರಮ ನಿರೂಪಿಸಿದರು.

"ಬೆಳಕು ತಂಡ ಮಾಡುವ ಕೆಲಸ ನಾಲ್ಕು ಜನರಿಗೆ ಪ್ರೇರಣೆಯಾಗಬೇಕು ಎಂಬ ನಿಟ್ಟಿನಲ್ಲಿ ’ಪಯಣದ ಹಾದಿಗೆ ಪ್ರೇರಣೆ’ ಎಂಬ ಟ್ಯಾಗ್ ಲೈನ್ ನೀಡಲಾಗಿದ್ದು, ಇಡೀ ತಂಡ ಕುಟುಂಬದಂತೆ ಕೆಲಸ ಮಾಡುತ್ತಿದ್ದೇವೆ. ಡಾ.ವಿಷ್ಣುವರ್ಧನ್, ಪುನೀತ್ ರಾಜಕುಮಾರ್ ಸಹಿತ ಒಳ್ಳೆ ಕೆಲಸ ಮಾಡುವವರು ನಮ್ಮ ಈ ಕಾರ್ಯಕ್ಕೆ ಪ್ರೇರಣೆ. ದುಡಿಮೆಯ ಹಣದಲ್ಲಿ ತಿಂಗಳಿಗೊಮ್ಮೆ ವಿವಿಧ  ರೀತಿ ಯಾದ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತೇವೆ. ಸದಸ್ಯರೆಲ್ಲರ ಕುಟುಂಬ ದವರ ಪ್ರೋತ್ಸಾಹ ಮತ್ತು ಸಹಕಾರವಿದೆ".
-ಶಿವಕುಮಾರ್, ಬೆಳಕು ತಂಡದ ಸದಸ್ಯ

Similar News